ಉತ್ತರ ಪ್ರದೇಶದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ಹೋಳಿ ಹಬ್ಬದ ಕುರಿತ ಹೇಳಿಕೆ ಇದೀಗ ಭಾರೀ ವಿವಾದ ಸೃಷ್ಟಿಸಿದೆ. ಸಂಭಲ್ನ ಸಿಒ ಅನುಜ್ ಚೌಧರಿ ಅವರು, ಹೋಳಿ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ “ಹೋಳಿ ಹಬ್ಬ ವರ್ಷಕ್ಕೆ ಒಂದು ಬಾರಿ ಮಾತ್ರ ಬರುತ್ತದೆ. ಶುಕ್ರವಾರದ ನಮಾಜ್ ವರ್ಷಕ್ಕೆ 52 ಬಾರಿ ಬರುತ್ತದೆ. ಹೀಗಾಗಿ ಬಣ್ಣ ಆಗದವರು ಹೋಳಿ ಹಬ್ಬದಂದು ಮನೆಯಲ್ಲಿರುವುದು ಒಳಿತು..” ಎಂದು ಹೇಳಿದ್ದಾರೆ. ಅನುಜ್ ಚೌಧರಿ ಅವರ ಈ ಹೇಳಿಕೆಗೆ ವಿಪಕ್ಷಗಳು ಭಾರೀ ಆಕ್ರೋಶ ವ್ಯಕ್ತಪಡಿಸಿವೆ.
ಲಖನೌ: ಹೋಳಿ ಹಬ್ಬ ಆಚರಣೆ ಸಮೀಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಅದರಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚನ ಪೊಲೀಸ್ ಬಲವನ್ನು ನಿಯೋಜಿಸಲು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ.
ಈ ಮಧ್ಯೆ ಉತ್ತರ ಪ್ರದೇಶದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ಹೋಳಿ ಹಬ್ಬದ ಕುರಿತ ಹೇಳಿಕೆ ಇದೀಗ ಭಾರೀ ವಿವಾದ ಸೃಷ್ಟಿಸಿದೆ. ಉತ್ತರ ಪ್ರದೇಶದ ಸಂಭಲ್ನ ಸಿಒ ಅನುಜ್ ಚೌಧರಿ ನೀಡಿರುವ ಹೇಳಿಕೆಯೊಂದು ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
ಹೋಳಿ ಹಬ್ಬದ ಪ್ರಯುಕ್ತ ಇಂದು(ಮಾ.6-ಗುರುವಾರ) ನಡೆದ ಶಾಂತಿ ಸಭೆಯಲ್ಲಿ ಮಾತಾಡಿದ ಸಿಒ ಅನುಜ್ ಚೌಧರಿ, “ಬಣ್ಣಗಳಿಂದ ತೊಂದರೆ ಅನುಭವಿಸುವವರು ಹೋಳಿ ಹಬ್ಬದ ದಿನ ಮನೆಯಲ್ಲೇ ಇರಬೇಕು..” ಎಂದು ಹೇಳಿದ್ದಾರೆ. ಇದು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹೇಳಿದ ಹೇಳಿಕೆ ಎಂದು ವಿಪಕ್ಷಗಳು ಅನುಜ್ ಚೌಧರಿ ವಿರುದ್ಧ ಕಿಡಿಕಾರಿವೆ.
ಶಾಂತಿ ಸಭೆಯಲ್ಲಿ ಮಾತನಾಡಿದ ಸಿಒ ಅನುಜ್ ಚೌಧರಿ, “ಹೋಳಿ ಹಬ್ಬ ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ. ಆದರೆ ಶುಕ್ರವಾರದ ಪ್ರಾರ್ಥನೆ (ನಮಾಜ್) ವರ್ಷದಲ್ಲಿ 52 ಬಾರಿ ಬರುತ್ತದೆ. ಹೀಗಾಗಿ ಶಾಂತಿಯುತ ಹೋಳಿ ಆಚರಣೆಗೆ ಎಲ್ಲರೂ ಸಹಕರಿಸಬೇಕು. ಹೋಳಿ ಬಣ್ಣಗಳಿಂದ ದೂರ ಇರಲು ಬಯಸುವವರು ಹಬ್ಬದ ದಿನ ಮನೆಯಲ್ಲೇ ಇರಬೇಕು..” ಎಂದು ನೇರವಾಗಿ ಹೇಳಿದ್ದಾರೆ.
ಉತ್ತರ ಪ್ರದೇಶದ ಸಂಭಲ್ನಲ್ಲಿ ಹೋಳಿ ಹಬ್ಬ ಮತ್ತು ರಂಜಾನ್ ತಿಂಗಳ ಶುಕ್ರವಾರದ ಪ್ರಾರ್ಥನೆ ಒಂದೇ ದಿನ ಬರುತ್ತಿರುವ ಹಿನ್ನೆಲೆಯಲ್ಲಿ, ಗುರುವಾರ ಸಂಭಲ್ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಸಂಭಲ್ ಸಿಒ ಅನುಜ್ ಚೌಧರಿ, “ಹೋಳಿ ವರ್ಷಕ್ಕೊಮ್ಮೆ ಬರುವ ಹಬ್ಬ. ಶುಕ್ರವಾರದ ಪ್ರಾರ್ಥನೆಗಳು ವರ್ಷದಲ್ಲಿ 52 ಬಾರಿ ನಡೆಯುತ್ತವೆ. ಹೋಳಿ ಬಣ್ಣಗಳಿಂದ ಯಾರಿಗಾದರೂ ತೊಂದರೆಯಾದರೆ, ಆ ದಿನ ಮನೆಯಲ್ಲೇ ಇರಬೇಕು. ಹೊರಗೆ ಬರುವವರು ವಿಶಾಲ ಮನೋಭಾವನೆಯಿಂದ ಹಬ್ಬವನ್ನು ಒಟ್ಟಿಗೆ ಆಚರಿಸಬೇಕು..” ಎಂದು ಹೇಳಿದ್ದಾರೆ.
