ಮಹಾಕುಂಭ ಮೇಳ ಯಶಸ್ವಿ: 75 ಸಾವಿರ ಪೊಲೀಸರಿಗೆ ಹತ್ತು ಸಾವಿರ ಬೋನಸ್,7 ದಿನ ರಜೆ ಘೋಷಿಸಿದ ಸಿಎಂ ಯೋಗಿ ಆದಿತ್ಯನಾಥ್

Picture of Savistara

Savistara

Bureau Report

ಪ್ರಯಾಗ್‌ರಾಜ್‌: ಮಹಾಕುಂಭ ಮೇಳದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ 75 ಸಾವಿರ ಪೊಲೀಸರಿಗೆ ತಲಾ ₹10 ಸಾವಿರ ಬೋನಸ್ ಹಾಗೂ ಏಳು ದಿನ ರಜೆ ನೀಡುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಘೋಷಿಸಿದ್ದಾರೆ.

‘ಐತಿಹಾಸಿ ಮಹಾಕುಂಭ ಮೇಳವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಪೊಲೀಸರು ಮಹತ್ವದ ಪಾತ್ರ ವಹಿಸಿದ್ದಾರೆ.ಅತ್ಯಂತ ಶಿಸ್ತಿನಿಂದ ಕರ್ತವ್ಯ ನಿರ್ವಹಿಸಿದ ಪೊಲೀಸರು, 45 ದಿನಗಳ ಕಾಲ ಪ್ರಯಾಗ್‌ರಾಜ್‌ನತ್ತ ಹರಿದುಬಂದ ಜನಸಾಗರವನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದಾರೆ’ ಎಂದು ಹೇಳಿದ್ದಾರೆ.

‘ಜನರು ಸಂಯಮ ಕಳೆದುಕೊಂಡು ತಳ್ಳಿದರೂ, ಪೊಲೀಸರು ತಮ್ಮ ತಾಳ್ಮೆ ಕಳೆದುಕೊಳ್ಳದೆ ಕರ್ತವ್ಯನಿಷ್ಠೆಯನ್ನು ಪ್ರದರ್ಶಿಸಿದ್ದಾರೆ. ಜಗತ್ತಿನಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆ ಸಾಕಾರಗೊಂಡಿದ್ದು ಪೊಲೀಸರ ಸಾಂಘಿಕ ಪ್ರಯತ್ನದಿಂದಾಗಿ’ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.’ಇದೊಂದು ನಂಬಿಕೆಯ ಕಾರ್ಯಕ್ರಮವಾಗಿರಲಿಲ್ಲ. ಉತ್ತರ ಪ್ರದೇಶದ ಆರ್ಥಿಕತೆಯೂ ಸಾಕಷ್ಟು ವೃದ್ಧಿಯಾಗಿದೆ. ಪ್ರಯಾಗ್‌ರಾಜ್‌ನ ಮೂಲಸೌಕರ್ಯಕ್ಕೆ ಸರ್ಕಾರ ₹7,500 ಕೋಟಿ ಖರ್ಚು ಮಾಡಿದೆ. ಇದಕ್ಕೆ ಪರ್ಯಾಯವಾಗಿ ₹3.5 ಲಕ್ಷ ಕೋಟಿ ಆದಾಯ ಹರಿದುಬಂದಿದೆ’ ಎಂದಿದ್ದಾರೆ.

‘ಒಂದು ಕಾಲದಲ್ಲಿ ಮಾಫಿಯಾ, ದಂಗೆಯನ್ನು ನಿಯಂತ್ರಿಸುತ್ತಿದ್ದ ಪೊಲೀಸ್‌ ಇಲಾಖೆಯಲ್ಲಿ ಪರಿವರ್ತನೆಯಾಗಿದೆ. ಇದೀಗ ‘ಮಿತ್ರ ಪೊಲೀಸ್ ಆಗಿ ಅವರು ಬದಲಾಗಿದ್ದಾರೆ. ಜನರಿಂದಲೂ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ’ ಎಂದು ಹೊಗಳಿದ್ದಾರೆ.

[t4b-ticker]
error: Content is protected !!