ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ಕೆಲ ದೇವಾಲಯಗಳ ಸೇವಾ ಶುಲ್ಕವನ್ನು ಸದ್ದಿಲ್ಲದೆ ಏರಿಕೆ ಮಾಡಲಾಗಿದೆ.ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ 14 ದೇವಸ್ಥಾನಗಳ ಸೇವಾಶುಲ್ಕ ಏರಿಕೆ ಮಾಡಲಾಗಿದ್ದು, ಅಕ್ಟೋಬರ್ 1ರಿಂದ ಪರಿಷ್ಕೃತ ದರ ಅನ್ವಯವಾಗಲಿದೆ. ಕಳೆದ ಐದು ವರ್ಷಗಳಿಂದ ಸೇವಾ ಶುಲ್ಕ ಪರಿಷ್ಕರಣೆ ಮಾಡದ ಹಾಗೂ ಯಾವ ದೇವಾಲಯಗಳು ಸೇವಾ ಶುಲ್ಕ ಪರಿಷ್ಕರಣೆಗೆ ಮನವಿ ಸಲ್ಲಿಸಿದ್ದವೋ ಆ ದೇವಾಲಯಗಳ ಸೇವಾ ಶುಲ್ಕವನ್ನು ಆಗಮ ಪಂಡಿತರ ಪರಿಶೀಲನೆ ನಂತರ ಶೇ.5-10ರವರೆಗೆ ಮತ್ತು ಕೆಲವು ದೇವಾಲಯಗಳಿಗೆ ಶೇ.15ರವರೆಗೆ ಮುಜರಾಯಿ’ ಇಲಾಖೆ ಆಯುಕ್ತರು ಏರಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.ಈ ನಡುವೆ, ”ಇದು ದೇವಾಲಯಗಳ ಆಡಳಿತ ಮಂಡಳಿ ತೀರ್ಮಾನವೇ ಹೊರತು ಸರಕಾರದ ನಿರ್ಧಾರವಲ್ಲ.” ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.ಇನ್ನು, ನಾಗಾರಾಧನೆ, ದೈವಾರಾಧನೆಗೆ ಹೆಸರಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ 2010ರಲ್ಲಿ ಸೇವಾಶುಲ್ಕ ಏರಿಕೆ ಮಾಡಲಾಗಿತ್ತು. 15 ವರ್ಷಗಳ ನಂತರ ಈಗ ಸೇವಾ ಶುಲ್ಕ ಏರಿಕೆ ಮಾಡಲಾಗಿದೆ. ಕುಕ್ಕೆಯಲ್ಲಿ ಆಶ್ಲೇಷ ಪೂಜೆ ಸೇವೆಗೆ ಈ ಹಿಂದೆ ಇದ್ದ ದರ 400 ರೂಪಾಯಿ, ಪರಿಷ್ಕೃತ ದರ 500 ರೂ.ಗೆ ಏರಿಕೆಯಾಗಿದೆ. ನಾಗಪ್ರತಿಷ್ಠೆಗೆ ಈ ಹಿಂದೆ ಇದ್ದ ದರ 400 ರೂಪಾಯಿ. ಆದರೆ, ಧಾರ್ಮಿಕ ದತ್ತಿ ಇಲಾಖೆ ಪರಿಷ್ಕೃತ ದರ 500 ರೂಪಾಯಿ ಹೆಚ್ಚಿಸಿದೆ. ಹೀಗೆ ಉಳಿದ ಸೇವೆಗಳಲ್ಲೂ ಸಾಕಷ್ಟು ಹೆಚ್ಚಳ ಮಾಡಲಾಗಿದೆ.
ಯಾವ್ಯಾವ ದೇವಸ್ಥಾನಗಳಲ್ಲಿ ಶುಲ್ಕ ಏರಿಕೆ?
