ಬಾರದ ಗೃಹಲಕ್ಷ್ಮೀ ಕಂತು : ಯಳಂದೂರಲ್ಲಿ 2 ಸಾವಿರಕ್ಕೂ ಹೆಚ್ಚು ಮಹಿಳೆಯರಿಗಿಲ್ಲ ಯೋಜನೆ ಹಣ

Picture of Savistara

Savistara

Bureau Report

ಯಳಂದೂರು ತಾಲೂಕಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿಲ್ಲ. ಅರ್ಜಿ ಸಲ್ಲಿಸಿದರೂ ಸೌಲಭ್ಯ ಸಿಗದೆ ಪರದಾಡುತ್ತಿದ್ದಾರೆ. ತಾಲೂಕಿನಲ್ಲಿ 22,550 ಮಂದಿ ಅರ್ಜಿ ಸಲ್ಲಿಸಿದ್ದು, 20,403 ಮಂದಿಗೆ ಮಾತ್ರ ಹಣ ತಲುಪಿದೆ. ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಗ್ಯಾರಂಟಿ ಸಮಿತಿ ಗಮನಹರಿಸಬೇಕೆಂದು ಒತ್ತಾಯಿಸಲಾಗಿದೆ. ಕೆಸ್ತೂರು ಗ್ರಾಮದ ಕೆಂಪಮ್ಮ ಎಂಬ ವೃದ್ಧೆಗೆ ಯೋಜನೆಯ ಹಣ ಸಿಗುತ್ತಿಲ್ಲ. ಅಧಿಕಾರಿಗಳು ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ನೀಡಲು ಪ್ರಯತ್ನಿಸಬೇಕು.

ಯಳಂದೂರು: ಪುಟ್ಟ ತಾಲೂಕಾದ ಯಳಂದೂರಿನಲ್ಲಿ 2 ಸಾವಿರಕ್ಕೂ ಹೆಚ್ಚು ಮಹಿಳೆಯರು ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಭಾಗ್ಯದಿಂದ ವಂಚಿತರಾಗಿದ್ದಾರೆ.

ಯೋಜನೆಗಾಗಿ ಅರ್ಜಿ ಸಲ್ಲಿಸಿದ್ದರೂ ಈ ಎರಡು ಸಾವಿರ ಮಹಿಳೆಯರು ಸೌಲಭ್ಯದಿಂದ ವಂಚಿತರಾಗಿದ್ದು, ನಿತ್ಯ ಯೋಜನೆ ವ್ಯಾಪ್ತಿಗೊಳಪಡಲು ಪರಿತಪಿಸುತ್ತಲೇ ಇದ್ದಾರೆ. ತಾಲೂಕಿನಲ್ಲಿ ಒಟ್ಟು 25,031 ಕುಟುಂಬಗಳು ಪಡಿತರ ಚೀಟಿ ಹೊಂದಿವೆ. ಆ ಪೈಕಿ 20,838 ಕುಟುಂಬಗಳು ಬಿಪಿಎಲ್‌ ಕಾರ್ಡ್‌ ಹೊಂದಿದ್ದು, 2687 ಕುಟುಂಬ ಅಂತ್ಯೋದಯ ಕಾರ್ಡ್‌ ಹೊಂದಿವೆ. 1506 ಕುಟುಂಬಗಳು ಎಪಿಎಲ್‌ ಕಾರ್ಡ್‌ ಹೊಂದಿದ್ದು, ಒಟ್ಟು 25031 ಕುಟುಂಬಗಳು ನಾನಾ ಬಗೆಯ ಪಡಿತರ ಕಾರ್ಡ್‌ ಹೊಂದಿವೆ.

ತಾಲೂಕಿನಾದ್ಯಂತ ಗೃಹಲಕ್ಷ್ಮಿ ಯೋಜನೆ ಸೌಲಭ್ಯಕ್ಕಾಗಿ ಒಟ್ಟು 22,550 ಮಂದಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ 20,403 ಮಂದಿಗೆ ಗೃಹಲಕ್ಷ್ಮಿ ಹಣ ತಲುಪುತ್ತಿದೆ. ಅರ್ಜಿ ಸಲ್ಲಿಸಿಯೂ ಇನ್ನುಳಿದ 2,147 ಮಂದಿಗೆ ಹಣ ತಲುಪುತ್ತಿಲ್ಲ.

