ಬೆಂಗಳೂರಿನಲ್ಲಿ ಬಿ.ವೈ.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾತಿ ಗಣತಿಯ ನೆಪದಲ್ಲಿ ಸಮಾಜ ಒಡೆಯುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಮಾಜವನ್ನು ಒಡೆಯುವ ಕಾಂಗ್ರೆಸ್ ಸರ್ಕಾರದ ಪಿತೂರಿಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ವಿಜಯೇಂದ್ರ ತಿಳಿಸಿದ್ದಾರೆ. ಎಲ್ಲ ಸಮುದಾಯಗಳು ಒಗ್ಗಟ್ಟಾಗಿರಬೇಕು ಎಂದು ನಾಯಕರು ಕರೆ ನೀಡಿದರು.
ಬೆಂಗಳೂರು: ಜಾತಿ ಗಣತಿ ಹೆಸರಿಲ್ಲಿ ವೀರಶೈವ ಲಿಂಗಾಯತ ಸಮುದಾಯದಲ್ಲಿ ಬಿರುಕು ಮೂಡಿಸುವ ಕುತಂತ್ರ ನಡೆಸುತ್ತಿದೆ ಎಂದು ಕರ್ನಾಟಕ ಬಿಜೆಪಿ ಲಿಂಗಾಯತ ನಾಯಕರು ಖಂಡಿಸಿದ್ದಾರೆ. ಜತೆಗೆ ಸಮುದಾಯದ ಸ್ವಾಮೀಜಿಗಳು ನೀಡುವ ಸೂಚನೆಯನ್ನು ಪಾಲಿಸುವಂತೆ ನಾಯಕರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವರು ವಿ ಸೋಮಣ್ಣ ಸೇರಿದಂತೆ ಸಂಸದರು, ಶಾಸಕರು ಹಾಗೂ ಪ್ರಮುಖರ ಸಭೆಯಲ್ಲಿ ಭಾಗವಹಿಸಿದ್ದರು.
ಮಠಾಧೀಶರ ಮಾರ್ಗದರ್ಶದಲ್ಲಿ ಮುನ್ನಡೆಯಲು ತೀರ್ಮಾನ
ಈ ಬಗ್ಗೆ ಟ್ವೀಟ್ ಮಾಡಿದ ಬಿವೈ ವಿಜಯೇಂದ್ರ, ” ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಮಾಜಿಕ ಸಮೀಕ್ಷೆಯ (ಜಾತಿ ಜನಗಣತಿಯ) ನೆಪದಲ್ಲಿ ಜಾತಿ ಹಾಗೂ ಉಪ ಜಾತಿಗಳ ಹೆಸರಿನಲ್ಲಿ ಸಮಾಜ ಒಡೆಯುವ ನೀಚತನಕ್ಕೆ ಇಳಿದಿದೆ. ವೀರಶೈವ ಸಮುದಾಯದ ಒಳ ಪಂಗಡಗಳ ನಡುವೆ ಧರ್ಮದ ಹೆಸರಿನಲ್ಲಿ ಈ ಹಿಂದೆಯೂ ಕಿಚ್ಚು ಹಚ್ಚಿಸುವ ಕೀಳು ಕಾರ್ಯಕ್ಕೆ ಇಳಿದಿದ್ದನ್ನು ಸಮುದಾಯ ಮರೆತಿಲ್ಲ, ತನ್ನ ಚಾಳಿಯನ್ನು ಇನ್ನೂ ಬಿಡದ ಕಾಂಗ್ರೆಸ್ ಸರ್ಕಾರ ಸಮುದಾಯದ ನಡುವೆ ಗೊಂದಲ ಮೂಡಿಸುವುದನ್ನು ಪ್ರಮುಖ ಕಾರ್ಯ ಸೂಚಿಯನ್ನಾಗಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಸಮುದಾಯದ ಒಗ್ಗಟ್ಟು ಕಾಯ್ದುಕೊಳ್ಳಲು ಅನಗತ್ಯ ಗೊಂದಲ ಮೂಡಿಸುವ ಚಟುವಟಿಕೆಗಳಿಗೆ ಇತಿಶ್ರೀ ಹಾಡಲು ಸಮಾಜ ಒಗ್ಗಟ್ಟು ಪ್ರದರ್ಶಿಸುವುದು, ಜಾತಿ ಸಮೀಕ್ಷೆಯ ಹೆಸರಿನಲ್ಲಿ ಗೊಂದಲ ಮೂಡಿಸುವ ಕುತಂತ್ರವನ್ನು ಮೆಟ್ಟಿನಿಲ್ಲುವ ನಿಟ್ಟಿನಲ್ಲಿ ಸಮುದಾಯದ ವಿವಿಧ ಮಠಾಧೀಶರು ಹಾಗೂ ಹರಗುರು ಚರಮೂರ್ತಿಗಳ ಮಾರ್ಗದರ್ಶನದಲ್ಲಿ ಒಟ್ಟಾಗಿ ಮುನ್ನಡೆಯಲು ತೀರ್ಮಾನಿಸಲಾಯಿತು ” ಎಂದು ತಿಳಿಸಿದ್ದಾರೆ.
