ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳಿನ ತೀವ್ರ ಕೊರತೆ ಉಂಟಾಗಿದ್ದು, ಈ ಗಂಭೀರ ಸಮಸ್ಯೆಯನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಇನ್ನೂ ಬಗೆಹರಿಸದಿರುವುದನ್ನು ಖಂಡಿಸಿ ಮಂಗಳವಾರ (ಸೆ.16) ಮಿನಿವಿಧಾನಸೌಧದ ಎದುರು ಬಿಜೆಪಿ ಬೃಹತ್ ಪ್ರತಿಭಟನಾ ಧರಣಿ ಆರಂಭಿಸಿದೆ.

ಬೃಹತ್ ಪ್ರತಿಭಟನಾ ಧರಣಿ ಗೆ ಚಾಲನೆ ನೀಡಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಸಮಸ್ಯೆಗೆ ಉತ್ತರ ಹುಡುಕುವ ಪ್ರಯತ್ನವನ್ನು ಸರಕಾರ ಮಾಡುತ್ತಿಲ್ಲ. ದಿನೇಶ್ ಗುಂಡೂರಾವ್ ಹೆಸರಿಗೆ ಮಾತ್ರ ಉಸ್ತುವಾರಿ. ಆದರೆ ಸ್ಪೀಕರ್ ಯು.ಟಿ. ಖಾದರ್ ಉಸ್ತುವಾರಿ ನಡೆಸುತ್ತಿದ್ದಾರೆ. ಸಮಸ್ಯೆಗೆ ಅವರೇ ಕಾರಣ. ಅಕ್ರಮವಾಗಿ ನಡೆಯಬೇಕು ಎಂಬ ಕಾರಣಕ್ಕೆ ಇದನ್ನು ಕಾನುನು ಬದ್ದವಾಗಿ ಮಾಡುತ್ತಿಲ್ಲ ಅನಿಸುತ್ತಿದೆ. ಸರಕಾರಕ್ಕೆ ದ.ಕ ಜಿಲ್ಲೆಯ ಯಾವುದೆ ಸಮಸ್ಯೆಗೆ ಸ್ಪಂದಿಸಬಾರದೆಂಬ ಭಾವನೆ ಇದೆ. ಜನ ಕಾಂಗ್ರೆಸ್ ಪರ ಇಲ್ಲ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ.ಸರಕಾರ ಜಿಲ್ಲೆಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕು. ಇದು ಸಾಂಕೇತಿಕ ಹೋರಾಟ. ಎಚ್ಚರಿಕೆಯ ಪ್ರತಿಭಟನೆ. ಮುಂದಿನ ದಿನಗಳಲ್ಲಿ ಜನಾಂದೋಲನ ರೂಪಿಸಲಾಗುವುದು ಎಂದರು.ಬಳಿಕ ಮಾತನಾಡಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕೆಂಪುಕಲ್ಲು, ಮರಳು ಪೂರೈಸಲು ಒತ್ತಾಯಿಸಿ ತಾಲೂಕು ಕೇಂದ್ರಗಳ ಎದುರು ಪ್ರತಿಭಟನೆ ನಡೆಸಲಾಗಿತ್ತು. ವಿಧಾನ ಸಭೆ, ಪರಿಷತ್ತಿನಲ್ಲಿಯೂ ಶಾಸಕರು ಗಮನ ಸೆಳೆದಿದ್ದರು.

ಅನಂತರ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಅಧಿಕಾರಿಗಳಿಗೂ ಮನವಿ ಮಾಡಲಾಗಿತ್ತು. ಉಸ್ತುವಾರಿ ಸಚಿವರು ಸಭೆ ನಡೆಸಿ ಸನಸ್ಯೆ ಬಗೆಹರಿಸಿಲ್ಲ. ಸಿಎಂ ಎಲ್ಲ ಸಮಸ್ಯೆ ಕೇಳಿದರೂ ಪರಿಹಾರ ಕ್ರಮ ತೆಗೆದುಕೊಂಡಿಲ್ಲ. ಸ್ಪೀಕರ್ ಖಾದರ್ ಕೂಡ ವಿಫಲರಾಗಿದ್ದಾರೆ. ಕಾರ್ಮಿಕ ವರ್ಗ ಕಂಗಾಲಾಗಿದ್ದಾರೆ. ಸಂಜೆಯವರೆಗೆ ಧರಣಿ ನಡೆಸಲಾಗುವುದು. ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದರು.ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಕೆಂಪುಕಲ್ಲು ಮತ್ತು ಮರಳು ಅನ್ನದ ಬಟ್ಟಲು ತಟ್ಟೆಯ ಹಾಗೆ. ಇದು ಈ ಭಾಗದ ಪ್ರತಿಯೊಬ್ಬರಿಗೂ ಅಗತ್ಯ. ಕೆಂಪುಕಲ್ಲು ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ. ಶೇ.75 ಮಂದಿ ಕಾರ್ಮಿಕರ ಮೇಲೆ ದುಷ್ಪರಿಣಾಮ ಬಿದ್ದಿದೆ ಎಂದರು.ಧರಣಿಯಲ್ಲಿ ಕ್ಯಾ. ಬ್ರಿಜೇಶ್ ಚೌಟ, ವೇದವ್ಯಾಸ ಕಾಮತ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಉಮಾ ನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ, ಕಿಶೋರ್ ಕುಮಾರ್ ಬೊಟ್ಯಾಡಿ, ರಾಜೇಶ್ ನಾಯ್ಕ್, ಕ್ಯಾ. ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ವಿ ಎಚ್ ಪಿ ಜಿಲ್ಲಾಧ್ಯಕ್ಷ ಎಚ್. ಕೆ. ಪುರುಷೋತ್ತಮ, ರಮೇಶ್ ಕಂಡೆಟ್ಟು, ಪ್ರೇಮಾನಂದ ಶೆಟ್ಟಿ ಮೊದಲಾದವರು ಭಾಗಿಯಾಗಿದ್ದರು.










































