ಅಮರನಾಥ ಆರಂಭವಾದ ಹಿನ್ನೆಲೆಯಲ್ಲಿ ಯಾತ್ರಿಕರಿಗೆ ಪ್ರಧಾನಿ ಮೋದಿ ಪತ್ರವೊಂದನ್ನು ಬರೆದು ಶುಭಕೋರಿದ್ದಾರೆ. ಅಮರನಾಥ ಯಾತ್ರೆಗೆ ತೆರಳುತ್ತಿರುವ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ. ನಿಮ್ಮ ಪ್ರಯಾಣ ಸುರಕ್ಷಿತ, ಸುಖಕರವಾಗಿರಲಿ ಎಂದು ಹಾರೈಸಿದ್ದಾರೆ.ಅಮರನಾಥ ಯಾತ್ರೆ ಕೇವಲ ಧಾರ್ಮಿಕ ಪ್ರವಾಸವಲ್ಲ. ಅದು ಭಕ್ತಿ. ಆತ್ಮಸಾಕ್ಷಾತ್ಕಾರ ಹಾಗೂ ರಾಷ್ಟ್ರೀಯ ಏಕತೆಯ ಸಂಕೇತವಾಗಿದೆ ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಯಾತ್ರೆಯ ಯಶಸ್ವಿ ಆಯೋಜನೆಗಾಗಿ ಶ್ರಮಿಸುತ್ತಿರುವ ಭದ್ರತಾ ಪಡೆಗಳು, ಆಡಳಿತ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಹಾಗೂ ಸ್ವಯಂಸೇವಕರ ಸೇವೆಯನ್ನು ಅವರು ಶ್ಲಾಘಿಸಿದ್ದಾರೆ. ಇದರ ಜತೆಗೆ ಐದು ಸಂಕಲ್ಪಗಳನ್ನು ಮಾಡುವಂತೆ ಕರೆ ನೀಡಿದ್ದಾರೆ.
1. ಯಾತ್ರಾ ಮಾರ್ಗದಲ್ಲಿ ಎಲ್ಲೆಂದರಲ್ಲಿ ಕಸ ಹರಡದೆ ಸ್ವಚ್ಛತೆಯನ್ನು ಕಾಪಾಡಿ, ಪರಿಸರವನ್ನು ಶುಚಿಯಾಗಿಡಬೇಕು.
2. ಆಡಳಿತ ಹಾಗೂ ಭದ್ರತಾ ಪಡೆಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುರಕ್ಷಿತವಾಗಿ ಯಾತ್ರೆ ಕೈಗೊಳ್ಳಬೇಕು.
3. ‘ವೋಕಲ್ ಫಾರ್ ಲೋಕಲ್’ ಪರಿಕಲ್ಪನೆಯಡಿ ಯಾತ್ರೆಯ ವೆಚ್ಚದ ಕನಿಷ್ಠ ಶೇ.10ರಷ್ಟು ಮೊತ್ತವನ್ನು ಜಮ್ಮು-ಕಾಶ್ಮೀರದ ಸ್ಥಳೀಯ ಉತ್ಪನ್ನಗಳ ಖರೀದಿಗೆ ಮೀಸಲಿಟ್ಟು ಅಲ್ಲಿನ ಜನರ ಜೀವನೋಪಾಯಕ್ಕೆ ಬೆಂಬಲ ನೀಡಬೇಕು.
4. ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ಯಾತ್ರೆಯ ಬಳಿಕ ಒಂದು ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬೇಕು.
5. ನೇಷನ್ ಫಸ್ಟ್’ ಸಂಕಲ್ಪದೊಂದಿಗೆ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ವಿಕಸಿತ ಭಾರತದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದಿದ್ದಾರೆ.











































