ನಾಳೆ (ಡಿ.27) ನವವಿಧ- ನವವರ್ಷ ಮಂಗಳೂರು ಕಂಬಳದ ಸಂಭ್ರಮಕ್ಕೆ ಚಾಲನೆ

Picture of Savistara

Savistara

Bureau Report

ಮಂಗಳೂರು: ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ನೇತೃತ್ವದಲ್ಲಿ ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡು ಕೆರೆಯಲ್ಲಿ ನಡೆಯುವ 9ನೇ ವರ್ಷದ ಮಂಗಳೂರು ಕಂಬಳದಲ್ಲಿ ಬ್ಯಾಕ್‌ ಟು ಊರು ಪರಿಕಲ್ಪನೆಯಡಿ ತಾಯ್ನಾಡಿಗೆ ವಾಪಾಸ್ಸಾಗಿ ಉದ್ಯಮ ಸ್ಥಾಪಿಸಿರುವ ನವ ಉದ್ಯಮಿಗಳನ್ನು ಸನ್ಮಾನಿಸುವ ಅತ್ಯಂತ ಅರ್ಥಪೂರ್ಣ ಹಾಗೂ ವಿಭಿನ್ನ ಕಾರ್ಯಕ್ರಮ ನಡೆಯಲಿದೆ.

ಈ ಬಾರಿ “ನವ ವಿಧ-ನವ ವರ್ಷ”ದ ಮಂಗಳೂರು ಕಂಬಳ ಆಗಿರುವ ಹಿನ್ನಲೆಯಲ್ಲಿ ತಮ್ಮ ತಾಯ್ನಾಡಿನ ಬಗೆಗಿನ ಅಪಾರ ಪ್ರೀತಿ ಮತ್ತು ಗೌರವದಿಂದ ಊರಿಗೆ ಮರಳಿ ಈ ನಮ್ಮ ತುಳುನಾಡಿನ ಮಣ್ಣಿನಲ್ಲೇ ಉದ್ಯಮವನ್ನು ಕಟ್ಟಿ ಬೆಳೆಸಿರುವ ನವ ಸಾಧಕ ಉದ್ಯಮಿಗಳನ್ನು ಗುರುತಿಸಿ ಅವರ ಕೊಡುಗೆಯನ್ನು ಶ್ಲಾಘಿಸಲಾಗುವುದು. ಆ ಮೂಲಕ ನಮ್ಮ ತುಳುನಾಡಿನ ಶ್ರೀಮಂತ ಜನಪದ ಕ್ರೀಡೆಯಾದ ಕಂಬಳದ ವೇದಿಕೆಯಲ್ಲೇ ಈ ಬ್ಯಾಕ್‌ ಟು ಊರು ಉದ್ದಿಮೆದಾರರನ್ನು ಸನ್ಮಾನಿಸುವ ಅತ್ಯಂತ ಅವಿಸ್ಮರಣೀಯ ಕ್ಷಣಕ್ಕೆ ಈ ಬಾರಿಯ ಮಂಗಳೂರು ಕಂಬಳ ಸಾಕ್ಷಿಯಾಗಲಿದೆ..

ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದು ಅಪಾರ ಸಾಧನೆ ಮಾಡಿ, ತಾಯ್ನಾಡಿಗೆ ಬಂದು ಸ್ವಂತ ಉದ್ಯಮ ಸ್ಥಾಪಿಸಿ, ಇಲ್ಲಿನ ಇಕೋ ವ್ಯವಸ್ಥೆಗೆ ಪೂರಕವಾಗಿ ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಮೂಲಕ ನಮ್ಮೂರ ಪ್ರಗತಿಯಲ್ಲಿ ಕೈಜೋಡಿಸಬೇಕೆಂಬ ಆಶಯದೊಂದಿಗೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ʼಬ್ಯಾಕ್‌ ಟು ಊರುʼ ಎನ್ನುವ ಬಹಳ ವಿಭಿನ್ನ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. ಸಂಸದ ಕ್ಯಾ.ಚೌಟ ಅವರ ಈ ಬ್ಯಾಕ್‌ ಟು ಊರು ಪರಿಕಲ್ಪನೆಗೆ ದೇಶ-ವಿದೇಶಗಳಲ್ಲಿ ನೆಲೆಸಿರುವ ಹಲವಾರು ಉದ್ಯಮಿಗಳಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗುತ್ತಿದೆ.

