RSS ಅನ್ನು ಹೊಗಳಿದ ಆರೋಪ: ಐಪಿಎಸ್ ಅಧಿಕಾರಿ ವಿಶ್ವಾಸ್‌ ನಂಗರೆ ಹೇಳಿದ್ದೇನು?

Picture of Savistara

Savistara

Bureau Report

ನಾಗ್ಪುರ : ನಾಗ್ಪುರದ ನೂತನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ವಿಶ್ವಾಸ್ ನಂಗರೆ ಪಾಟೀಲ್ ಅವರು, ಆರ್‌ಎಸ್‌ಎಸ್‌ ಕುರಿತು ಆಡಿದ್ದ ಮಾತುಗಳು ಇದೀಗ ವಿವಾದಕ್ಕೆ ಕಾರಣವಾಗಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಂಗರೆ, ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳು ಸಂಪೂರ್ಣವಾಗಿ ಕಾನೂನಿನ ಚೌಕಟ್ಟಿನಲ್ಲೇ ಇದ್ದು, ಯಾವುದೇ ಸೇವಾ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಅವರು ಹೇಳಿದ್ದಾರೆ.

ವಿವಾದದ ಹಿನ್ನೆಲೆ ಏನು?:

ಇತ್ತೀಚೆಗೆ ನವಿ ಮುಂಬೈನ ಸನ್ನಡಾದಲ್ಲಿ ‘ಸಕಲ್ ಹಿಂದೂ ಸಮಾಜ’ ಹಮ್ಮಿಕೊಂಡಿದ್ದ ‘ಹಿಂದೂ ಸಮ್ಮೇಳನ’ದಲ್ಲಿ ನಂಗರೆ ಪಾಟೀಲ್‌ ಅವರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಆರ್‌ಎಸ್‌ಎಸ್‌ ಸಂಘಟನೆಯನ್ನು ಶ್ಲಾಘಿಸಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.ಐಪಿಎಸ್ ಅಧಿಕಾರಿಯೊಬ್ಬರು ಬಹಿರಂಗವಾಗಿ ಒಂದು ಸಂಘಟನೆಯನ್ನು ಹೊಗಳುವುದು ಅವರ ತಟಸ್ಥತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ ಎಂದು ಆರೋಪಿಸಿದ ಮಹಾರಾಷ್ಟ್ರ ಕಾಂಗ್ರೆಸ್, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿತ್ತು.

ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್‌ ಠಾಕ್ರೆ ಅವರು ಪ್ರತಿಕ್ರಿಯಿಸಿ, ನಂಗರೆ ಪಾಟೀಲ್‌ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಪೊಲೀಸ್ ಅಧಿಕಾರಿಯ ನಿಷ್ಠೆ ಕೇವಲ ತಮ್ಮ ಕರ್ತವ್ಯದ ಮೇಲಿರಬೇಕು. ಆರ್‌ಎಸ್‌ಎಸ್ ಬಗ್ಗೆ ಅಷ್ಟೊಂದು ಅಭಿಮಾನವಿದ್ದರೆ, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಅಧಿಕೃತವಾಗಿ ಸಂಘಟನೆ ಸೇರಲಿ’ ಎಂದು ಟೀಕಿಸಿದ್ದರು.

ಪೊಲೀಸ್ ಕಮಿಷನ‌ರ್ ನಂಗರೆ ನೀಡಿದ ಸ್ಪಷ್ಟನೆಗಳೇನು?

ನಾಗ್ಪುರ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ನಡೆಸಿದ ಮೊದಲ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂಗರೆ, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.’ನಾನೊಬ್ಬ ಭಾರತೀಯ ಪೊಲೀಸ್ ಸೇವೆ ಅಧಿಕಾರಿಯಾಗಿದ್ದು, ನನ್ನ ನಿಷ್ಠೆ ಮತ್ತು ಬದ್ಧತೆ ಕೇವಲ ದೇಶದ ಸಂವಿಧಾನಕ್ಕೆ ಮಾತ್ರ ಸೀಮಿತವಾಗಿದೆ. ನಾಗುರವು ಡಾ. ಬಾಬಾಸಾಹೇಬ್ ಅಂಬೇಡ್ಕ‌ರ್ ಅವರ ಪವಿತ್ರ ‘ದೀಕ್ಷಾಭೂಮಿ’ ನೆಲೆಯಾಗಿದ್ದು, ಇಲ್ಲಿನ ಸಾಂವಿಧಾನಿಕ ಮೌಲ್ಯಗಳನ್ನು ನಾನು ಸದಾ ಎತ್ತಿಹಿಡಿಯುತ್ತೇನೆ’ ಎಂದಿದ್ದಾರೆ.ಅಂದು ನಡೆದ ಕಾರ್ಯಕ್ರಮವು ಕೇವಲ ಯೋಗ, ಆಧ್ಯಾತ್ಮ ಹಾಗೂ ಸಾಮಾಜಿಕ ಮೌಲ್ಯಗಳ ಜಾಗೃತಿಗಾಗಿ ಆಯೋಜಿತವಾಗಿತ್ತು. ಅಲ್ಲಿ ಪ್ರಮುಖ ಆಧ್ಯಾತ್ಮಿಕ ಗುರುಗಳಾದ ಸುಧಾಂಶು ಜಿ ಮಹಾರಾಜ್ ಅವರೂ ಇದ್ದರು. ನನ್ನ ಕುಟುಂಬಕ್ಕೂ ಆಹ್ವಾನವಿದ್ದ ಹಿನ್ನೆಲೆಯಲ್ಲಿ ನಾನು ಹೋಗಿದ್ದೆ ಎಂದು ತಿಳಿಸಿದ್ದಾರೆ.’ನನ್ನ ಭಾಷಣದಲ್ಲಿ ನಾನು ಸಹೋದರತ್ವ, ಸಾಮಾಜಿಕ ಸಾಮರಸ್ಯ ಮತ್ತು ಮಾದಕ ದ್ರವ್ಯಗಳ ವಿರುದ್ಧದ ಹೋರಾಟದ ಬಗ್ಗೆ ಮಾತನಾಡಿದ್ದೆನೇ ಹೊರತು, ಕಾನೂನು ಬಾಹಿರವಾಗಿ ಏನನ್ನೂ ಹೇಳಿಲ್ಲ’ ಎಂದಿದ್ದಾರೆ.

‘ವಿವಿಧ ಸಾಮಾಜಿಕ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನನ್ನ ಕರ್ತವ್ಯ. ನಾನು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ರಂಜಾನ್ ಈದ್‌ ಸಂದರ್ಭದಲ್ಲಿ ಹಾಗೂ ಬೌದ್ಧ, ಜೈನ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಆಯೋಜಿಸುವ ಕಾರ್ಯಕ್ರಮಗಳಲ್ಲೂ ನಾನು ಅಷ್ಟೇ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ’ ಎಂದು ಹೇಳುವ ಮೂಲಕ ತಮ್ಮ ಮೇಲಿನ ತಾರತಮ್ಯದ ಆರೋಪಗಳನ್ನು ನಂಗರೆ ತಳ್ಳಿಹಾಕಿದ್ದಾರೆ.

[t4b-ticker]
error: Content is protected !!