ಬೆಂಗಳೂರು ನಗರ ಮಲ್ಲೇಶ್ವರದ ಶ್ರೀ ಯೋಗ ನರಸಿಂಹಸ್ವಾಮಿ ದೇವಾಲಯ, ಶ್ರೀ ನಂದಿತೀರ್ಥ ಸ್ವಾಮಿ ದೇವಾಲಯ, ಚಿಕ್ಕಬಳ್ಳಾಪುರ ಜಿಲ್ಲೆಗೌರಿಬಿದನೂರು ತಾಲೂಕಿನ ವಿಧುರಾಶ್ವತ್ಥ ನಾರಾಯಣಸ್ವಾಮಿ ದೇವಾಲಯ, ಜಿಲ್ಲೆಯ ತಲಕಾಯಲಬೆಟ್ಟದ ಶ್ರೀ ಭೂ ನೀಳ ಸಮೇತ ವೆಂಕಟರಮಣ ಸ್ವಾಮಿ ದೇವಾಲಯ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ, ಸೌತಡ್ಕದ ಮಹಾಗಣಪತಿ ದೇವಾಲಯ, ಮರೋಳಿಯ ಸೂರ್ಯನಾರಾಯಣ ಸ್ವಾಮಿ ದೇವಾಲಯ, ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ) ಹೊಸಹಳ್ಳಿಯ ಆಂಜನೇಯಸ್ವಾಮಿ ದೇವಾಲಯ, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಹಾಲು ರಾಮೇಶ್ವರ ದೇವಾಲಯ, ರಾಯಚೂರು ಜಿಲ್ಲೆ ದೇವಸೂಗೂರಿನ ಸೂಗೂರೇಶ್ವರಸ್ವಾಮಿ ದೇವಾಲಯ, ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಮಂದಾರ್ತಿಯ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ, ಕೊಪ್ಪಳ ಜಿಲ್ಲೆಯ ಶ್ರೀ ಹುಲಿಗೆಮ್ಮ ದೇವಾಲಯ, ಮಂಡ್ಯ ಜಿಲ್ಲೆ ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವಾಲಯ.
ಪ್ರತಿ ಐದು ವರ್ಷಕ್ಕೊಮ್ಮೆ ಸೇವೆಗಳಿಗೆ ತಗಲುವ ಖರ್ಚು ವೆಚ್ಚಕ್ಕೆ ತಕ್ಕಂತೆ ದರ ಪರಿಷ್ಕರಣೆ ಮಾಡಬೇಕು. ಆದರೆ, ಕೆಲ ದೇವಾಲಯಗಳ ಸೇವಾ ಶುಲ್ಕ ಪರಿಷ್ಕರಣೆ ಮಾಡಿರಲಿಲ್ಲ. ಈಗ ಅಭಿಷೇಕ, ಅರ್ಚನೆ ಸೇರಿದಂತೆ ಹಲವು ಸೇವೆಗಳಿಗೆ ಬಳಸುವ ಪದಾರ್ಥಗಳ ದರವೂ ಏರಿಕೆಯಾಗಿದೆ. ಆಗಮ ಪಂಡಿತರು, ದೇವಾಲಯಗಳ ಆಡಳಿತ ಮಂಡಳಿಗಳು ಸೇವಾ ಶುಲ್ಕ ಪರಿಷ್ಕರಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದವು. ಹೀಗಾಗಿ, ಪ್ರಸ್ತಾವನೆ ಸಲ್ಲಿಸಿದ್ದ ದೇವಾಲಯಗಳಿಗೆ ಮಾತ್ರ ಭಕ್ತರಿಗೂ ಹೊರೆಯಾಗದಂತೆ, ದೇವಾಲಯಗಳಿಗೂ ನಷ್ಟವಾಗದಂತೆ ಶೇ.5-10ರಷ್ಟು ಏರಿಕೆ ಮಾಡಲಾಗಿದೆ.
–ಎಂ.ವಿ. ವೆಂಕಟೇಶ್ ಆಯುಕ್ತರು, ಮುಜರಾಯಿ ಇಲಾಖೆ











































