ಅ.27ರಿಂದ ಮಂಗಳೂರು-ತಿರುವನಂತಪುರಂ ನೇರ ವಿಮಾನ: ಕರಾವಳಿ ನಗರಗಳ ನಡುವೆ ಇನ್ನು ಕೇವಲ 80 ನಿಮಿಷಗಳ ಪ್ರಯಾಣ!

Picture of Savistara

Savistara

Bureau Report

ಮಂಗಳೂರು: ಕರ್ನಾಟಕ ಮತ್ತು ಕೇರಳದ ಪ್ರಮುಖ ಕರಾವಳಿ ನಗರಗಳಾದ ಮಂಗಳೂರು ಮತ್ತು ತಿರುವನಂತಪುರಂ ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಕ್ಟೋಬರ್ 27ರಿಂದ ಹೊಸ ವಿಮಾನಯಾನ ಸೇವೆಯನ್ನು ಆರಂಭಿಸಲಿದೆ. ಈ ಮೂಲಕ ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ ರೈಲಿನಲ್ಲಿ ಸುಮಾರು 9 ಗಂಟೆಗಳಿಂದ ವಿಮಾನದಲ್ಲಿ ಕೇವಲ 1 ಗಂಟೆ 20 ನಿಮಿಷಕ್ಕೆ ಇಳಿಕೆಯಾಗಲಿದೆ.

ಈ ಹೊಸ ಸೇವೆಯು ವಾರದಲ್ಲಿ ಮೂರು ದಿನಗಳ ಕಾಲ ಕಾರ್ಯನಿರ್ವಹಿಸಲಿದೆ. ಮಂಗಳೂರಿನಿಂದ ತಿರುವನಂತಪುರಂಕ್ಕೆ ವಿಮಾನ ಸಂಖ್ಯೆ IX 5531 ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ 8:45ಕ್ಕೆ ಹೊರಟು 10:05ಕ್ಕೆ ತಲುಪಲಿದೆ. ಅದೇ ರೀತಿ, ತಿರುವನಂತಪುರಂದಿಂದ ಮಂಗಳೂರಿಗೆ ವಿಮಾನ ಸಂಖ್ಯೆ IX 5532 ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಮುಂಜಾನೆ 4:25ಕ್ಕೆ ಹೊರಟು 5:45ಕ್ಕೆ ಮಂಗಳೂರನ್ನು ತಲುಪಲಿದೆ.

ಪ್ರಸ್ತುತ, ಈ ಎರಡು ನಗರಗಳ ನಡುವೆ ವೇಗದ ಸಾರಿಗೆ ಸಂಪರ್ಕಕ್ಕಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಲಭ್ಯವಿದ್ದು, 620 ಕಿ.ಮೀ. ದೂರವನ್ನು ಕ್ರಮಿಸಲು ಸುಮಾರು 8 ಗಂಟೆ 40 ನಿಮಿಷಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ, ಹೊಸ ವಿಮಾನ ಸೇವೆಯಿಂದಾಗಿ ಪ್ರಯಾಣಿಕರು 7 ಗಂಟೆಗೂ ಅಧಿಕ ಸಮಯವನ್ನು ಉಳಿಸಬಹುದಾಗಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈ ಹೊಸ ಮಾರ್ಗದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, “ಪ್ರಕೃತಿ, ಸಂಸ್ಕೃತಿ ಮತ್ತು ಪ್ರಶಾಂತತೆ ಮೇಳೈಸುವ ಒಂದು ಕರಾವಳಿಯಿಂದ ಮತ್ತೊಂದು ಕರಾವಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ,” ಎಂದು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.

ಈಗಾಗಲೇ ಮಂಗಳೂರಿನಿಂದ ಮುಂಬೈ, ಹೊಸದಿಲ್ಲಿ, ಬೆಂಗಳೂರು, ಹೈದರಾಬಾದ್, ಚೆನ್ನೈ, ದುಬೈ, ಅಬುದಾಬಿ, ದಮ್ಮಾಮ್, ಬಹರೈನ್, ದೋಹಾ, ಜಿದ್ದಾ ಮತ್ತು ಕುವೈತ್‌ಗೆ ನೇರ ವಿಮಾನ ಸಂಪರ್ಕವಿದ್ದು, ಈ ಪಟ್ಟಿಗೆ ಈಗ ತಿರುವನಂತಪುರಂ ಕೂಡ ಸೇರ್ಪಡೆಯಾಗಿದೆ.

ಕರಾವಳಿ ನಗರಗಳ ನಡುವೆ ವಿಮಾನಯಾನ

  • ಹೊಸ ವಿಮಾನ ಸೇವೆ: ಅ. 27ರಿಂದ ಮಂಗಳೂರು-ತಿರುವನಂತಪುರಂ ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹಾರಾಟ
  • ವಾರದಲ್ಲಿ 3 ದಿನ: ಮಂಗಳೂರಿನಿಂದ ಸೋಮ, ಬುಧ, ಶುಕ್ರವಾರ ಮತ್ತು ತಿರುವನಂತಪುರಂದಿಂದ ಮಂಗಳವಾರ, ಗುರು, ಶನಿವಾರ ಸೇವೆ
  • ಸಮಯ ಉಳಿತಾಯ: ರೈಲಿನಲ್ಲಿ ಸುಮಾರು 9 ಗಂಟೆಗಳ ಪ್ರಯಾಣ, ವಿಮಾನದಲ್ಲಿ ಕೇವಲ 1 ಗಂಟೆ 20 ನಿಮಿಷ
  • ಕರಾವಳಿ ಸಂಪರ್ಕ: ಕರ್ನಾಟಕ ಮತ್ತು ಕೇರಳದ ಪ್ರಮುಖ ಕರಾವಳಿ ನಗರಗಳಿಗೆ ನೇರ ಸಂಪರ್ಕ
  • ವೇಳಾಪಟ್ಟಿ: ಮಂಗಳೂರಿನಿಂದ ಬೆಳಿಗ್ಗೆ 8:45ಕ್ಕೆ, ತಿರುವನಂತಪುರಂದಿಂದ ಮುಂಜಾನೆ 4:25ಕ್ಕೆ ವಿಮಾನ ಹೊರಡಲಿದೆ
[t4b-ticker]
error: Content is protected !!