ಸಮಾಜವನ್ನು ಒಡೆಯುವ ಕಾಂಗ್ರೆಸ್ ಸರ್ಕಾರದ ಚಿತಾವಣೆ ಹಾಗೂ ಪಿತೂರಿಯನ್ನು ಸಮಾಜದ ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಎಚ್ಚರಿಕೆಯ ನಡೆ ಪ್ರದರ್ಶಿಸಬೇಕು ಹಾಗೂ ಒಗ್ಗಟ್ಟು ಸಾಧಿಸಿ ಸಮಾಜದ ಹಿತ ಕಾಯಬೇಕೆಂಬ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಸಭೆಯಲ್ಲಿ ಇದ್ದ ಇತರೆ ನಾಯಕರು ಯಾರು?
ಕೇಂದ್ರ ಮಾಜಿ ಸಚಿವರಾದ ಜಿ.ಎಂ.ಸಿದ್ದೇಶ್ವರ್, ಮಾಜಿ ರಾಜ್ಯಸಭಾ ಸದಸ್ಯರಾದ ಪ್ರಭಾಕರ್ ಕೋರೆ, ವಿಜಯ್ ಸಂಕೇಶ್ವರ್ ಸೇರಿದಂತೆ ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರು, ಸಮಾಜದ ಮುಖಂಡರು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ರೊಟ್ಟಿ ಸುಟ್ಟುಕೊಳ್ಳಲು ಲಿಂಗಾಯತ ಸಮುದಾಯ ಒಡೆಯುತ್ತಿದ್ದಾರೆ
ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇಲ್ಲದಿರುವ ಜಾರಿ ಸೇರಿಸಿ ಜಾತಿ ನಡುವೆ ಸಂಘರ್ಷ ಉಂಟು ಮಾಡಿ ತಮ್ಮ ರಾಜಕೀಯ ರೊಟ್ಟಿ ಸುಟ್ಡು ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.ಮಂಗಳವಾರ ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಬಿಜೆಪಿ ನಾಯಕರ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಗಣತಿ ಕಾಯಿದೆ ಇದೆ. ಅದರ ಪ್ರಕಾರ ಕೇಂದ್ರ ಸರ್ಕಾರ ಗಣತಿ ಮಾಡುತ್ತದೆ. ರಾಜ್ಯ ಸರ್ಕಾರ ಸರ್ವೆ ಮಾಡಬಹುದು. ಆದರೆ, ಇವರು ಮನೆ ಮನೆಗೆ ಹೋಗುವುದು ಗಣತಿ ಕಾಯಿದೆಯ ವಿರುದ್ದ ಇದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ಕಾಂತರಾಜ ವರದಿ ಯಾಕೆ ಮಾಡಿಸಿದ್ದರು. ಅದನ್ನು ಯಾಕೆ ಜಾರಿ ಮಾಡುತ್ತಿಲ್ಲ ಎನ್ನುವುದನ್ನು ಜನರಿಗೆ ತಿಳಿಸಬೇಕು. ಕಾಂತರಾಜ್ ವರದಿ ಜಾರಿ ಮಾಡದಿರಲು ಕಾರಣ ಏನು ಎಂದು ಪ್ರಶ್ನಿಸಿದರು.
