ಮೈಸೂರು: ‘ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಷಾಢದಲ್ಲಿ ದೇವಿಯ ದರ್ಶನಕ್ಕೆ ₹ 2 ಸಾವಿರ ಟಿಕೆಟ್ ಮಾಡುವ ಅವಶ್ಯಕತೆ ಇರಲಿಲ್ಲ’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.
ಇಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ‘ಟಿಕೆಟ್ ಬಗ್ಗೆ ಸಭೆ ನಡೆಸಿ ತೀರ್ಮಾನಿಸಬೇಕಿತ್ತು. ಯಾವ ರೀತಿ ನಿರ್ಧಾರ ಕೈಗೊಂಡಿದ್ದಾರೆ ಎನ್ನುವುದು ಗೊತ್ತಿಲ್ಲ. ನನಗೆ ಗೊತ್ತಿರುವಂತೆ ಯಾವುದೇ ಸಭೆ ನಡೆಸಿಲ್ಲ. ಏಕಾಏಕಿ ನಿರ್ಧರಿಸಿದ್ದಾರೆ. ಜನಸಾಮಾನ್ಯರ ದೃಷ್ಟಿಯಿಂದ ನೋಡಿದರೆ ಇದು ಸರಿಯಲ್ಲ. ಟಿಕೆಟ್ಗಳನ್ನು ಆನ್ಲೈನ್ನಲ್ಲಿ ತೆಗೆದುಕೊಳ್ಳಬೇಕಾ, ಇಲ್ಲಿಗೆ ಬಂದೇ ತೆಗೆದುಕೊಳ್ಳಬೇಕಾ ಎನ್ನುವ ಸ್ಪಷ್ಟತೆಯೂ ಇಲ್ಲ. ನಮಗೆ ಮಾಹಿತಿಯೂ ಬಂದಿಲ್ಲ’ ಎಂದು ತಿಳಿಸಿದರು.’ದೇವಸ್ಥಾನದ ವಿಚಾರದಲ್ಲಿ ನಾವು ನ್ಯಾಯಾಲಯದ ಮೆಟ್ಟಿಲೇರಿದ್ದೇವೆ. ನಮ್ಮ ಕಡೆಯಿಂದ ಯಾರಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ತಲುಪಿಸಬೇಕೋ ತಲುಪಿಸುತ್ತೇನೆ. ಹೀಗೆ ₹2ಸಾವಿರ ಟಿಕೆಟ್ ಮಾಡಿರುವವರಿಗೆ ದೇವರೇ ಬುದ್ದಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದರು.











































