ಬೆಂಗಳೂರು: ಕೆಲವು ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಿದ್ದರಿಂದಾಗಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ವ್ಯತ್ಯಾಸ ಆಗಲಿದೆ. ಅಂತಹ ಕಡೆಗಳಲ್ಲಿ ಮತ್ತೊಮ್ಮೆ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಬೇಕಾಗಿರುವುದರಿಂದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಕರ್ನಾಟಕ ಪಂಚಾಯತ್ರಾಜ್ ಸೀಮಾ ನಿರ್ಣಯ ಆಯೋಗ 2023ರ ಡಿಸೆಂಬರ್ನಲ್ಲಿ ಕ್ಷೇತ್ರಗಳನ್ನು ಪುನರ್ವಿಂಗಡಣೆ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದಾಗಿ ಎರಡು ವರ್ಷಗಳಾದರೂ ಚುನಾವಣೆ ನಡೆದಿಲ್ಲ. ಈ ಮಧ್ಯೆ ಕೆಲವು ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಕೆಲವನ್ನು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತರಲಾಗಿದೆ. ಹೀಗಾಗಿ, 57 ಗ್ರಾಮ ಪಂಚಾಯಿತಿಗಳಲ್ಲಿ ಬದಲಾವಣೆಗಳು ಆಗಿವೆ.ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿ ಗಳಾಗಿ ಪರಿವರ್ತನೆ ಮಾಡಿದ ಬಳಿಕ, ಪಟ್ಟಣದ ವ್ಯಾಪ್ತಿಗೆ ಸೇರದ ಪ್ರದೇಶಗಳನ್ನು ಒಳಗೊಂಡ 28 ಪುನರ್ರಚಿತ ಗ್ರಾಮ ಪಂಚಾಯಿತಿಗಳು ಅಸ್ತಿತ್ವಕ್ಕೆ ಬಂದಿವೆ. ಕೆಲವು ಕಡೆ ಪುನರ್ರಚಿತ ಗ್ರಾ.ಪಂ.ಗಳು ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಇವುಗಳ ಒಟ್ಟಾರೆ ಭೌಗೋಳಿಕ ವ್ಯಾಪ್ತಿಯನ್ನು ಜಿಲ್ಲಾಧಿಕಾರಿಗಳು ನಿಗದಿ ಮಾಡುತ್ತಾರೆ. ಅದಾದ ಬಳಿಕ ಕ್ಷೇತ್ರಗಳನ್ನು ವಿಂಗಡಣೆ ಮಾಡಿ, ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆಎಂದು ಆಯೋಗದ ಮೂಲಗಳು ತಿಳಿಸಿವೆ.
