ಅಧ್ಯಕ್ಷ ಸ್ಥಾನ ಬಿಟ್ಟು ಕೊಡ್ತೇನೆ, ಅಧಿಕಾರ ಹಂಚಿಕೆ ಕ್ಲಿಯರ್ ಮಾಡಿ, ಡಿಕೆಶಿ ಬೇಡಿಕೆಗೆ ಹೈಕಮಾಂಡ್ ಕಕ್ಕಾಬಿಕ್ಕಿಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕಾಂಗ್ರೆಸ್ನಲ್ಲಿ ಗದ್ದಲ, ಕೋಲಾಹಲಕ್ಕೆ ಕಾರಣವಾಗಿದೆ. ಬಣ ಬಡಿದಾಟ ಭರ್ಜರಿಯಾಗಿ ನಡೀತಿದೆ. ರಾಜ್ಯದಲ್ಲಿ ಕ್ಷಿಪ್ರ ಬೆಳವಣಿಗೆ ಆಗುತ್ತೆ ಎಂದು ವಿಪಕ್ಷಗಳು ಹೇಳುತ್ತಿವೆ.
ಈ ಎಲ್ಲ ಬೆಳವಣಿಗೆಗೆ ಕಾರಣವೇ ಡಿಕೆ ಶಿವಕುಮಾರ್, ಸಿದ್ದರಾಮಯ್ಯರಿಂದ ಸಿಎಂ ಸ್ಥಾನ ಪಡೆದುಕೊಳ್ಳೋದು ಅಷ್ಟು ಸುಲಭವಿಲ್ಲ ಎಂದು ತಿಳಿದಿರುವ ಡಿಕೆಶಿ, ಹೊಸ ಹೊಸ ರಾಜಕೀಯ ದಾಳವನ್ನು ಉರುಳಿಸುತ್ತಿದ್ದಾರೆ, ಪಕ್ಷದ ಸಿದ್ಧಾಂತದ ವಿರುದ್ಧವೇ ನಡೆದುಕೊಳ್ಳುವುದರ ಮೂಲಕ ದಿಲ್ಲಿ ವರಿಷ್ಠರಿಗೆ ಪರೋಕ್ಷ ಸಂದೇಶ ರವಾನಿಸುತ್ತಿದ್ದಾರೆ. ಹೇಳಿ ಕೇಳಿ ಡಿಕೆಶಿ ಕಾಂಗ್ರೆಸ್ ಪಾಳೆಯದ ಪ್ರಭಾವಿ ನಾಯಕ, ಪಕ್ಷದ ಪಾಲಿಗೆ ಟ್ರಬಲ್ ಶೂಟರ್, ಹಲವು ಸಂದರ್ಭದಲ್ಲಿ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ, ಪಕ್ಷಕ್ಕೆ ಆಸರೆಯಾಗಿದ್ದಾರೆ, 136 ಸ್ಥಾನ ಗೆದ್ದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಸಿದ್ದರಾಮಯ್ಯನವರಷ್ಟೇ ಡಿಕೆಶಿಯೂ ಶ್ರಮವಹಿಸಿದ್ದಾರೆ. ಪಕ್ಷದ ಅಧ್ಯಕ್ಷನಾಗಿ ಇಷ್ಟೆಲ್ಲ ಕಷ್ಟ ಪಟ್ಟಿದ್ದೇನೆ, ಈಗ ನನ್ನನ್ನೇ ಬದಲಾವಣೆ ಮಾಡಬೇಕು ಅಂದ್ರೆ.. ಡಿಕೆಶಿ ಸುಮ್ಮನಿರುತ್ತಾರಾ ಇಲ್ಲ.
