ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳಿಗೆ ತಕ್ಷಣದ ಚಿಕಿತ್ಸೆ ಒದಗಿಸುವ ಗುರಿಯೊಂದಿಗೆ ಜಾರಿಗೆ ತರಲಾದ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಎಲ್ಲ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳಿಗೆ ತಕ್ಷಣದ ಚಿಕಿತ್ಸೆ ಒದಗಿಸುವ ಗುರಿಯೊಂದಿಗೆ ಜಾರಿಗೆ ತರಲಾದ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಎಲ್ಲ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದ್ದಾರೆ.
“ಈ ಯೋಜನೆಯಿಂದ ಸಾವಿರಾರು ಜನರ ಜೀವ ಉಳಿಸಲು ಸಾಧ್ಯವಾಗಿದೆ. ಎದೆನೋವು ಕಾಣಿಸಿಕೊಂಡವರು ಯಾವುದೇ ನಿರ್ಲಕ್ಷ್ಯ ಮಾಡದೆ, ಹೃದಯ ಜ್ಯೋತಿ ಯೋಜನೆಯಡಿ ಉಚಿತ ತಪಾಸಣೆ ಮಾಡಿಸಿಕೊಂಡು, ಅಗತ್ಯ ಚಿಕಿತ್ಸೆ ಪಡೆಯಬೇಕು” ಎಂದು ಸಚಿವರು ಸಲಹೆ ನೀಡಿದ್ದಾರೆ.
9 ಲಕ್ಷಕ್ಕೂ ಹೆಚ್ಚು ಇಸಿಜಿ ಪರೀಕ್ಷೆ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಈವರೆಗೆ 9.21.020 ಜನರಿಗೆ ಇಸಿಜಿ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 13,515 ಸ್ಟೆಮಿ (ಹೃದಯ ಸ್ನಾಯುವಿನ ಸೋಂಕು) ಪ್ರಕರಣಗಳು ಪತ್ತೆಯಾಗಿವೆ. ಥಾಂಬೊಲಿಸಿಸ್, ಆಂಜಿಯೋಪ್ಲಾಸ್ಟಿ. ಸ್ಟೆಂಟ್ ಮತ್ತು ಬೈಪಾಸ್ ಶಸ್ತ್ರಚಿಕಿತ್ಸೆಯ ಮೂಲಕ 7,815 ಜನರು ಚಿಕಿತ್ಸೆಪಡೆದಿದ್ದಾರೆ ಎಂದು ವಿಶ್ವ ಹೃದಯ ದಿನದ ಸಂದರ್ಭದಲ್ಲಿಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿತಿಳಿಸಲಾಗಿದೆ.
1,106 ಜನರಿಗೆ ತಪ್ಪಿದ ಹೃದಯಾಘಾತ ಟೆನೆಸ್ಟೆಪ್ಲೇಸ್ ಚುಚ್ಚುಮದ್ದಿನ ಸಹಾಯದಿಂದ 1,106 ಜನರಿಗೆ ಹಠಾತ್ ಹೃದಯಾಘಾತದಿಂದ ಪಾರಾಗಲು ಸಾಧ್ಯವಾಗಿದೆ. ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ 2023ರ ಮಾರ್ಚ್ನಲ್ಲಿ ಈ ಯೋಜನೆಯ ಮೊದಲ ಹಂತ ಆರಂಭವಾಯಿತು. 2024ರ ಮಾರ್ಚ್ನಲ್ಲಿ ಎರಡನೇ ಹಂತದಲ್ಲಿ ರಾಜ್ಯಾದ್ಯಂತ ಯೋಜನೆಯನ್ನು ವಿಸ್ತರಿಸಲಾಯಿತು.











