ಇವರಲ್ಲದೇ 2 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನಿರ್ಗತಿಕರು, ವಿಶೇಷಚೇತನರು, ದೃಷ್ಟಿ ಮಾಂದ್ಯರು ಮತ್ತು ಬಂದು ಬಳಗ ಯಾರೂ ಇಲ್ಲದವರು ಸಹ ಪ್ರತಿ ಗ್ರಾಮದಲ್ಲಿ 2-3 ಮಂದಿ ಸಿಗುತ್ತಾರೆ. ಹೀಗಾಗಿ ಆನ್‌ಲೈನ್‌ ಅರ್ಜಿ ಸಲ್ಲಿಸಿದ್ದರೂ ಅರ್ಜಿ ತಗೆದುಕೊಳ್ಳದಿರುವ ಫಲಾನುಭವಿಗಳು 2 ಸಾವಿರಕ್ಕೂ ಹೆಚ್ಚು ಮಂದಿ ಇದ್ದಾರೆ.

ಈ ಯೋಜನೆ ಪ್ರಾರಂಭವಾಗಿ 2 ವರ್ಷಗಳೇ ಕಳೆಯುತ್ತಿದ್ದು, ಯೋಜನೆಯಡಿ ಒಳಪಟ್ಟಿರುವ ಮಂದಿ ಇದುವರೆಗೆ 50 ಸಾವಿರ ರೂ ಪಡೆದುಕೊಂಡಿದ್ದಾರೆ. ಆದರೆ, ತಾಲೂಕಿನ 2 ಸಾವಿರಕ್ಕೂ ಹೆಚ್ಚು ಮಂದಿಗೆ ಸೌಲಭ್ಯವೇ ತಲುಪದೇ ಇರುವುದು ದುರದೃಷ್ಟಕರ.

ಗ್ಯಾರಂಟಿ ಸಮಿತಿಯವರು ಗಮನಹರಿಸಲಿ

ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಇದೆ. ಅಲ್ಲಿನ ಅಧ್ಯಕ್ಷರು, ಸದಸ್ಯರಾದರೂ ಸೌಲಭ್ಯ ವಂಚಿತರ ಬಗ್ಗೆ ಕಾಳಜಿ ವಹಿಸಬೇಕಾಗಿತ್ತು. ಅವರಿಗೆ ಸೌಲಭ್ಯ ಕೊಡಲು ಏನು ತಾಂತ್ರಿಕ ಸಮಸ್ಯೆ ಇದೆ. ಅದನ್ನು ನಿವಾರಿಸಲು ಶ್ರಮಿಸಬೇಕಾಗಿದೆ. ಆನ್‌ಲೈನ್‌ ಅರ್ಜಿ ತೆಗೆದುಕೊಳ್ಳದ ಕಾರಣ ಸಾವಿರಾರು ಮಂದಿ ದಿನ ನಿತ್ಯ ಶಿಶು ಅಭಿವೃದ್ದಿ ಇಲಾಖೆ ಹಾಗೂ ಗ್ರಾಮ ಒನ್‌ ಸೇವಾ ಕೇಂದ್ರಕ್ಕೆ ಅಲೆದಾಡಿ ಸಾಕಾಗಿ ಕಣ್ಣೀರಿಟ್ಟು ಸುಮ್ಮನಾಗಿದ್ದಾರೆ.

