ಅ.23ಕ್ಕೆ ಕಲಬುರಗಿಯಲ್ಲಿ RSS ಪಥಸಂಚಲನ : ‘ಗಣವೇಷ ಹಾಕಿಕೊಂಡು ಬನ್ನಿ ನಿಮಗೆ ಸ್ವಾಗತ’ ಎಂದ ಖರ್ಗೆ!

Picture of Savistara

Savistara

Bureau Report

ಬೆಂಗಳೂರು / ಕಲಬುರಗಿ : ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಖಾಸಗಿ ಸಂಸ್ಥೆಗಳು, ಸರ್ಕಾರಿ ಸ್ಥಳಗಳನ್ನು ಬಳಸುವ ಮುನ್ನ, ಅನುಮತಿಯನ್ನು ಪಡೆಯುವುದು ಕಡ್ಡಾಯ ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಈ ಸಂಬಂಧ, ಅಧಿಕೃತ ಆದೇಶವೂ ಇನ್ನೇನು ಹೊರಬೀಳಲಿದೆ.

ಈ ನಡುವೆ, ಅಕ್ಟೋಬರ್ 23ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಪಥಸಂಚಲನವನ್ನು ಆಯೋಜಿಸಿದೆ. ಅದಕ್ಕೆ, ಖರ್ಗೆಯವರ ತವರೂರು ಕಲಬುರಗಿಯನ್ನು ಆಯ್ದುಕೊಂಡಿದೆ. ಆದರೆ, ಬದಲಾದ ನೀತಿಯ ಪ್ರಕಾರ, ಈಗ ಜಿಲ್ಲಾಡಳಿತದ ಅನುಮತಿಯನ್ನು ಸಂಘ ಪಡೆಯಬೇಕಿದೆ.

ಈ ಸಂಬಂಧ ಮಾತನಾಡಿರುವ ಐಟಿಬಿಟಿ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ, ಕಳೆದ ಬಾರಿಯೂ ಅವರಿಗೆ ಬಿಸ್ಕಿಟ್, ಟೀ ಕೊಟ್ಟಿದ್ದೆವು. ಈ ಬಾರಿಯೂ ಕೊಡುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ. ಕಳೆದ ಬಾರಿ, ಬಿಜೆಪಿ ಅವರ ನಿವಾಸದ ಮುನ್ನ ಪ್ರತಿಭಟನೆಯನ್ನು ಆಯೋಜಿಸಿತ್ತು.

ಅಕ್ಟೋಬರ್ 23ಕ್ಕೆ ಯಾಕೆ, ದೀಪಾವಳಿಯ ವೇಳೆ ಮಾಡಬಹುದಿತ್ತಲ್ಲವೇ, ಇವರಿಗೆ ಅನುಕೂಲ ಆಗುವ ಹಾಗೇ ಪದ್ದತಿಯನ್ನು ಜಾರಿಗೆ ತರುತ್ತಾರೆ. ಅವರು, ಅನುಮತಿಯನ್ನು ಪಡೆದು, ಪಥಸಂಚಲನವನ್ನು ಮಾಡಲಿ. ನಮ್ಮದೇನೂ ಅಭ್ಯಂತರವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

” ಬಿಜೆಪಿಯ ನಾಯಕರು ಕಳೆದ ಒಂದು ವರ್ಷದಲ್ಲಿ ನಾಲ್ಕೈದು ಸಲ ಕಲಬುರಗಿಗೆ ಬಂದಿದ್ದಾರೆ. ಬಂದಿದ್ದು ರೈತರ ಸಮಸ್ಯೆಗೆ ಅಲ್ಲ, ಬಂದಿದ್ದು ನನ್ನ ವಿರುದ್ದ ಹೋರಾಟ ಮಾಡುವುದಕ್ಕೆ. ಮೆರವಣಿಗೆಯನ್ನಾದರೂ ಮಾಡಲಿ, ಪಥಸಂಚಲನವನ್ನಾದರೂ ಮಾಡಲಿ, ಆದರೆ ನಿಯಮವನ್ನು ಪಾಲಿಸಲಿ” ಎಂದು ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರಿಗೆ ಹೇಳಿದ್ದಾರೆ.

ಈ ಬಾರಿಯ ಪಥಸಂಚಲನಕ್ಕೆ ಬಿಜೆಪಿ ನಾಯಕರ ಎಲ್ಲಾ ಮಕ್ಕಳು ಬರಬೇಕು, ಇದು ನನ್ನ ವಿನಂತಿ. ನಿಮ್ಮನಿಮ್ಮ ಮಕ್ಕಳು ಗಣವೇಷ ಹಾಕಿಕೊಂಡು ನಮ್ಮ ಊರಿಗೆ ಬನ್ನಿ, ನಾವು ನಿಮ್ಮನ್ನು ಸ್ವಾಗತಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ, ವ್ಯಂಗ್ಯವಾಡಿದ್ದಾರೆ.ಹೋದ ಬಾರಿ ನನ್ನ ವಿರುದ್ದ ಪ್ರತಿಭಟನೆ ಮಾಡಿದಾಗ ಟೀ, ಕಾಫಿ, ಎಳನೀರನ್ನು ಕೊಟ್ಟಿದ್ದೆವು. ಈ ಬಾರಿಯೂ ವ್ಯವಸ್ಥೆಯನ್ನು ಮಾಡುತ್ತೇವೆ. ನಾನು ಆಗಲೇ ಎದಿದ್ದೇನೆ, ಅವರೇನು ನನಗೆ ಎಚ್ಚರಿಕೆ ಕೊಡುವುದು. ಎದ್ದಿರುವುದಕ್ಕೆ ಮಾತನಾಡುತ್ತಿರುವುದು ಎಂದು ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರಿಗೆ ಹೇಳಿದ್ದಾರೆ.

ನನಗೆ ಪ್ರಬುದ್ದತೆ ಬಂದಿದೆ, ಪ್ರಬುದ್ದ ಸಮಾಜ ನಿರ್ಮಾಣ ಮಾಡುವುದು ಬಾಬಾಸಾಹೇಬರ ಕನಸಾಗಿತ್ತು. ಜನರು ನಮಗೆ ಆಶೀರ್ವಾದವನ್ನು ಮಾಡಿದ್ದಾರೆ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸವನ್ನು ಮಾಡುವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ನೆಲದ ಕಾನೂನಿನ ಪಾಠವನ್ನು ನಾನು ಬಿಜೆಪಿ ನಾಯಕರಿಗೆ ಮಾಡಲು ಸಿದ್ದ. ಕಲಬುರಗಿಯಲ್ಲಿ ಅನುಮತಿಯನ್ನು ಪಡೆದು, ಪಥಸಂಚಲನ ಮಾಡಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಯನ್ನು ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧಿಸಬೇಕೆಂದು ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು.

[t4b-ticker]
error: Content is protected !!