ಈಗ ಡಿಕೆಶಿ ಹೈಕಮಾಂಡ್ ಮುಂದೆ ಮಾಡು ಇಲ್ಲವೇ ಮಡಿ ತಂತ್ರವನ್ನು ಉರುಳಿಸಿದ್ದಾರೆ. ದಿಲ್ಲಿ ವರಿಷ್ಠರ ಮುಂದೆ ಕೆಲ ಬೇಡಿಕೆ ಇಟ್ಟಿದ್ದಾರೆ.. ಡಿಕೆಶಿಯ ಡಿಮ್ಯಾಂಡ್ ಕೇಳಿ ಹೈಕಮಾಂಡ್ ಪೇಚಿಗೆ ಸಿಲುಕಿದೆ.. ಹಾಗಾದ್ರೆ ಡಿಕೆ ಡಿಮ್ಯಾಂಡ್ ಏನು,.. ಕಂಪ್ಲೀಟ್ ಮಾಹಿತಿ ಇಲ್ಲದೆ..ಹೌದು. ನಾನು ಪಕ್ಷದ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಸಿದ್ದ, ಆದರೆ ಅದಕ್ಕೂ ಮುನ್ನ ಅಧಿಕಾರ ಹಂಚಿಕೆಯ ಬಗ್ಗೆ ಸ್ಪಷ್ಟತೆ ಬೇಕು..’ ಎಂದು ಡಿಕೆ ಶಿವಕುಮಾರ್ ವರಿಷ್ಠರ ಮುಂದಿಟ್ಟಿದ್ದಾರೆಂಬ ಈ ಷರತ್ತು ದೆಹಲಿಯ ಎಐಸಿಸಿ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ನ ಉನ್ನತ ಮೂಲಗಳ ಪ್ರಕಾರ, ಎರಡು ದಿನದ ಹಿಂದೆ ದೆಹಲಿಗೆ ಭೇಟಿ ನೀಡಿದ್ದ ಡಿಕೆಶಿ ತಮ್ಮ ಸುತ್ತ ನಡೆಯುತ್ತಿರುವ ಬೆಳವಣಿಗಳ ಸಹಿತ ತಮ್ಮ ಬೇಡಿಕೆಗಳೇನೆಂಬುದನ್ನು ಹೈಕಮಾಂಡ್ಗೆ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಆ ಮೂಲಕ ‘ಅಧಿಕಾರ ಹಸ್ತಾಂತರ’ ಯಾವಾಗ? ಮಾರ್ಗೋಪಾಯಗಳೇನೇನು? ಎಂಬ ಕುರಿತು ಕಾಂಗ್ರೆಸ್ ವರಿಷ್ಠರು ತಕ್ಷಣವೇ ತೀರ್ಮಾನ ಕೈಗೊಳ್ಳಬೇಕಾದ ಅನಿವಾರ್ಯತೆಯನ್ನು ಡಿಕೆ ಸೃಷ್ಟಿಸಿದ್ದಾರೆ.
ಮೂಲಗಳ ಪ್ರಕಾರ ಕರ್ನಾಟಕದಲ್ಲಿ ಇನ್ನೂ ಆರು ತಿಂಗಳು ನಾಯಕತ್ವ ಬದಲಾವಣೆ ಇರುವುದಿಲ್ಲ. ಆದರೆ ಡಿಕೆಶಿ ಈಗ ಮುಂದಿಟ್ಟಿರುವ ಬೇಡಿಕೆಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ, ಪ್ರಮುಖರೆಲ್ಲರೂ ಚರ್ಚಿಸಿ ನಿರ್ಧಾರವನ್ನು ರಾಜ್ಯ ಘಟಕಕ್ಕೆ ರವಾನಿಸಬೇಕಾಗುತ್ತದೆ ಎಂಬುದು ಅವರ ಅಭಿಪ್ರಾಯ. ಅಧಿಕಾರ ಹಸ್ತಾಂತರ ಚರ್ಚೆಯ ಭಾಗವಾಗಿಯೇ ಕಳೆದ ಎರಡು ತಿಂಗಳಿಂದೀಚೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗೆದ್ದಿತ್ತು. ಆ ವಿಚಾರದಲ್ಲೂ ಡಿ.ಕೆ.ಶಿವಕುಮಾರ್ ದೆಹಲಿ ನಾಯಕರಿಗೆ ಸ್ಪಷ್ಟತೆ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯ ಕಾಂಗ್ರೆಸ್ನಲ್ಲಿ ಆಗುತ್ತಿರುವ ಬೆಳವಣಿಗೆ ಜತೆಗೆ, ತಾವೇ ಏಕೆ ಪಕ್ಷದ ಅಧ್ಯಕ್ಷನಾಗಿ ಮುಂದುವರಿಯಬೇಕೆಂಬುದಕ್ಕೆ ಡಿಕೆಶಿ ಕಾರಣ ಸಮೇತ ಕಾಂಗ್ರೆಸ್ನ ಸಂಘಟನಾ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಬಳಿ ವಿವರಣೆ ನೀಡಿದ್ದಾರೆಂತೆ ಅಲ್ಲದೇ ಅಧ್ಯಕ್ಷ ಸ್ಥಾನವನ್ನು ಸರಿಯಾಗಿ ನಿಭಾಯಿಸಿದರೂ ಸಿಗಬೇಕಾದ ಗೌರವ ದೊರೆಯುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರಂತೆ..ಸುಮಾರು ಒಂದು ಗಂಟೆ ನಡೆದ ಮಾತುಕತೆಯಲ್ಲಿ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಿದ ಬಳಿಕ, ತಾವೇ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಏಕೆ ಮುಂದುವರಿಯಬೇಕೆಂಬ ಕುರಿತು ಹತ್ತು ಹಲವು ಕಾರಣಗಳನ್ನು ಡಿಕೆಶಿ ಮುಂದಿಟ್ಟಿದ್ದರು.
