ಸಪ್ತಕೋಟಿ ಕನ್ನಡಿಗರ ಗಣತಿ; 1.5 ಲಕ್ಷ ಗಣತಿದಾರರಿಗೆ ತರಬೇತಿ

Picture of Savistara

Savistara

Bureau Report

ಬೆಂಗಳೂರು: ಸಮಾನತೆ ಮತ್ತುಸಾಮಾಜಿಕ ನ್ಯಾಯವನ್ನು ಎಲ್ಲಾ ವರ್ಗದವರಿಗೆ ನೀಡುವ ಉದ್ದೇಶದಿಂದ ಸರ್ಕಾರ ಹಮ್ಮಿಕೊಂಡಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಸೋಮವಾರ (ಸೆ. 22) ಆರಂಭವಾಗಲಿದ್ದು, ಅ.7ರವರೆಗೆ ನಡೆಯಲಿದೆ. ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.ವಿವಿಧ ಸಮುದಾಯಗಳ ಆತಂಕ, ಆಕ್ಷೇಪ, ಕಳವಳದ ನಡುವೆ ಸಮೀಕ್ಷೆ ನಡೆಸಲು ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಒಂದೂವರೆ ಲಕ್ಷಕ್ಕಿಂತ ಹೆಚ್ಚು ಗಣತಿದಾರರಿಗೆ ತರಬೇತಿ ನೀಡಲಾಗಿದೆ.

ಪೂರಕವಾಗಿ ಆಶಾ ಕಾರ್ಯಕರ್ತರು, ಎನ್‌ಎಸ್ ಎಸ್ ಸ್ವಯಂಸೇವಕರನ್ನು ಜಾಗೃತಿ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.ಅಧ್ಯಯನಕ್ಕೆ ಕಾರಣ: ವಿಭಿನ್ನ ಸ್ಥಳಗಳಲ್ಲಿ ವಾಸವಾಗಿರುವ ಅಥವಾ ವಿಭಿನ್ನ ವೃತ್ತಿಗಳಲ್ಲಿ ತೊಡಗಿರುವ ವ್ಯಕ್ತಿಗಳು ಹಾಗೂ ಜನ ಸಮೂಹಗಳಿಗೆ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಸ್ಥಾನಮಾನ ಸೌಲಭ್ಯ, ಅವಕಾಶಗಳಲ್ಲಿ ತಾರತಮ್ಯ ತೊಡೆದು ಹಾಕಲು ಕಾರ್ಯಕ್ರಮ ರೂಪಿಸಲು ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ಅನಿವಾರ್ಯ ಎಂಬುದು ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ ವಿವರಣೆಯಾಗಿದೆ.

ಸಮೀಕ್ಷೆ ಬಳಿಕ ಶಿಫಾರಸು: ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಸಹಿತ ರಾಜ್ಯದ ಪ್ರತಿ ಕುಟುಂಬದ ಸಮಗ್ರ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತದೆ.

ಗಣತಿ ಹೇಗೆ ನಡೆಯುತ್ತದೆ?

1. ಎಸ್ಕಾಂ ಪ್ರತಿನಿಧಿಗಳು ಪ್ರತಿ ಮನೆಗೆ ಅಂಟಿಸಿರುವ ಸ್ಟಿಕರ್‌ನಲ್ಲಿ ವಿಶಿಷ್ಟ ಮನೆ ಸಂಖ್ಯೆ ನೀಡಲಾಗಿದ್ದು, ಅದನ್ನು ಸಮೀಕ್ಷೆದಾರರು ಗಮನಿಸಿ ಜಿಯೋ ಕೋಆರ್ಡಿನೇಟ್ ಮೂಲಕ ಖಚಿತಪಡಿಸಿಕೊಳ್ಳುವರು.

2. ಮೊಬೈಲ್ ಅಪ್ಲಿಕೇಷನ್‌ನಲ್ಲಿ ಪಡಿತರ ಚೀಟಿ ಸಂಖ್ಯೆ ದಾಖಲಿಸುತ್ತಿದ್ದಂತೆ ಕುಟುಂಬಕ್ಕೆ ಸಂಬಂಧಿಸಿದ ಹಲವು ಮಾಹಿತಿ ಆಟೋ ಪಾಪ್ಯುಲೇಟ್‌ ಆಗಲಿದೆ. ಇದರಿಂದ ಸಮೀಕ್ಷಕರ ಕಾರ್ಯಭಾರ ಸುಲಭವಾಗಲಿದೆ.

3. ಕಾಲಂ ಸಂಖ್ಯೆ 1ರಿಂದ 40ರವರೆಗೆ ಕುಟುಂಬದ ಪ್ರತಿ ಸದಸ್ಯರಿಗೆ ಸಂಬಂಧಿಸಿದ ಮಾಹಿತಿ, ಕಾಲಂ 40ರಿಂದ 60 ವರೆಗೆ ಕುಟುಂಬಕ್ಕೆ ಸಂಬಂಧಿಸಿದ ಮಾಹಿತಿ ದಾಖಲಿಸಲಾಗುತ್ತದೆ. ಉಪ ಜಾತಿ ಮತ್ತು ಜಾತಿಗಿರುವ ಪರ್ಯಾಯ ಪದ ಇದ್ದರೆ ಮಾಹಿತಿ ಹೇಳಿದರಷ್ಟೇ ದಾಖಲಿಸಲಾಗುತ್ತದೆ.

4. ವಸತಿ ನಿಲಯ, ಹೋಟೆಲ್, ಪೇಯಿಂಗ್ ಗೆಸ್ಟ್ ಗೃಹ ಸೇರಿ ಇತರೆ ತಾತ್ಕಾಲಿಕವಾಗಿ ವಾಸವಾಗಿರುವವರನ್ನು ಸಮೀಕ್ಷೆಗೆ ಒಳಪಡಿಸುವಂತಿಲ್ಲ. ಏಕೆಂದರೆ ಅವರ ಪಾಲಕರಿಂದ ಸಂಗ್ರಹಿಸಲಾಗಿರುತ್ತದೆ.

[t4b-ticker]
error: Content is protected !!