ಜನಾದೇಶವೇ ಸರ್ವೋಚ್ಚ: ಬಂಗಾಳದಲ್ಲಿ ಬಿಜೆಪಿ ಗೆಲುವಿನ ಕುರಿತು ಮಹುವಾ ಮೊಯಿತ್ರಾ

Picture of Savistara

Savistara

Bureau Report

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ಪಕ್ಷವು (ಟಿಎಂಸಿ) ಹಿನ್ನಡೆ ಅನುಭವಿಸಿದ ಕುರಿತು ಸಂಸದೆ ಮಹುವಾ ಮೊಯಿತ್ರಾ ಪ್ರತಿಕ್ರಿಯಿಸಿದ್ದಾರೆ.

‘ಜನರ ಇಚ್ಛೆಯೇ ಸರ್ವೋಚ್ಚ. ಬಂಗಾಳಕ್ಕೆ ಬಿಜೆಪಿ ಬೇಕೆಂದಿದ್ದರೆ, ಬಿಜೆಪಿಗೆ ಅಧಿಕಾರ ಸಿಕ್ಕಿದೆ. ನಾವು ಜನಾದೇಶವನ್ನು ಗೌರವಿಸುತ್ತೇವೆ. ಅಲ್ಲದೆ, ಜಾತ್ಯತೀತ ರಾಷ್ಟ್ರಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಮೊಯಿತ್ರಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.’ಹಲವು ಅಡೆತಡೆಗಳ ನಡುವೆಯೂ ನಾವು ಅತ್ಯುತ್ತಮವಾಗಿ ಹೋರಾಡಿದ್ದೇವೆ. ಇದಕ್ಕಾಗಿ ನಮ್ಮ ನಾಯಕಿ (ಮಮತಾ ಬ್ಯಾನರ್ಜಿ) ಮತ್ತು ಪಕ್ಷದ ಬಗ್ಗೆ ಹೆಮ್ಮೆಪಡುತ್ತೇನೆ. ಸಂವಿಧಾನವೇ ಅಂತಿಮ ಪದವಾಗಿರಬೇಕೇ ಹೊರತು ಕೇವಲ ಬಹುಸಂಖ್ಯಾತವಾದವಲ್ಲ ಎಂಬ ತತ್ವ ಮತ್ತು ಜಾತ್ಯತೀತ ದೇಶಕ್ಕಾಗಿ ಟಿಎಂಸಿ ಸದಾ ಹೋರಾಡಲಿದೆ’ ಎಂದು ಅವರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಇತಿಹಾಸ ಸೃಷ್ಟಿಸಿದ್ದು, ಟಿಎಂಸಿಯ 15 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿ ಮೂರನೇ ಎರಡರಷ್ಟು ಬಹುಮತವನ್ನು ಪಡೆದಿದೆ.

ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮೇ 9ರಂದು ನಡೆಯಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಮೀಕ್ ಭಟ್ಟಾಚಾರ್ಯ ತಿಳಿಸಿದ್ದಾರೆ.ಸುವೇಂದು ಅಧಿಕಾರಿ, ದಿಲೀಪ್ ಘೋಷ್, ಸಮಿಕ್ ಭಟ್ಟಾಚಾರ್ಯ, ಅಗ್ನಿಮಿತ್ರ ಪೌಲ್ ಅವರ ಹೆಸರು ಮುಖ್ಯಮಂತ್ರಿ ರೇಸ್‌ನಲ್ಲಿ ಕೇಳಿಬರುತ್ತಿದೆ.

[t4b-ticker]
error: Content is protected !!