ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಮುಂಬರುವ ನವೆಂಬರ್ 23ರಂದು ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಸ್ಟೀನ್ ಸೂರ್ಯಕಾಂತ್ ಅವರನ್ನು ಮುಂದಿನ ಸಿಜೆಐ ಆಗಿ ನೇಮಕ ಮಾಡಿದ್ದಾರೆ. ನ್ಯಾ. ಸೂರ್ಯಕಾಂತ್ ಅವರು ಪ್ರಸ್ತುತ ಸುಪ್ರೀಂಕೋರ್ಟ್ನ ಎರಡನೇ ಹಿರಿಯ ನ್ಯಾಯಾಧೀಶರಾಗಿದ್ದಾರೆ.
ಪ್ರಸ್ತುತ ಸಿಜೆಐ ಬಿಆರ್ ಗವಾಯಿ ಅವರು ನ.23ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದು, ನ.24ರಂದು ಜಸ್ಟೀಸ್ ಸೂರ್ಯಕಾಂತ್ ಅವರು ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು, ರಾಷ್ಟ್ರಪತಿಗಳು ಜಸ್ಟೀನ್ ಸೂರ್ಯಕಾಂತ್ ಅವರನ್ನು ಸಿಜೆಐ ಆಗಿ ನೇಮಕ ಮಾಡಿರುವುದನ್ನು ದೃಢಪಡಿಸಿದ್ದಾರೆ.
“ಭಾರತದ ಸಂವಿಧಾನವು ನೀಡಿರುವ ಅಧಿಕಾರವನ್ನು ಚಲಾಯಿಸಿ, ರಾಷ್ಟ್ರಪತಿಗಳು ಭಾರತದ ಸುಪ್ರೀಂಕೋರ್ಟ್ನ ನ್ಯಾಯಾಧೀಶರಾದ ನ್ಯಾ. ಸೂರ್ಯಕಾಂತ್ ಅವರನ್ನು ನವೆಂಬರ್ 24, 2025 ರಿಂದ ಜಾರಿಗೆ ಬರುವಂತೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಆದೇಶ ಹೊರಡಿಸಿದ್ದಾರೆ” ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ತಮ್ಮ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾನೂನು ಸಚಿವರು ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸಿದ್ದು, ನೂತನ ಸಿಜೆಐ ನೇತೃತ್ವದಲ್ಲಿ ಸುಪ್ರೀಂಕೋರ್ಟ್ ನ್ಯಾಯವನ್ನು ಎತ್ತಿಹಹಿಡಿಯುವ ಕೆಲಸವನ್ನು ಮುಂದುವರೆಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಈ ವಾರದ ಆರಂಭದಲ್ಲಿ ನ್ಯಾ. ಸೂರ್ಯಕಾಂತ್ ಅವರ ಹೆಸರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಸ್ತಾಪಿಸಿ, ಪ್ರಸ್ತುತ ಸಿಜೆಐ ಬಿಆರ್ ಗವಾಯಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. 53ನೇ ಸಿಜೆಐ ಆಗಿ, ನ್ಯಾ. ಸೂರ್ಯಕಾಂತ್ ಫೆಬ್ರವರಿ 9, 2027ರವರೆಗೆ ಅಧಿಕಾರದಲ್ಲಿ ಚಲಾಯಿಸಲಿದ್ದಾರೆ.ಜಸ್ಟೀಸ್ ಸೂರ್ಯಕಾಂತ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದತಿ ವಿಚಾರಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ನ್ಯಾ. ಸೂರ್ಯಕಾಂತ್ ಅವರು ಚುನಾವಣಾ ಬಾಂಡ್ಗಳು ಅಕ್ರಮ ಎಂದು ತೀರ್ಪು ನೀಡಿದ ಸುಪ್ರೀಂಕೋರ್ಟ್ ಪೀಠದ ಸದಸ್ಯರಾಗಿದ್ದರು.
ನ್ಯಾ. ಸೂರ್ಯಕಾಂತ್ ಅವರು ಪೆಗಾಸಸ್ ಫೋನ್ ಕದ್ದಾಲಿಕೆ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರೋಹ್ಟಕ್ನ ಮಹರ್ಷಿ ದಯಾನಂದ್ ಸರಸ್ವತಿ ವಿಶ್ವವಿದ್ಯಾಲಯದಿಂದ 1984ರಲ್ಲಿ ಕಾನೂನು ಪದವಿ ಪಡೆದ ನ್ಯಾ. ಸೂರ್ಯಕಾಂತ್, 1985ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಕಾನೂನು ಅಭ್ಯಾಸವನ್ನು ಆರಂಭಿಸಿದರು.2000ರಲ್ಲಿ ಹರಿಯಾಣದ ಅತ್ಯಂತ ಯುವ ವಕೀಲರಾಗಿ ನೇಮಕೊಂಡಿದ್ದ ನ್ಯಾ,. ಸೂರ್ಯಕಾಂತ್, 2001ರಲ್ಲಿ ಸಿನಿಯರ್ ಅಡ್ವೋಕೇಟ್ ಆಗಿ ನೇಮಕೊಂಡಿದ್ದರು. ಮುಂದೆ 2004ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಜಡ್ಜ್ ಆಗಿ ನ್ಯಾ. ಸೂರ್ಯಕಾಂತ್ ನೇಮಕಗೊಂಡರು. ಅದೇ ರೀತಿ 2018ರಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಮೂರ್ತಿಯಾಗಿ ನ್ಯಾ. ಸೂರ್ಯಕಾಂತ್ ಸೇವೆ ಸಲ್ಲಿಸಿದ್ದಾರೆ.














