ಒಂದೊಮ್ಮೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ, ಪಕ್ಷಕ್ಕೆ ಸಂಘಟನಾತ್ಮಕವಾಗಿ ಆಗುವ ನಷ್ಟಗಳ ಬಗ್ಗೆಯೂ ಎಚ್ಚರಿಸಿದ್ದರು. ಇದರ ಜತೆಗೆ ಕೆಲವು ಸಚಿವರ ಬಹಿರಂಗ ಹೇಳಿಕೆಗಳ ಬಗ್ಗೆ ಪ್ರಸ್ತಾಪಿಸಿ, ಪಕ್ಷದ ಅಧ್ಯಕ್ಷರ ಬಗ್ಗೆ ಬಹಿರಂಗವಾಗಿ ದಿನ ನಿತ್ಯ ಹೇಳಿಕೆ ಕೊಟ್ಟರೆ ಪಕ್ಷದ ಶಿಸ್ತಿಗೆ ಒಳಪಟ್ಟಂತೆ ಆಗುತ್ತದೆಯಾ ಎಂದು ಕೆ.ಸಿ. ವೇಣುಗೋಪಾಲರನ್ನೇ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.ಒಂದು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅದರದ್ದೇ ಆದ ಗೌರವವಿರುತ್ತದೆ, ಹೀಗಿದ್ದಾಗ ನನ್ನ ಬಗ್ಗೆ ಹೋದಲ್ಲಿ ಬಂದಲ್ಲಿ ಅಧ್ಯಕ್ಷರು ಬದಲಾವಣೆ ಆಗಬೇಕು ಎಂದೆಲ್ಲಾ ಹೇಳುತ್ತಾ ಬರುವುದು ಶೋಭೆ ತರುತ್ತದೆಯೇ? ಈ ವಿಚಾರಗಳೆಲ್ಲ ಸಿದ್ದರಾಮಯ್ಯನವರಿಗೂ ಗೊತ್ತಿದೆ. ಒಂದು ವೇಳೆ ಅಧ್ಯಕ್ಷ ಸ್ಥಾನದಿಂದ ನನ್ನನ್ನು ಬದಲಾಯಿಸಬೇಕು ಎಂದರೆ ಅದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಎಚ್ಚರಿಕೆಯನ್ನು ರವಾನಿಸಿದ್ದಾರೆ.ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಮಾತನಾಡಿರುವ ಡಿಕೆಶಿ, ಒಂದು ವೇಳೆ ಸಂಪುಟ ವಿಸ್ತರಣೆಯಾದರೆ ಪಕ್ಷದ ಹಿರಿಯರಿಗೂ ಅವಕಾಶ ನೀಡಬೇಕು ಎಂದಿದ್ದಾರೆ.
ಪಕ್ಷದೊಳಗಿನ ಆಂತರಿಕ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ, ಸಮಸ್ಯೆ ಬಗೆಹರಿಸಿಕೊಳ್ಳಬೇಕು, ಅದನ್ನು ಬಿಟ್ಟು ಪ್ರತಿನಿತ್ಯ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ. ಈ ವಿಚಾರಗಳನ್ನು ನಾನು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೂ ತಲುಪಿಸುತ್ತೇನೆ, 2028ರಲ್ಲಿ ನನ್ನ ನೇತೃತ್ವದಲ್ಲೇ ಚುನಾವಣೆ ಎದುರಿಸಲು ಸಿದ್ಧನಿದ್ದೇನೆ ಎಂಬ ಸಂದೇಶ ನೀಡಿದ್ದಾರೆ.ಒಟ್ಟಿನಲ್ಲಿ ಡಿಕೆಶಿ ನಡೆ ಹೈಕಮಾಂಡ್ ಅನ್ನು ಇಕ್ಕಟ್ಟಿಗೆ ತಂದು ನಿಲ್ಲಿಸಿದೆ, ಡಿಕೆಶಿ ಬೇಡಿಕೆಯನ್ನು ಕೇಳಿ ಸ್ವತಃ ವರಿಷ್ಠರು ತಲೆ ಚಚ್ಚಿಕೊಳ್ಳುವಂತಾಗಿದೆ. ಸಿಎಂ ಬದಲಾವಣೆ ಮಾಡಿದ್ರೂ ಕಷ್ಟ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿದ್ರು ಕಷ್ಟ ಅಡಕತ್ತರಿಯಲ್ಲಿ ಸಿಲುಕಿರುವ ಹೈಕಮಾಂಡ್ ಕರ್ನಾಟಕದಲ್ಲಿ ಎದ್ದಿರುವ ಗದ್ದಲವನ್ನು ಹೇಗೆ ನಿಭಾಯಿಸುತ್ತೆ ಅನ್ನೋದೆ ಸದ್ಯದ ಕುತೂಹಲ.













































