ಧಾರವಾಡ: ಬೆಳಗಾವಿಯಲ್ಲಿ ಮುಖ್ಯಮಂತ್ರಿಸಿದ್ದರಾಮಯ್ಯ ಅವರಿಂದ ಬಹಿರಂಗ ವೇದಿಕೆಯಲ್ಲಿಯೇ ಅವಮಾನಕ್ಕೆ ಒಳಗಾಗಿ, ಇದೀಗ ಸ್ವಯಂ ನಿವೃತ್ತಿಗಾಗಿ ಇಲಾಖೆಗೆ ಎರಡು ಪುಟಗಳ ರಾಜೀನಾಮೆ ಪತ್ರ ಬರೆದು ಸಂಚಲನ ಮೂಡಿಸಿದ್ದ ಧಾರವಾಡದ ಹೆಚ್ಚುವರಿ ಪೊಲೀಸ್ ಅಧಿಕ್ಷಕ (ASP) ನಾರಾಯಣ ಭರಮಣಿ ಅವರು ಗುರುವಾರ (ಜು.03) ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.ನಗರದ ಎಸ್ಪಿ ಕಚೇರಿಯಲ್ಲಿ ಇರುವ ತಮ್ಮ ಕೊಠಡಿಗೆ ಆಗಮಿಸಿದ ನಾರಾಯಣ ಅವರು, ತಮ್ಮ ಹುದ್ದೆಯ ಕುರ್ಚಿಯಲ್ಲಿ ಕುಳಿತು ದೈನಂದಿನ ಕೆಲಸದಲ್ಲಿ ತೊಡಗಿದ್ದಾರೆ.ಇದೆ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ನಾನು ಶಿಸ್ತಿನ ಇಲಾಖೆಯಲ್ಲಿ ಇದ್ದೇನೆ. ನನ್ನ ಭಾವನೆಗಳನ್ನು ಕೂಡ ಮೇಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಸಿಎಂ, ಗೃಹ ಸಚಿವರು ನನ್ನ ಜತೆ ಮಾತನಾಡಿದ್ದಾರೆ. ಈಗ ನಾನು ದೈನಂದಿನ ಕೆಲಸಕ್ಕೆ ಹಾಜರಾಗುತ್ತಿದ್ದೇನೆ. ಈ ಬಗ್ಗೆ ಹೆಚ್ಚಿಗೆ ಏನೂ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಎಸ್ಪಿ ನಾರಾಯಣ ಬರಮಣಿ ತಮ್ಮ ಹುದ್ದೆಗೆ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಸ್ವಯಂ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ಅವರೇ ಬರಮಣಿ ಅವರೊಂದಿಗೆ ಮಾತನಾಡಿದ್ದಾರೆ. ಆ ಮೂಲಕ ಅವರ ಮನವೊಲಿಸಿ ಕರ್ತವ್ಯದಲ್ಲೇ ಮುಂದುವರೆಯುವಂತೆ ವಿನಂತಿಸಿದ್ದಾರೆ ಎನ್ನಲಾಗಿದೆ.














