ಸಂಭಲ್ ಸಿಒ ಅನುಜ್ ಚೌಧರಿ ಅವರ ಹೇಳಿಕೆಯು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದು, “ಅಧಿಕಾರಿಯ ಹೇಳಿಕೆ ಪಕ್ಷಪಾತವನ್ನು ತೋರಿಸುತ್ತದೆ ಮತ್ತು ಅವರ ಹುದ್ದೆಗೆ ತಕ್ಕುದಲ್ಲ ಎಂದು ವಿಪಕ್ಷ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಈ ಕುರಿತು ಮಾತನಾಡಿರುವ ಸಮಾಜವಾದಿ ಪಕ್ಷದ ವಕ್ತಾರ ಶರ್ವೇಂದ್ರ ಬಿಕ್ರಮ್ ಸಿಂಗ್, “ಅಧಿಕಾರಿಗಳು ಬಿಜೆಪಿ ಏಜೆಂಟ್ಗಳಂತೆ ವರ್ತಿಸಬಾರದು. ಮುಖ್ಯಮಂತ್ರಿಗಳ ಮೆಚ್ಚುಗೆ ಗಳಿಸಲು ಅವರು ಇಂತಹ ಮಾತುಗಳನ್ನು ಆಡುತ್ತಿದ್ದಾರೆ..” ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ಉತ್ತರ ಪ್ರದೇಶ ಕಾಂಗ್ರೆಸ್ ಮಾಧ್ಯಮ ಸಮಿತಿ ಉಪಾಧ್ಯಕ್ಷ ಮನೀಶ್ ಹಿಂದ್ವಿ, “ಯಾವುದೇ ಅಧಿಕಾರಿಯಾಗಲಿ, ಜಾತ್ಯತೀತರಾಗಿರಬೇಕು. ಆಗ ಮಾತ್ರ ಈ ದೇಶದಲ್ಲಿ ಆಡಳಿತ ಸರಿಯಾಗಿ ನಡೆಯಲು ಸಾಧ್ಯ. ಇಲ್ಲದಿದ್ದರೆ, ಅರಾಜಕತೆಗೆ ಕಾರಣವಾಗುತ್ತದೆ. ಒಂದು ನಿರ್ದಿಷ್ಟ ಧರ್ಮದ ಜನರು ಬಣ್ಣ ಆಡುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೆ, ಭಯ ಅಥವಾ ಅಭದ್ರತೆಯ ವಾತಾವರಣ ಇಲ್ಲದಂತೆ ನೋಡಿಕೊಳ್ಳುವುದು ಅಧಿಕಾರಿಯ ಕರ್ತವ್ಯ..” ಎಂದು ಆಕ್ರೋಶ ಹೊರಹಾಕಿದ್ದಾರೆ.ಇನ್ನು ಸಿಒ ಅನುಜ್ ಚೌಧರಿ ಅವರು ಶಾಂತಿ ಸಭೆಯಲ್ಲಿ ಕೋಮು ಸಾಮರಸ್ಯ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಜಾಗರೂಕತೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಸುಗಮ ಆಚರಣೆಗಳನ್ನು ಖಚಿತಪಡಿಸಿಕೊಳ್ಳಲು ವಿವಿಧ ಹಂತಗಳಲ್ಲಿ ಒಂದು ತಿಂಗಳಿನಿಂದ ಶಾಂತಿ ಸಭೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.”ಎರಡೂ ಸಮುದಾಯಗಳು ಪರಸ್ಪರ ಭಾವನೆಗಳನ್ನು ಗೌರವಿಸಬೇಕು ಮತ್ತು ಬಣ್ಣಗಳನ್ನು ಆಡಲು ಇಷ್ಟಪಡದವರ ಮೇಲೆ ಬಲವಂತವಾಗಿ ಬಣ್ಣ ಹಚ್ಚುವುದನ್ನು ತಪ್ಪಿಸಬೇಕು..” ಎಂದು ಅನುಜ್ ಚೌಧರಿ ಎಂದು ಮನವಿ ಮಾಡಿದ್ದಾರೆ.
“ಮುಸ್ಲಿಮರು ಈದ್ಗಾಗಿ ಕಾತರದಿಂದ ಕಾಯುವಂತೆಯೇ, ಹಿಂದೂಗಳು ಹೋಳಿಗಾಗಿ ಕಾಯುತ್ತಾರೆ. ಜನರು ಬಣ್ಣ ಹಚ್ಚುವ ಮೂಲಕ, ಸಿಹಿತಿಂಡಿಗಳನ್ನು ಹಂಚಿಕೊಳ್ಳುವ ಮೂಲಕ ಮತ್ತು ಸಂತೋಷವನ್ನು ಹರಡುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೋಮು ಸಾಮರಸ್ಯವನ್ನು ಕದಡಲು ನಡೆಸುವ ಯಾವುದೇ ಪ್ರಯತ್ನವನ್ನು ಕಟ್ಟುನಿಟ್ಟಾಗಿ ಎದುರಿಸಲಾಗುವುದು..” ಎಂದು ಪೊಲೀಸ್ ಅಧಿಕಾರಿ ಅನುಜ್ ಚೌಧರಿ ಎಚ್ಚರಿಸಿದ್ದಾರೆ.













































