ಬೆಂಗಳೂರು/ಗುವಾಹಟಿ: ಆರ್ಎಸ್ಎಸ್, ಗೂಗಲ್ ವಿಚಾರದಲ್ಲಿ ಸುದ್ದಿಯಾಗಿದ್ದ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಈಗ ಅಸ್ಸಾಂ ವಿಚಾರದಲ್ಲೂ ದೊಡ್ಡ ಸುದ್ದಿಯಾಗಿದ್ದಾರೆ. ಅಸ್ಸಾಂ (Assam) ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಪ್ರಿಯಾಂಕ್ ಖರ್ಗೆಯಲ್ಲಿ ಈಡಿಯಟ್ ಎಂದು ಕರೆದರೆ ಪ್ರಿಯಾಂಕ್ ತನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಏನಿದು ಇಬ್ಬರ ಮಧ್ಯೆ ಕಿತ್ತಾಟ?
ಸೆಮಿಕಂಡಕ್ಟರ್ (Semiconductor) ಫ್ಯಾಕ್ಟರಿ ಕಂಪನಿಗಳು ತಮ್ಮ ಘಟಕವನ್ನು ತೆರೆಯಲು ಗುಜರಾತ್ ಮತ್ತು ಅಸ್ಸಾಂ ರಾಜ್ಯಗಳನ್ನು ಆಯ್ಕೆ ಮಾಡಿದ್ದವು. ಈ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಸೆಮಿಕಂಡಕ್ಟರ್ ಉದ್ದಿಮೆಗಳು ಸಹಜವಾಗಿಯೇ ಬೆಂಗಳೂರಿನತ್ತ ಆಕರ್ಷಿತವಾಗಿರುತ್ತದೆ. ಆದರೆ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಸ್ಥಾಪನೆಯಾಗಬೇಕಿದ್ದ ಹೂಡಿಕೆಗಳನ್ನು ಬಿಜೆಪಿ ಆಡಳಿತ ಇರುವ ರಾಜ್ಯಗಳಿಗೆ ತಿರುಗಿಸುತ್ತದೆ. ನಿಜವಾಗಿಯೂ ಗುಜರಾತ್ ಮತ್ತು ಅಸ್ಸಾಂನಲ್ಲಿ ಆ ಕೈಗಾರಿಕೆಗೆ ಅಗತ್ಯವಿರುವ ನೈಪುಣ್ಯ ಮತ್ತು ಮೂಲಸೌಕರ್ಯಗಳು ಇದ್ಯಾ ಎಂದು ಪ್ರಶ್ನಿಸಿದ್ದರು.ಅಸ್ಸಾಂ ಉದ್ದೇಶಿಸಿ ಹೇಳಿಕೆ ನೀಡಿದ್ದು ಬಿಜೆಪಿಯನ್ನು ಕೆರಳಿಸಿದೆ. ಇದು ಅಸ್ಸಾಂ ಯುವಜನರಿಗೆ ಮಾಡಿರುವ ಅನ್ಯಾಯ? ಅಸ್ಸಾಂ ಕಾಂಗ್ರೆಸ್ ಈ ಹೇಳಿಕೆಯನ್ನು ಖಂಡಿಸಬೇಕು ಎಂದು ಆಗ್ರಹಿಸಿದೆ.
ಹಿಮಂತ ಶರ್ಮಾ ಹೇಳಿದ್ದೇನು?
ಪ್ರಿಯಾಂಕ್ ಖರ್ಗೆ ಒಬ್ಬ ಫಸ್ಟ್ ಕ್ಲಾಸ್ ಈಡಿಯಟ್. ಅವರು ಅಸ್ಸಾಮಿ ಯುವಕರನ್ನು ಅವಮಾನಿಸಿದ್ದಾರೆ. ಪ್ರಿಯಾಂಕ್ ಹೇಳಿಕೆಯನ್ನು ಅಸ್ಸಾಂ ಕಾಂಗ್ರೆಸ್ ಖಂಡಿಸಿಲ್ಲ. ಬಹುಶಃ, ಅಸ್ಸಾಂನಲ್ಲಿ ವಿದ್ಯಾವಂತ ಯುವಕರಿಲ್ಲ ಎಂದು ಅವರು ಹೇಳಿರುವುದರಿಂದ ನಾವು ಅವರ ವಿರುದ್ಧ ಪ್ರಕರಣ ದಾಖಲಿಸಬಹುದು. ಇದು ಇಡೀ ಅಸ್ಸಾಮಿ ಯುವಕರಿಗೆ ಮಾಡಿದ ಅವಮಾನ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಎಂದಿನಂತೆ ಬಿಜೆಪಿ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನನ್ನ ಮಾತುಗಳನ್ನು ತಿರುಚುತ್ತಿದ್ದಾರೆ. ನನ್ನ ಹೇಳಿಕೆ ಸ್ಪಷ್ಟ ಮತ್ತು ನಿರ್ದಿಷ್ಟವಾಗಿದೆ. ಗುಜರಾತ್ ಮತ್ತು ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಕಂಪನಿಗಳನ್ನು ಸ್ಥಾಪಿಸಲು ಹೇಗೆ ಒತ್ತಡ ಹೇರಲಾಗುತ್ತಿದೆ ಎಂಬುದರ ಬಗ್ಗೆ ನಾನು ಮಾತನಾಡಿದ್ದೆ.
ನೀತಿ ಆಯೋಗದ ಇತ್ತೀಚಿನ ವರದಿಯ ಪ್ರಕಾರ, ಸುಮಾರು ಒಂದು ದಶಕದ ಬಿಜೆಪಿ ಆಳ್ವಿಕೆಯ ನಂತರ, ಅಸ್ಸಾಂ ಇಂದು ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಬೆಳವಣಿಗೆಯಂತಹ ನಿರ್ಣಾಯಕ ಅಭಿವೃದ್ಧಿ ಸೂಚಕಗಳಲ್ಲಿ ಕೊನೆಯ ಐದು ರಾಜ್ಯಗಳಲ್ಲಿ ಒಂದಾಗಿದೆ.ನನ್ನ ಹೇಳಿಕೆಗಳನ್ನು ರಾಜಕೀಯವಾಗಿ ತಿರುಗಿಸುವ ಮೂಲಕ ತಮ್ಮ ವೈಫಲ್ಯಗಳನ್ನು ಬಿಳಿಚಿಕೊಳ್ಳಲು ಪ್ರಯತ್ನಿಸುವ ಬದಲು, ಮುಖ್ಯಮಂತ್ರಿ ತಮ್ಮ ರಾಜ್ಯದ ಯುವಜನರಿಗೆ ಏನು ಮಾಡಿದ್ದಾರೆ ಎಂದು ತಮ್ಮನ್ನು ತಾವು ಕೇಳಿಕೊಳ್ಳಬೇಕು. ಅವರು ಬೇರೆಡೆ ಕೆಲಸ ಹುಡುಕಲು ಅಸ್ಸಾಂ ಅನ್ನು ಏಕೆ ಬಿಡುತ್ತಿದ್ದಾರೆ?













