‘ಪರಿವರ್ತನೆಯಾದ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಪಟ್ಟಣ ಹಾಗೂ ನಗರ ಪ್ರದೇಶಕ್ಕೆ ಸೇರದ ಪ್ರದೇಶ ಗಳನ್ನುಸರ್ಕಾರ ಡಿನೋಟಿಫೈ ಮಾಡಬೇಕು. ಇದಾದ ಬಳಿಕ ಆಯೋಗವು ತಾ.ಪಂ. ಮತ್ತು ಜಿ.ಪಂ. ಕ್ಷೇತ್ರಗಳ ಪುನರ್ ವಿಂಗಡಣೆ ಮಾಡುತ್ತದೆ. ಆದರೆ, ಸರ್ಕಾರ ಇದುವರೆಗೂ ಡಿನೋಟಿಫೈ ಮಾಡಿಲ್ಲ’ ಎಂದು ಆಯೋಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಉದಾಹರಣೆಗೆ, ಸರ್ಕಾರ ಈಚೆಗೆ ಕೈವಾರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಿದೆ. ಇದರ ವ್ಯಾಪ್ತಿಗೆ ಕೈವಾರ ಮತ್ತು ಸುತ್ತಲಿನ ಕೆಲವು ಪ್ರದೇಶಗಳು ಸೇರುತ್ತವೆ. ಇನ್ನೂ ಕೆಲವು ಪ್ರದೇಶಗಳು ಸೇರುವುದಿಲ್ಲ. ಅಂತಹ ಪ್ರದೇಶಗಳನ್ನು ಸೇರಿಸಿ ಹೊಸ ಗ್ರಾಮ ಪಂಚಾಯಿತಿ ರಚಿಸಬಹುದು ಅಥವಾ ಪಕ್ಕದ ಗ್ರಾಮ ಪಂಚಾಯಿತಿಯಲ್ಲಿ ವಿಲೀನಗೊಳಿಸಬಹುದು. ಈ ಪ್ರದೇಶಗಳನ್ನು ಸರ್ಕಾರ ಡಿನೋಟಿಫೈ ಮಾಡ ಬೇಕಾಗುತ್ತದೆ ಎಂದು ಅವರು ವಿವರಿಸಿದರು.ಡಿನೋಟಿಫೈ ಮಾಡಿದ ಬಳಿಕ ಆಯೋಗವು ಕ್ಷೇತ್ರಗಳ ಪುನರ್ ವಿಂಗಡಣೆ ಕರಡು ಪ್ರಕಟಿಸಿ, ಏನಾದರೂ ಆಕ್ಷೇಪಣೆಗಳು ಇದ್ದರೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ. ಇದಾದ ಬಳಿಕ ಅಂತಿಮವಾಗಿ ಕ್ಷೇತ್ರಗಳನ್ನು ನಿಗದಿಪಡಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಡಿಸೆಂಬರ್ 12ರ ಒಳಗೆ ಪೂರ್ಣಗೊಳಿಸಲು ಹೈಕೋರ್ಟ್ ಗಡುವು ನೀಡಿದೆ. ಆದರೆ, ಸರ್ಕಾರ ಇನ್ನೂ ಡಿನೋಟಿಫೈ ಮಾಡದ ಕಾರಣ ಗಡುವಿನ ಒಳಗೆ ಈ ಪ್ರಕ್ರಿಯೆ ಮುಗಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಜನಸಂಖ್ಯೆಯೇ ಮಾನದಂಡ: 2011ರ ಜನಸಂಖ್ಯೆ ಆಧರಿಸಿ 400ಜನಸಂಖ್ಯೆಗೆ ಒಬ್ಬ ಸದಸ್ಯರಂತೆ ಗ್ರಾ.ಪಂ. ಕ್ಷೇತ್ರಗಳನ್ನು ರಚಿಸಲಾಗುತ್ತದೆ. ಒಂದು ವೇಳೆ, ಒಂದೇ ಕ್ಷೇತ್ರದಲ್ಲಿ 800 ಜನಸಂಖ್ಯೆ ಇದ್ದರೆ, ಇಬ್ಬರು ಸದಸ್ಯರನ್ನು ಹೊಂದಲು ಅವಕಾಶ ಇದೆ. ಜಿಲ್ಲಾಧಿಕಾರಿಗಳು ಭೌಗೋಳಿಕ ಪ್ರದೇಶವನ್ನು ನಿಗದಿಪಡಿಸಿದ ನಂತರ, ಅದು ಸರಿ ಇದೆಯೇ ಎಂದು ನೋಡಿ, ಕ್ಷೇತ್ರ ಹಾಗೂ ಸದಸ್ಯರ ಸಂಖ್ಯೆಯನ್ನು ಆಯೋಗ ನಿಗದಿಪಡಿಸಲಿದೆ.
