ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣ; ಟ್ರಸ್ಟಿ ಅನಿಲ್‌ ಮಿಶ್ರಾನೇ ಮಾಸ್ಟ‌ರ್ ಮೈಂಡ್‌! ಹುಂಡಿ ಎಣಿಕೆ ಕಾರಣಕ್ಕೆ 125 ಉದ್ಯೋಗಿಗಳನ್ನು ನೇಮಿಸಿದ್ದ ಮಿಶ್ರಾ, ಬಂಧಿತರಿಂದಲೇ ಸ್ಫೋಟಕ ಮಾಹಿತಿ

Picture of Savistara

Savistara

Bureau Report

ಅಯೋಧ್ಯೆ, ಜುಲೈ 2 : ಇಡೀ ದೇಶದಲ್ಲಿ ತೀವ್ರ ಸಂಚಲನಎಬ್ಬಿಸಿರುವ ಅಯೋಧ್ಯೆ ಶ್ರೀರಾಮ ಮಂದಿರದ ದೇಣಿಗೆ ಮತ್ತು ಹುಂಡಿ ಹಣ ದುರುಪಯೋಗ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ನೇರ ಭಾಗಿಯಾದ ಆರೋಪಿಗಳ ತನಿಖೆಯಲ್ಲಿ ಹಗರಣದ ಹಿಂದೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಮುಖರಾಗಿದ್ದ ಡಾ. ಅನಿಲ್ ಮಿಶ್ರಾ ಅವರ ಕೈವಾಡ ಇರುವ ಅನುಮಾನ ಮೂಡಿದೆ.ರಾಮ ಮಂದಿರಕ್ಕೆ ಭಕ್ತರು ನೀಡುವ ಕಾಣಿಕೆ ಮತ್ತು ದೇಣಿಗೆಯನ್ನು (ಚಡಾವಾ) ಎಣಿಕೆ ಮಾಡುವ ಹಾಗೂ ಬ್ಯಾಂಕ್‌ಗೆ ಜಮಾ ಮಾಡುವ ಪ್ರಕ್ರಿಯೆಯಲ್ಲಿ ಭದ್ರತಾ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿತ್ತು ಎಂದು ಎಸ್‌ಐಟಿ ಪ್ರಾಥಮಿಕ ತನಿಖೆಯಲ್ಲಿ ಪತ್ತೆಹಚ್ಚಿದೆ. ಸಿಸಿಟಿವಿ ಕಣ್ಣಾವಲು ಇಲ್ಲದಿರುವುದು ಮತ್ತು ಸಿಬ್ಬಂದಿಗಳ ತಪಾಸಣೆ ನಡೆಸದೆ ಇರುವುದನ್ನು ದುರುಪಯೋಗಪಡಿಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗಿದೆ. ವಿಶೇಷವೆಂದರೆ, 2025ರಲ್ಲಿ ಈ ಭದ್ರತಾ ನಿಯಮಗಳಿಗೆ ಅನುಮೋದನೆ ನೀಡಿದ್ದ ಸಹಿದಾರರಲ್ಲಿ ಒಬ್ಬರಾಗಿದ್ದರು.

