ನವದೆಹಲಿ: ರಾಜಧಾನಿಯ ಕೆಂಪುಕೋಟೆ ಸಮೀಪದ ಮೆಟ್ರೋ ಸ್ಟೇಷನ್ ಬಳಿಭೀಕರ ಆತ್ಮಾಹುತಿ ದಾಳಿ ನಡೆದ ಘಟನೆ ಬೆನ್ನಲ್ಲೇ ಗುರುವಾರ (ನ.13) ಬೆಳಗ್ಗೆ ಮಹಿಪಾಲ್ಪುರ್ ಪ್ರದೇಶದ ರಾಡಿಷನ್ ಹೋಟೆಲ್ ಸಮೀಪ ಭಾರೀ ಸ್ಫೋಟದ ಸದ್ದು ಕೇಳಿಸಿರುವ ಘಟನೆ ನಡೆದಿರುವುದಾಗಿ ವರದಿಯಾಗಿದೆ.ಗುರುವಾರ ಬೆಳಿಗ್ಗೆ ಮಹಿಪಾಲ್ಪುರ್ ಪ್ರದೇಶದಲ್ಲಿ ಸ್ಫೋಟದ ರೀತಿಯ ಶಬ್ದ ಕೇಳಿಬಂದ ಪರಿಣಾಮ ಜನರಲ್ಲಿ ಭೀತಿ ಹುಟ್ಟಿಸಿರುವುದಾಗಿ ನ್ಯೂಸ್ ಏಜೆನ್ಸಿ ಐಎಎನ್ ಎಸ್ ವರದಿ ತಿಳಿಸಿದೆ. ಈ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ದಳ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿತ್ತು.
ದೆಹಲಿ ಪೊಲೀಸರ ತಂಡ ಕೂಡಾ ಶಬ್ದ ಕೇಳಿ ಬಂದ ಸ್ಥಳಕ್ಕೆ ತೆರಳಿ ಸೂಕ್ಷ್ಮವಾಗಿ ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ ಯಾವುದೇ ಅನುಮಾನಾಸ್ಪದ ಸ್ಫೋಟಕವಾಗಲಿ ಅಥವಾ ಬಾಂಬ್ ನಂತಹ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿಸಿದೆ.ಈ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಸ್ಫೋಟದಂತಹ ಶಬ್ದಕ್ಕೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ ಎಂದು ತಿಳಿಸಿದ್ದಾರೆ.











