ಕೆಂಪಮ್ಮನ ಸಂಕಷ್ಟದ ಜೀವನ

ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿರುವುದೇ ಮಹಿಳೆಯರ ಸಂಕಷ್ಟಕ್ಕೆ ನೆರವಾಗಲಿ ಎಂಬ ಉದ್ದೇಶದಿಂದ. ಆದರೆ, ಈ ಯೋಜನೆ ಹಣ ತಾಲೂಕಿನ ಕೆಸ್ತೂರು ಗ್ರಾಮದ ಅಂಬೇಡ್ಕರ್‌ ಬಡಾವಣೆಯ ವೃದ್ದೆ ಕೆಂಪಮ್ಮ (75) ಎಂಬುವರನ್ನು ತಲುಪೇ ಇಲ್ಲ.

ಎರಡು ಕಣ್ಣುಗಳು ಕಳೆದುಕೊಂಡು ತುಂಬಾ ಕಡುಬಡತನದಿಂದ ಒಬ್ಬರೇ ವಾಸಿಸುತ್ತಿದ್ದಾರೆ. ಇವರಿಗೆ ಪಡಿತರ ಆಹಾರ ಪದಾರ್ಥ ಹಾಗೂ ಗೃಹಲಕ್ಷ್ಮಿ ಯೋಜನೆ ಹಣವೂ ಸಿಗುತ್ತಿಲ್ಲ. ಇವರಲ್ಲದೇ ಮದ್ದೂರು ಗ್ರಾಮದ ನಿಂಗರಾಜಮ್ಮ ಎಂಬುವರಿಗೂ ಈ ಯೋಜನೆ ಹಣ ತಲುಪುತ್ತಿಲ್ಲ ಉಳ್ಳವರಿಗೆ 10 ಮಂದಿಗೆ ದೊರಕದಿದ್ದರೂ ಪರವಾಗಿಲ್ಲ ಆದರೆ ಏನೇನು ಇಲ್ಲದ ನಿರ್ಗತಿಕ ಒಬ್ಬರಿಗೆ ಸೌಲಭ್ಯ ದೊರಕದಿದ್ದರೆ ಈ ಯೋಜನೆ ಜಾರಿ ಮಾಡಿರುವುದಕ್ಕೆ ಫಲವಿಲ್ಲ ಎಂಬುದು ಹಲವಾರು ಮಂದಿ ಅಭಿಮತ. ನಾನು ದೃಷ್ಟಿ ಕಳೆದುಕೊಂಡಿದ್ದೇನೆ ನನಗೆ ಒಬ್ಬ ಮಗನಿದ್ದಾನೆ ಅವನೂ ಮಧ್ಯ ವ್ಯಸನಿಯಾಗಿದ್ದು ಜೀವನ ಕಳೆಯುವುದೇ ಕಷ್ಟವಾಗಿದೆ ನನಗೆ ಗೃಹಲಕ್ಷ್ಮೀ ಯೋಜನೆ ಹಣ ಹಾಗೂ ಪಡಿತರ ಆಹಾರ ಪದಾರ್ಥ ಬರುತ್ತಿಲ್ಲ ಎಂದಿದ್ದಾರೆ ಕೆಂಪ್ಪಮ್ಮ, ಕೆಸ್ತೂರು.ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಹಾರ ಇಲಾಖೆ ಹಾಗೂ ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗ್ಯಾರಂಟಿ ಯೋಜನೆ ಅಧ್ಯಕ್ಷರು ಹಾಗೂ ನಿದೇರ್ಶಕರು, ತಿಂಗಳಿಗೆ ಎರಡು ಬಾರಿ ಅಭಿಯಾನ ಹಮ್ಮಿಕೊಂಡು ಅಲ್ಲಿ ಫಲಾನುಭವಿಗಳನ್ನು ಗುರುತಿಸಿ ಯೋಜನೆ ಸೌಲಭ್ಯ ದೊರಕಿಸಿಕೊಡುವ ಪ್ರಾಮಾಣಿಕ ಯತ್ನ ನಡೆಸಲಾಗುತ್ತದೆ ಎಂದಿದ್ದಾರೆ ಪ್ರಭುಪ್ರಸಾದ್‌, ಅಧ್ಯಕ್ಷ, ತಾಲೂಕು ಗ್ಯಾರಂಟಿ ಯೋಜನೆ.

[t4b-ticker]
error: Content is protected !!