ಸಂವಿಧಾನದಲ್ಲಿ 6 ಇವೆ; ಇಲ್ಲಿ ಯಾಕೆ 7
ಸಂವಿಧಾನದಲ್ಲಿ ಕೇವಲ ಆರು ಧರ್ಮ ಇದೆ. ರಾಜ್ಯ ಸರ್ಕಾರ ಜಾತಿ ಸಮೀಕ್ಷೆಯಲ್ಲಿ ಇತರರು, ನಾಸ್ತಿಕರು ಅಂತ ಸೇರಿಸಿದ್ದಾರೆ. ನಾಸ್ತಿಕರಿಗೆ ಧರ್ಮ ಇಲ್ಲ. ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಲಿಂಗಾಯತ ಅಂತ ಯಾಕೆ ಕಾಲಂ ಮಾಡಿದ್ದಾರೆ. ಮತಾಂತರ ಹೊಂದಿದವರಿಗೆ ಪ್ರತ್ಯೇಕ ಕಾಲಂ ಮಾಡಬೇಕು ಅಂತ ಯಾವ ಸಂವಿಧಾನದಲ್ಲಿ ಹೇಳಿದೆ. ಸಂವಿಧಾನದ ಬಗ್ಗೆ ಮಾತನಾಡುತ್ತ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಜಾತಿ ಸಮೀಕ್ಷೆಯಲ್ಲಿ ಬಹಳಷ್ಟು ಲೋಪಗಳಿವೆ ಎಂದು ಅನೇಕ ಸ್ವಾಮೀಜಿಗಳು ಹೇಳಿದ್ದಾರೆ. ಅವುಗಳನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ ಎಂದರು.ವೀರಶೈವ ಲಿಂಗಾಯತ ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಜನರು ಜಾಗೃತರಾಗಿದ್ದಾರೆ. ನಿಮ್ಮ ರಾಜಕೀಯ ಹುನ್ನಾರಕ್ಕೆ ಅವರು ಬಲಿಯಾಗುವುದಿಲ್ಲ. 2018 ರಲ್ಲಿ ಜನರು ಒಮ್ಮೆ ಪಾಠ ಕಲಿಸಿದ್ದಾರೆ.
ನಮ್ಮ ಧರ್ಮ ಮತ್ತು ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ. ಈಗ ಮತ್ತೆ ಅದೆ ಕೆಲಸ ಮಾಡುತ್ತಿದ್ದಾರೆ. ಸಮಾಜ ಒಗ್ಗೂಡಿಸಿ ಆಡಳಿತ ಮಾಡುವುದನ್ನು ಬಿಟ್ಟು, ಸಮಾಜ ಒಡೆದು ತಮ್ಮ ರಾಜಕೀಯ ರೊಟ್ಟಿ ಸುಟ್ಡುಕೊಳ್ಳುವ ಕೆಲಸ ಮಾಡುತ್ತಿರುವುದನ್ನು ಜನರು ಸಂಪೂರ್ಣವಾಗಿ ತಿರಸ್ಕಾರ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ಎಲ್ಲ ಸಮುದಾಯ ಒಂದಾಗಬೇಕು
