ಸಂಚಾರಕ್ಕೆ ಸ್ವಂತ ಹೆಲಿಕಾಪ್ಟರ್‌ ಖರೀದಿಸಿದ ಸತೀಶ್‌ ಜಾರಕಿಹೊಳಿ, ಮುಂದಿನ ಚುನಾವಣೆಗೆ ಸಿದ್ಧತೆ?

Picture of Savistara

Savistara

Bureau Report

ಬೆಳಗಾವಿ: ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ನೂತನ ಹೆಲಿಕಾಪ್ಟರ್‌ ಖರೀದಿಸಿದ್ದಾರೆ.

ಬೆಂಗಳೂರು ಸಮೀಪದ ಜಕ್ಕೂರು ಏರೋಡ್ರೋಮ್‌ನಲ್ಲಿ ನೂತನ ಹೆಲಿಕಾಪ್ಟರ್‌ ಪರಿಶೀಲಿಸಿದ ಅವರು, ”ಶೀಘ್ರ ನೂತನ ಹೆಲಿಕಾಪ್ಟರ್‌ ನಮ್ಮೊಂದಿಗೆ ಹಾರಾಟಕ್ಕೆ ಸಿದ್ಧವಾಗಲಿದೆ,” ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ, ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿದ್ದಾರೆ. ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್‌ ಹನಮಣ್ಣರ, ಅಲಿ ಗೊರವನಕೊಳ್ಳ ಇದ್ದರು.

ವಿಶೇಷ ಹೆಲಿಕಾಪ್ಟರ್‌

ಆಧುನಿಕ ಸುರಕ್ಷಾ ವ್ಯವಸ್ಥೆ ಹೊಂದಿರುವ ಡಬಲ್‌ ಎಂಜಿನ್‌ನ ಹೆಲಿಕಾಪ್ಟರ್‌ ಇದಾಗಿದ್ದು, ಐವರು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ ಪ್ರಯಾಣಿಸಬಹುದಾಗಿದೆ. ಚಾಪರ್‌ ಸೀಟ್‌ ಸೌಲಭ್ಯವಿದ್ದು ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುತ್ತದೆ. ಸುಧಾರಿತ ವೈರ್‌ಲೆಸ್‌ ಸಂವಹನ ವ್ಯವಸ್ಥೆ ಹೊಂದಿದೆ.

ಮುಂದಿನ ಚುನಾವಣೆಗೆ ಸಿದ್ಧತೆ?

ಉತ್ತರ ಕರ್ನಾಟಕದಲ್ಲಿ ಸ್ವಂತ ಹೆಲಿಕಾಪ್ಟರ್‌ ಹೊಂದಿರುವ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸತೀಶ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ, ಅದರಲ್ಲೂ ಅಹಿಂದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ರಾಜ್ಯಾದ್ಯಂತ ಪಕ್ಷ ಸಂಘಟನೆ ಸೇರಿದಂತೆ ಮುಂಬರುವ ವಿಧಾನಸಭೆ ಚುನಾವಣೆ ಸಿದ್ಧತೆಗೆ ಅವರು ನೂತನ ಹೆಲಿಕಾಪ್ಟರ್‌ ಖರೀದಿಸಿದ್ದಾರೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಸ್ವಾಗತಕ್ಕೆ ವೇದಿಕೆ ಸಜ್ಜು

ಗದಗ: ಗದಗ ತಾಲೂಕು ಕುರುಬರ ಸಂಘದ ರಜತ ಮಹೋತ್ಸವ ಸಮಾರಂಭಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗುವ ಕಾರ್ಯಕ್ರಮದ ಮುಖ್ಯ ವೇದಿಕೆ ಭವ್ಯವಾಗಿ ಸಜ್ಜುಗೊಂಡಿದೆ.

ಇಲ್ಲಿನ ಕನಕ ಭವನದಲ್ಲಿರುವ ನೂತನವಾಗಿ ನಿರ್ಮಿಸಿರುವ ‘ರಾಕೇಶ ಸಿದ್ದರಾಮಯ್ಯ ಸಭಾಂಗಣ’ದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕೊನೆಯ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ. ಪೊಲೀಸರು ಸಹ ಭದ್ರತಾ ತಪಾಸಣೆ ಕೈಗೊಂಡಿದ್ದಾರೆ.ಸಿಎಂ ಸಿದ್ದರಾಮಯ್ಯ ವಿಶೇಷ ವಿಮಾನದ ಮೂಲಕ ಬೆಂಗಳೂರನಿಂದ ಹುಬ್ಬಳ್ಳಿಗೆ ಆಗಮಿಸಿ, ರಸ್ತೆ ಮಾರ್ಗವಾಗಿ ಗದಗ ನಗರದ ಕನಕ ಭವನಕ್ಕೆ ಆಗಮಿಸಲಿದ್ದಾರೆ. ಗದಗದಲ್ಲಿ ಮುಖ್ಯಮಂತ್ರಿ ಸಾಗುವ ರಸ್ತೆಗಳ ದುರಸ್ತಿ, ಸ್ವಚ್ಛತೆಗೆ ನಗರಸಭೆ ಅಧಿಕಾರಿಗಳು ಮುಂದಾಗಿದ್ದು, ಪೌರ ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಕುರುಬರ ಸಂಘದ ರಜತ ಮಹೋತ್ಸವ ಜೊತೆಗೆ ಸ್ಮರಣ ಸಂಚಿಕೆ ಬಿಡುಗಡೆ, ಸಂಘಜೀವಿ ಫಕೀರಪ್ಪ ಹೆಬಸೂರ ಅವರ ಅಭಿನಂದನಾ ಗ್ರಂಥ ಬಿಡುಗಡೆ, ರಾಜ್ಯಮಟ್ಟದ ಕನಕೋತ್ಸವ ಸಹ ನಡೆಯಲಿದೆ.ಮುಖ್ಯಮಂತ್ರಿಗಳ ಜೊತೆಗೆ ಕಾನೂನು ಸಚಿವ ಎಚ್‌.ಕೆ. ಪಾಟೀಲ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಕಾರ್ಮಿಕ ಸಚಿವ ಸಂತೋಷ ಲಾಡ್‌, ರಾಜ್ಯ ಪಂಚ ಯೋಜನಾ ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯಾಧ್ಯಕ್ಷ ಎಚ್‌.ಎಂ. ರೇವಣ್ಣ, ರೋಣ ಶಾಸಕ ಜಿ.ಎಸ್‌ . ಪಾಟೀಲ, ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಸಚಿವರು, ಶಾಸಕರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ.

[t4b-ticker]
error: Content is protected !!