ಇದು ಎರಡನೇ ಆಯೋಗ
ಹಿಂದಿನ ಬಿಜೆಪಿ ಸರ್ಕಾರ ಎಂ.ಲಕ್ಷ್ಮಿನಾರಾಯಣ ಅಧ್ಯಕ್ಷತೆಯಲ್ಲಿ ಸೀಮಾ ಆಯೋಗ ರಚಿಸಿತ್ತು. ಈ ಆಯೋಗ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಿ, ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಕೆಲವರು ಇದು ಸರಿಯಿಲ್ಲ ಎಂದು ನ್ಯಾಯಾಲಯದ ಮೊರೆಹೋದರು. ಈ ಮಧ್ಯೆ ರಾಜ್ಯದಲ್ಲಿ ಸರ್ಕಾರ ಬದಲಾಯಿತು. ‘ಕಾಂಗ್ರೆಸ್ ಸರ್ಕಾರ ಬಂದ ಬಳಿಕ 2023ರ ಜುಲೈನಲ್ಲಿ ಎಂ.ಆರ್.ಕಾಂಬ್ಳೆ ಅಧ್ಯಕ್ಷತೆಯಲ್ಲಿ ಹೊಸದಾಗಿ ಸೀಮಾ ಆಯೋಗ
ರಚಿಸಲಾಯಿತು. ಇದು 2023ರ ಡಿಸೆಂಬರ್ನಲ್ಲೇ ಪುನರ್ವಿಂಗಡಣೆ ಸಂಬಂಧ ವರದಿ ನೀಡಿತ್ತು. ಆದರೆ, ಸರ್ಕಾರ ಮೀಸಲಾತಿ ನಿಗದಿಪಡಿಸಿ ಚುನಾವಣೆ ನಡೆಸುವ ಗೋಜಿಗೆ ಹೋಗಿಲ್ಲ. ಈಗ ಕೆಲವು ಕಡೆ ಮತ್ತೆ ಕ್ಷೇತ್ರಗಳ ಪುನರ್ವಿಂಗಡಣೆ ಆಗಬೇಕು. ಹೀಗಾಗಿ ಸದ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ’ ಎಂದು ಮೂಲಗಳು ತಿಳಿಸಿವೆ.
ಕಡಿಮೆಯಾಗಲಿದೆ ಕ್ಷೇತ್ರಗಳ ಸಂಖ್ಯೆ
ಕ್ಷೇತ್ರಗಳ ಪುನರ್ವಿಂಗಡಣೆ ಬಳಿಕ 2023ರ ಡಿಸೆಂಬರ್ನಲ್ಲಿ ಸರ್ಕಾರಕ್ಕೆ ಆಯೋಗ ಮಾಡಿದ ಶಿಫಾರಸಿನಲ್ಲಿ 3,671 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಹಾಗೂ 1,118 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಇದ್ದವು. ಈಗ ಬಹಳಷ್ಟು ಪ್ರದೇಶಗಳು ಪಟ್ಟಣ, ನಗರ ವ್ಯಾಪ್ತಿಗೆ ಸೇರಿದ್ದು, ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಲಿದೆ. ‘ಸದ್ಯ ನಮ್ಮಲ್ಲಿ 2011 ಜನಗಣತಿಯ ಅಂಕಿ ಅಂಶಗಳು ಇವೆ. ಅದನ್ನು ಆಧರಿಸಿ ಕ್ಷೇತ್ರಗಳಪುನರ್ವಿಂಗಡಣೆ ಮಾಡುತ್ತೇವೆ. 15 ವರ್ಷಗಳಲ್ಲಿ ಜನಸಂಖ್ಯೆ ಜಾಸ್ತಿ ಆಗಿರ ಬ ಹುದು. ಆದರೆ, ನಮ್ಮಲ್ಲಿ ಅಧಿಕೃತ ಆಧಾರವಿಲ್ಲ. ತಾಂತ್ರಿಕವಾಗಿ 400 ಜನಸಂಖ್ಯೆಗೆ ಒಂದು ಗ್ರಾಮ ಪಂಚಾಯಿತಿ ಕ್ಷೇತ್ರ ಎಂದು ನಿಗದಿಪಡಿಸಿದರೂ, ಅಲ್ಲಿ ಅಧಿಕ ಜನಸಂಖ್ಯೆ ಇರಬಹುದು’ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದರು.














