ಕರ್ನಾಟಕದ ಎಲ್ಲ ಸಮುದಾಯಗಳಲ್ಲಿ ಒಕ್ಕಟ್ಡು ಇರಬೇಕು. ವೀರಶೈವ ಲಂಗಾಯತ, ಒಕ್ಕಲಿಗ, ಬ್ರಾಹ್ಮಣ, ಎಸ್ಸಿ ಎಸ್ಟಿ, ಹಿಂದುಳಿದ ವರ್ಗ ಎಲ್ಲರೂ ಒಕ್ಕಟ್ಟಾಗಿರಬೇಕು. ಈಗ ಕಾಗಿನೆಲೆ ಪೀಠ ಇದೆ. ಮುಂದಿನ ದಿನಗಳಲ್ಲಿ ಕುರುಬ ಕ್ರಿಶ್ಚಿಯನ್ ಪೀಠ ಆರಂಭವಾಗುತ್ತದೆ. ಬಹುತೇಕ ಸಿಎಂ ಸಿದ್ದರಾಮಯ್ಯ ಯಾರನ್ನಾದರೂ ಫಾದ್ರಿಯನ್ನು ತಂದು ಕೂಡಿಸುತ್ತಾರೆ. ಸಮಾಜವನ್ನು ಎಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇದರ ಅಗತ್ಯ ಏನಿದೆ. ಕೇಂದ್ರ ಸರ್ಕಾರ ಗಣತಿ ಮಾಡಲು ತೀರ್ಮಾನಿಸಿದೆ. ಇಡೀ ದೇಶದಲ್ಲಿ ಜಾತಿ ಗಣತಿಯನ್ನೂ ಮಾಡುತ್ತಿದೆ ಎಂದರು.
ಕಣ್ಣಿಗೆ ಮಣ್ಣೆರಚುವ ಕೆಲಸ
ರಾಜ್ಯ ಸರ್ಕಾರ ಒಂದು ರೀತಿಯಲ್ಲಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಒಂದೂವರೆ ಕೋಟಿ ಮನೆಗಳನ್ನು ಹದಿನೈದು ದಿನಗಳಲ್ಲಿ ಗಣತಿ ಮಾಡುತ್ತೇವೆ ಎನ್ನುತ್ತಾರೆ. ಒಂದು ಮನೆಯಲ್ಲಿ ಪ್ರತಿಯೊಬ್ಬರಿಗೂ ಅರವತ್ತು ಪ್ರಶ್ನೆಗಳನ್ನು ಕೇಳುತ್ತಾರೆ. ಅಷ್ಟು ಪ್ರಶ್ನೆ ಕೇಳಲು ಎಷ್ಟು ಸಮಯ ಬೇಕು. ಒಂದೂವರೆ ಕೋಟಿ ಮನೆಗಳನ್ನು ಇಷ್ಟು ಕಡಿಮೆ ಸಮಯದಲ್ಲಿ ತಲುಪಲು ಸಾಧ್ಯವಿಲ್ಲ. ಮತ್ತೆ ಕಾಂತರಾಜ ವರದಿಯನ್ನು ಕಟ್ ಆಂಡ್ ಪೇಸ್ಟ್ ಮಾಡುತ್ತಾರೆ. ಕಾನೂನು ಪ್ರಕಾರ ಹಿಂದುಳಿದ ವರ್ಗದ ಆಯೋಗಕ್ಕೆ ಎಲ್ಲ ಜನಾಂಗದ ಗಣತಿ ಮಾಡಲು ಅಧಿಕಾರ ಇಲ್ಲ. ಕೇವಲ ರಾಜಕಿಯ ಉದ್ದೇಶಕ್ಕೆ ಸಮಿಕ್ಷೆ ಮಾಡುತ್ತಿದ್ದಾರೆ. ಈಗಲೂ ಸರಿಪಡಿಸಲು ಅವಕಾಶ ಇದೆ. ಸಿಎಂ ಸಿದ್ದರಾಮಯ್ಯ ತಿದ್ದಿಕೊಳ್ಳಿ, ಇಲ್ಲದಿದ್ದರೆ ಇದು ನಿಮ್ಮ ರಾಜಕೀಯ ಅಧಪತನದ ಸಂಕೇತವಾಗಲಿದೆ ಎಂದು ಹೇಳಿದರು.










































