
ಪಹಲ್ಲಾಮ್ನಲ್ಲಿ ನಡೆಸಿದ ಭೀಕರ ದಾಳಿಯಂತಹ ಕೃತ್ಯವನ್ನು ಮತ್ತೆ ನಡೆಸಿದರೆ ಉಗ್ರ ಸಂಘಟನೆ ಮತ್ತು ಅದರ ನಾಯಕರ ಮೇಲೆ ಭಾರತ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದು ಜೈಶಂಕರ್ ಗುಡುಗಿದರು.
ಭಾರತ ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಮೊದಲ ಬಾರಿಗೆ ಯುರೋಪ್ ಪ್ರವಾಸ ಕೈಗೊಂಡಿರುವ ಜೈಶಂಕರ್ ಮಾತನಾಡಿ, ‘ಪಾಕಿಸ್ತಾನ ಸಾವಿರಾರು ಉಗ್ರರಿಗೆ ಬಹಿರಂಗವಾಗಿ ತರಬೇತಿ ನೀಡಿ ಭಾರತಕ್ಕೆ ಅಟ್ಟುತ್ತಿದೆ. ಆದರೆ ನಾವು ಭಯೋತ್ಪಾದಕತೆಯೊಂದಿಗೆ ಬದುಕಲು ಸಾಧ್ಯವಿಲ್ಲ. ಹೀಗಾಗಿ ನಾವು ನೀಡುವ ಎಚ್ಚರಿಕೆ ಸಂದೇಶವೆಂದರೆ, ಏಪ್ರಿಲ್ನಲ್ಲಿ ಪಹಲ್ಲಾಮ್ನಲ್ಲಿ ನಡೆಸಿದ ದಾಳಿಯಂತೆ ಮತ್ತೆ ಕೃತ್ಯ ಎಸಗಿದರೆ ಪ್ರತೀಕಾರ ಇದ್ದೇ ಇರುತ್ತದೆ. ದಾಳಿ ಮಾಡಿದವರು ಎಲ್ಲಿದ್ದಾರೆ ಎನ್ನುವುದಕ್ಕೆ ನಾವು ಗಮನ ಕೊಡುವುದಿಲ್ಲ, ಅವರು ಪಾಕಿಸ್ತಾನದಲ್ಲಿ ಎಲ್ಲೇ ಅಡಗಿದ್ದರೂ ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದ ವೇಳೆ 26 ಮಂದಿ ಪ್ರವಾಸಿಗರು ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಭಾರತ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಮೇ 7ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ಪ್ರತೀಕಾರ ತೀರಿಸಿತ್ತು.













