*ಸನ್ಮಾನ ಸ್ವೀಕರಿಸುವ 9 ಮಂದಿ ಸಾಧಕ ಉದ್ಯಮಿಗಳು*
ತಮ್ಮ ಹುಟ್ಟೂರಿಗೆ ಮರಳಿ ವಿವಿಧ ಕ್ಷೇತ್ರಗಳಲ್ಲಿ ಉದ್ಯಮ ಸ್ಥಾಪಿಸಿರುವ ಉದ್ಯಮಿಗಳಾದ ಅವಿನಾಶ್ ರಾವ್, ಸ್ಮಿತಾ ರಾವ್, ಸುಧಾಕರ ಪೂಂಜಾ, ನಿತಿಕ್ ರತ್ನಾಕರ್, ಪ್ರಕಾಶ್ ಪಿರೇರಾ,  ಆನಂದ್ ಫೆರ್ನಾಂಡಿಸ್, ಅನ್ಸಾಫ್ ಕಲ್ಲೇಜಿ, ಶ್ರೀಯಾ ಶೆಟ್ಟಿ ಹಾಗೂ ಸಂದೇಶ್ ಡಿ. ಪೂಜಾರಿ ಅವರನ್ನು ಸನ್ಮಾನಿಸಲಾಗುತ್ತಿದೆ. ನಾಳೆ(ಡಿ.27) ಬೆಳಗ್ಗೆ ಮಂಗಳೂರು ಕಂಬಳಕ್ಕೆ ಚಾಲನೆ ದೊರೆಯಲಿದ್ದು, ಇದೇ ವೇದಿಕೆಯಲ್ಲಿ ಈ ಸಾಧಕರನ್ನು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುತ್ತದೆ.

ನಮ್ಮ ಬ್ಯಾಕ್‌ ಟು ಊರು ಪರಿಕಲ್ಪನೆಯಂತೆ ತಮ್ಮ ಹುಟ್ಟೂರಿನ ಋಣ ತೀರಿಸಲು ಮಂಗಳೂರಿಗೆ ವಾಪಸ್ಸಾಗಿ, ಇಲ್ಲಿಯೇ ಉದ್ಯಮಗಳನ್ನು ಆರಂಭಿಸಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿರುವ 9 ಮಂದಿ ವಿಶಿಷ್ಟ ಉದ್ಯಮಿಗಳನ್ನು ಮಂಗಳೂರು ಕಂಬಳದ ವೇದಿಕೆಯಲ್ಲಿ ಸನ್ಮಾನಿಸಲಾಗುತ್ತಿದೆ. ಈ ಬಾರಿ ‘ನವ ವರ್ಷ – ನವ ವಿಧ’ದ ಮಂಗಳೂರು ಕಂಬಳ ಆಗಿರುವ ಕಾರಣ ಬ್ಯಾಕ್‌ ಟು ಊರುʼ ಕಾರ್ಯಕ್ರಮವನ್ನು ಬೆಂಬಲಿಸಿರುವ ಒಂಬತ್ತು ಮಂದಿ ಉದ್ಯಮಿಗಳನ್ನು ಸನ್ಮಾನಿಸುತ್ತಿರುವುದು ಬಹಳ ಖುಷಿ ಹಾಗೂ ಹೆಮ್ಮೆಯ ವಿಚಾರ ಎಂದು ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

[t4b-ticker]
error: Content is protected !!