ನೈತಿಕ ಹೊಣೆ ಹೊತ್ತು ರಾಜೀನಾಮೆ

ಹಗರಣದ ತೀವ್ರತೆ ಹೆಚ್ಚುತ್ತಿದ್ದಂತೆ, ಕೆಲವೇ ದಿನಗಳ ಹಿಂದೆಯಷ್ಟೇ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ತನಿಖೆಗೆ ಯಾವುದೇ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ “ನೈತಿಕ ಹೊಣೆ” ಹೊತ್ತು ರಾಜೀನಾಮೆ ನೀಡುವುದಾಗಿ ಅವರು ತಿಳಿಸಿದ್ದರೂ, ತಮಗೂ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದಾಗ್ಯೂ, ಈಗ ಬಂಧಿತ ಆರೋಪಿಗಳೇ ನೇರವಾಗಿ ಮಿಶ್ರಾ ಅವರ ಹೆಸರನ್ನು ಉಲ್ಲೇಖಿಸಿದ್ದು ಅವರ ಸುತ್ತ ಕಾನೂನು ಉರುಳು ಬಿಗಿಯಾಗಿದೆ.ಆರೋಪಿಗಳ ಹೇಳಿಕೆಯ ಬೆನ್ನಲ್ಲೇ ಅಯೋಧ್ಯೆ ಪೊಲೀಸರು ಮತ್ತು ಎಸ್‌ಐಟಿ ಅಧಿಕಾರಿಗಳು ಟ್ರಸ್ಟ್‌ನ ಉನ್ನತ ಮಟ್ಟದ ಪದಾಧಿಕಾರಿಗಳ ಆರ್ಥಿಕ ವ್ಯವಹಾರಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇದೇ ಸಾರ್ವಜನಿಕರ ಧಾರ್ಮಿಕ ಮತ್ತು ವೇಳೆ, ಭಾವನೆಗಳೊಂದಿಗೆ ಆಟವಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಮತ್ತೊಂದೆಡೆ, ಉನ್ನತ ಮಟ್ಟದ ರಾಜಕೀಯ ಮತ್ತು ಆಡಳಿತಾತ್ಮಕ ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿರುವುದರಿಂದ ಪ್ರಕರಣದ ನ್ಯಾಯಾಂಗ ತನಿಖೆಯಾಗಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

ಹುಂಡಿ ಹಣ ಎಣಿಕೆ ಮತ್ತಿತರ ಕೆಲಸಕ್ಕಾಗಿ ತೀರ್ಥಕ್ಷೇತ್ರ ಟ್ರಸ್ಟ್ 125 ಮಂದಿಯನ್ನು ನೇಮಕ ಮಾಡಿತ್ತು. ಈ ಪೈಕಿ ಬಹುತೇಕರು ಟ್ರಸ್ಟಿ ಅನಿಲ್ ಮಿಶ್ರಾ ಸಂಬಂಧಿಕರು ಮತ್ತು ಆಪ್ತರೇ ಆಗಿದ್ದಾರೆ. ಇದಲ್ಲದೆ, ಹಣಕಾಸು ನಿರ್ವಹಣೆಯಲ್ಲಿ ಲೋಪ ಆಗಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಈ ಹಿಂದೆಯೇ ಅನಿಲ್‌ ಮಿಶ್ರಾ ಮತ್ತು ಟ್ರಸ್ಟ್ ಗಮನಕ್ಕೆ ತಂದಿದ್ದರು. ಆದರೆ ಮಿಶ್ರಾ ಈ ವಿಚಾರವನ್ನು ಗೌಪ್ಯವಾಗಿರಿಸಿ ಮರೆಮಾಚಿಸಿದ್ದರು. ತನ್ನದೇ ಉದ್ಯೋಗಿಗಳ ಮೂಲಕ ಅನಿಲ್ ಮಿಶ್ರಾ ಭಾರೀ ಕಿಕ್ ಬ್ಯಾಕ್ ಪಡೆದಿರುವ ಶಂಕೆಯಿದ್ದು ಎರಡು ವರ್ಷಗಳಲ್ಲಿ ಅವರ ಆಸ್ತಿ ಅಪರಿಮಿತವಾಗಿ ಹೆಚ್ಚಿರುವುದನ್ನು ಎಸ್‌ಐಟಿ ಪತ್ತೆಹಚ್ಚಿದೆ. ಹೀಗಾಗಿ ಒಟ್ಟು ಹಗರಣದ ಮಾಸ್ಟರ್ ಮೈಂಡ್ ಅನಿಲ್‌ ಮಿಶ್ರಾ ಎಂಬ ಮಾತು ಕೇಳಿಬಂದಿದ್ದು ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆಯಿದೆ.

[t4b-ticker]
error: Content is protected !!