ತುಮಕೂರು ಗ್ರಾಮಾಂತರ, ಮೇ 15: ಪ್ರಧಾನಿ ನರೇಂದ್ರ ಮೋದಿ ಅವರ ಮಿತ ಬಳಕೆಯ ಸಲಹೆಯನ್ನು ವಿಪಕ್ಷದ ನಾಯಕರು ವಿರೋಧಿಸುತ್ತಿರುವ ನಡುವೆಯೇ ರಾಜ್ಯ ಸರಕಾರದ ದಿಲ್ಲಿ ವಿಶೇಷ ಪ್ರತಿನಿಧಿ, ಕಾಂಗ್ರೆಸ್ ಶಾಸಕ ಟಿ. ಬಿ. ಜಯಚಂದ್ರ ಬೆಂಬಲ ವ್ಯಕ್ತಪಡಿಸಿ, ಮಿತವ್ಯಯದ ಮೋದಿಯವರ ಸಂದೇಶ ಸ್ವೀಕಾರಾರ್ಹ ಎಂದು ಹೇಳಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯುದ್ಧದ ಪರಿಸ್ಥಿತಿಯ ಪರಿಣಾಮವಾಗಿ ಜಾಗತಿಕ ಆರ್ಥಿಕತೆ ಮೇಲೆ ಒತ್ತಡ ಹೆಚ್ಚಾಗಿದ್ದು, ಅದರ ದುಷ್ಪರಿಣಾಮವಾಗಿ ಬೆಲೆ ಏರಿಕೆ ಕಂಡುಬರುತ್ತಿದೆ.
ಹಾಗಾಗಿ ಇಂತಹ ಸಂಕಷ್ಟದ ಸಂದರ್ಭಗಳಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರೂ ಜವಾಬ್ದಾರಿಯಿಂದ ವರ್ತಿಸಬೇಕು. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಡಾಲರ್ಮೌಲ್ಯದಲ್ಲಿ ಹಣ ನೀಡಿ ಖರೀದಿಸಬೇಕಾದ ಪರಿಸ್ಥಿತಿಯಿರುವುದರಿಂದ, ಇಂಧನ ಬಳಕೆಯನ್ನು ಮಿತವಾಗಿ ಬಳಕೆ ಮಾಡುವುದು ಅಗತ್ಯ ಎಂದು ಹೇಳಿದ್ದಾರೆ.’ಮಿತ ಬಳಕೆಯ ಸಂದೇಶ ನೀಡಿ, ಕೇಂದ್ರ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದೆ. ಅದು ವಾಸ್ತವಾಧಾರಿತ ವಿಚಾರ’ ಎಂದಿದ್ದಾರೆ.













































