ವಿಜಯಪುರ: ಜಾತಿಗಣತಿಯಲ್ಲಿ (Caste Census) ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ನಾವೇ ಕಾರಣ. ನಮ್ಮವರು ಮೀಸಲಾತಿಗಾಗಿ ಹಿಂದೂ ರೆಡ್ಡಿ, ಹಿಂದೂ ಬಣಜಿಗ ಈ ತರಹ ಬರೆಸಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿದರೇ ಲಿಂಗಾಯತರು 1 ಕೋಟಿಗೂ ಅಧಿಕ ಆಗುತ್ತಾರೆ ಎಂದು ಸಚಿವ ಎಂ.ಬಿ.ಪಾಟೀಲ್ (M B Patil) ಹೇಳಿದರು.
ವಿಜಯಪುರದಲ್ಲಿ (Vijayapura) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಅಧ್ಯಯನ ಮಾಡಲು ಇಂದು ವರದಿ ಪ್ರತಿ ಬಂದಿದೆ. ನಾನು ಇದುವರೆಗೂ ಅಧ್ಯಯನ ಮಾಡಿಲ್ಲ. ಅದನ್ನ ತಗೆದು ನೋಡುತ್ತೇನೆ. ಇವತ್ತು ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಿದೆ. ಮಾಧ್ಯಮಗಳ ವರದಿಯಲ್ಲಿ ನೋಡಿದ್ದೇನೆ. ಲಿಂಗಾಯತ ಕೆಲ ಸಮಾಜದವರು ಮೀಸಲಾತಿಗಾಗಿ ದಾಖಲಾತಿಗಳಲ್ಲಿ ಬೇರೆ ನಮೂದಿಸಿದ್ದಾರೆ ಎಂದರು.
ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ನಾವೇ ಕಾರಣ. ನಮ್ಮವರು ಮೀಸಲಾತಿಗಾಗಿ ಹಿಂದೂ ರೆಡ್ಡಿ, ಹಿಂದೂ ಬಣಜಿಗ ಈ ತರಹ ಬರೆಸಿದ್ದಾರೆ. ಇದರಿಂದ ಲಿಂಗಾಯತರ ಸಂಖ್ಯೆ ಕಡಿಮೆಯಾಗಿದೆ. ಎಲ್ಲರನ್ನೂ ಒಗ್ಗೂಡಿಸಿದರೆ ಲಿಂಗಾಯತರು 1 ಕೋಟಿಗೂ ಅಧಿಕ ಆಗುತ್ತಾರೆ. ಮೊದಲು ವರದಿಯನ್ನ ಅಧ್ಯಯನ ಮಾಡಿದ ನಂತರ ನಮ್ಮ ಸಂಶಯಗಳೇನಿವೆ ಅದನ್ನ ಚರ್ಚಿಸುತ್ತೇವೆ. ವರದಿಯ ಒಳಗಡೆ ಏನಿದೆ ಎಂದು ನೋಡಿ ನಂತರ ಅದರ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಬಿಜೆಪಿಯವರು ಕೇಂದ್ರದ ವಿರುದ್ಧ ಹೋರಾಟ ಮಾಡಲಿ
ಬಿಜೆಪಿ (BJP) ಜನಾಕ್ರೋಶ ಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವ ಮುಖ ಇಟ್ಟುಕೊಂಡು ಯಾತ್ರೆ ಮಾಡುತ್ತಾರೆ. ಕನ್ನಡಿಯಲ್ಲಿ ಮುಖ ನೋಡೋಕೆ ಹೇಳಿ ಅವರಿಗೆ. ಇಲ್ಲ ಮೋದಿ ಮುಖ ನೋಡಿ ಮೋದಿಗೆ ನಮಸ್ಕಾರ ಮಾಡಲು ಹೇಳಿ. 50 ರೂ. ಸಿಲಿಂಡರ್ ದರ ಜಾಸ್ತಿ ಆಗಿದೆ. ಡಿಸೇಲ್, ಪೆಟ್ರೋಲ್ ದರ ಜಾಸ್ತಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಅವರು ಹೋರಾಟ ಮಾಡುವುದು ಸರಿಯಾಗಿದೆ. ಆದರೆ ಕಾಂಗ್ರೆಸ್ ವಿರುದ್ಧದ ಹೋರಾಟ ಬೇಡ. ಕೇಂದ್ರ ಸರ್ಕಾರ, ನರೇಂದ್ರ ಮೋದಿ ವಿರುದ್ಧ ಮಾಡಲಿ ಎಂದು ಸಲಹೆ ಕೊಡುತ್ತೇನೆ ಟೀಕಿಸಿದರು.
ಯತ್ನಾಳ್ ಹತ್ಯೆಗೆ ಸಂಚು ವಿಚಾರವಾಗಿ ಮಾತನಾಡಿ, ಕಾನೂನು ಎಲ್ಲರಿಗೂ ಅನ್ವಯ ಆಗುತ್ತದೆ. ಯತ್ನಾಳ್ ಅವರು ಇವತ್ತು ಮುಸ್ಲಿಂಮರ ಪೈಗಂಬರ್ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಯತ್ನಾಳ್ ಮೇಲೆ ಬೆದರಿಕೆ ಹಾಕಿದ್ದು ಅದು ಕೂಡ ತಪ್ಪು. ಈ ಎರಡು ಘಟನೆಗಳ ಪ್ರಕರಣ ದಾಖಲಾಗುತ್ತದೆ ಹಾಗೂ ತನಿಖೆಯೂ ಆಗುತ್ತದೆ. ಆದರೆ ಯತ್ನಾಳ್ ಅವರೇ ಇದನೆಲ್ಲಾ ಅಹ್ವಾನಿಸಿಕೊಂಡಿದ್ದಾರೆ. ಯತ್ನಾಳ್ ಅವರಿಗೆ ಸೂಕ್ತ ಭದ್ರತೆ ಕೊಡುತ್ತೇವೆ ಆತಂಕ ಬೇಡ ಎಂದರು.













































