ಗುವಾಹಟಿ: ವಿರೋಧ ಪಕ್ಷಗಳ ಆಕ್ಷೇಪದ ನಡುವೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಗೆ ಅಸ್ಸಾಂ ವಿಧಾನಸಭೆಯು ಬುಧವಾರ ಅಂಗೀಕಾರ ನೀಡಿದೆ.
ವಿವಾಹ, ವಿಚ್ಛೇದನ ಹಾಗೂ ಸಹ-ಜೀವನದ ಸಂಬಂಧಗಳಿಗೆ ಧರ್ಮಾತೀತವಾಗಿ ಏಕರೂಪದ ಕಾನೂನು ಚೌಕಟ್ಟು ರೂಪಿಸುವ ಪ್ರಸ್ತಾವವನ್ನು ಈ ಮಸೂದೆ ಒಳಗೊಂಡಿದೆ.ಈ ಮೂಲಕ ಯುಸಿಸಿಗೆ ಅಂಗೀಕಾರ ನೀಡಿದ ಮೂರನೇ ರಾಜ್ಯವೆಂದು ಅಸ್ಸಾಂ ಗುರುತಿಸಿಕೊಂಡಿದೆ. ಇದಕ್ಕೂ ಮುನ್ನ ಉತ್ತರಾಖಂಡ ಹಾಗೂ ಗುಜರಾತ್ ರಾಜ್ಯಗಳು ಯುಸಿಸಿ ಅಂಗೀಕರಿಸಿದ್ದವು.ಅಸ್ಸಾಂ ವಿಧಾನಸಭೆಯಲ್ಲಿ ಮಸೂದೆ ಕುರಿತಾದ ವಿಸ್ತ್ರತ ಚರ್ಚೆಯ ಬಳಿಕವೂ ವ್ಯಾಪಕ ಸಮಾಲೋಚನೆಗಾಗಿ ಮಸೂದೆಯನ್ನು ಪರಿಶೀಲನಾ ಸಮಿತಿಗೆ ಕಳುಹಿಸಬೇಕೆಂದು ವಿಪಕ್ಷಗಳ ಸದಸ್ಯರು ಪಟ್ಟು ಹಿಡಿದರು.
ನಂತರ, ಧ್ವನಿಮತದ ಮೂಲಕ ಮಸೂದೆಗೆ ಅನುಮೋದನೆ ನೀಡಲಾಯಿತು.ಸಭಾತ್ಯಾಗ ಮಾಡಿದ ಟಿಎಂಸಿ ಶಾಸಕ: ಯುಸಿಸಿ ಮಸೂದೆಯಲ್ಲಿನ ಕೆಲವು ನಿಬಂಧನಗಳನ್ನು ವಿರೋಧಿಸಿ, ಅಸ್ಸಾಂ ವಿಧಾನಸಭೆಯಲ್ಲಿರುವ ಟಿಎಂಸಿ ಪಕ್ಷದ ಏಕೈಕ ಶಾಸಕ ಶರ್ಮಾನ್ ಅಲಿ ಅಹ್ಮದ್ ಬುಧವಾರ ಸಭಾತ್ಯಾಗ ಮಾಡಿದರು.
‘1925ರಲ್ಲೇ ಯುಸಿಸಿಗೆ ಬೇಡಿಕೆ ಇಟ್ಟಿದ್ದ ಕಾಂಗ್ರೆಸ್’
1925ರಲ್ಲಿ ಮೊದಲಿಗೇ ತಾನೇ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಪ್ರತಿಪಾದಿಸಿದ್ದ ಕಾಂಗ್ರೆಸ್ ಇದೀಗ ಒಂದು ನಿರ್ದಿಷ್ಟ ಸಮುದಾಯದ ಪ್ರತಿನಿಧಿಯಾಗಿ ಬದಲಾಗಿದೆ. ಹೀಗಾಗಿ ಕಾಂಗ್ರೆಸ್ ಇನ್ನು ಮುಂದೆ ಜಾತ್ಯತೀತ ಎನಿಸಿಕೊಳ್ಳುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.ಯುಸಿಸಿ ಕುರಿತಾದ ಚರ್ಚೆಯಲ್ಲಿ ಮಾತನಾಡಿದ ಅವರು ಪ್ರಸ್ತಾವಿತ ಮಸೂದೆಯು ಸಂವಿಧಾನದ 44ನೇ ವಿಧಿಯ ಅನ್ವಯ ರಚನೆಯಾಗಿದೆಯೇ ವಿನಃ ಬಿಜೆಪಿ ಅಥವಾ ಆರ್ಎಸ್ಎಸ್ನ ಸಿದ್ಧಾಂತಗಳನ್ನು ಆಧರಿಸಿಲ್ಲ ಎಂದಿದ್ದಾರೆ.
ಜತೆಗೆ ಯುಸಿಸಿಗೆ ದೀರ್ಘವಾದ ಇತಿಹಾಸವಿದ್ದು 1925ರಲ್ಲಿ ಖುದ್ದು ಕಾಂಗ್ರೆಸ್ ಯುಸಿಸಿಗೆ ಬೇಡಿಕೆ ಇಟ್ಟಿತ್ತು.1937ರಲ್ಲಿ ಜವಾಹರ ಲಾಲ್ ನೆಹರೂ ಅವರೇ ಯುಸಿಸಿಯನ್ನು ಶಿಫಾರಸು ಮಾಡಿದ್ದರು. ಆದರೆ ಈಗ ಅದೇ ಕಾಂಗ್ರೆಸ್ ಕುರಾನ್ ಹಾಗೂ ಷರತ್ ಆಯಾಮವನ್ನು ಪರಿಗಣಿಸಿ ಯುಸಿಸಿಯನ್ನು ವಿರೋಧಿಸುತ್ತಿದೆ ಹಿಂದೂ ಕ್ರೈಸ್ತ ಅಥವಾ ಬುಡಕಟ್ಟು ಜನರ ಆಯಾಮವನ್ನು ಪರಿಗಣಿಸುತ್ತಿಲ್ಲ ಎಂದೂ ಶರ್ಮಾ ಹೇಳಿದ್ದಾರೆ.










































