ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ರವರನ್ನು ಭೇಟಿಯಾಗಿ ಉಡುಪಿ ಜಿಲ್ಲೆಯ ಕೋಟದಲ್ಲಿರುವ ಖ್ಯಾತ ಸಾಹಿತಿ ಕೋಟ ಶಿವರಾಮ ಕಾರಂತರ ಸ್ಮರಣಾರ್ಥ ಥೀಮ್ ಪಾರ್ಕ್ಗೆ ರಕ್ಷಣಾ ಇಲಾಖೆಯ ವತಿಯಿಂದ ಯುದ್ಧ ವಿಮಾನವನ್ನು ಪ್ರದರ್ಶನಕ್ಕೆ ನೀಡಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿಯನ್ನು ಪುರಸ್ಕರಿಸಿ ಸಚಿವರು ಕಾರ್ಗಿಲ್ ಯುದ್ಧ ಜಯಿಸಿದ ಜಗತ್ತಿನಲ್ಲೇ ಜನಪ್ರಿಯಗೊಂಡ “ಮಿಗ್-21” ಯುದ್ಧ ವಿಮಾನವನ್ನು ಉಡುಪಿಗೆ ಕಳಿಸಿಕೊಟ್ಟಿದ್ದಾರೆ.

ಈ ಯುದ್ಧ ವಿಮಾನ ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ಜಯ ತಂದು ಕೊಡುವಲ್ಲಿ ಪಾತ್ರ ವಹಿಸಿತ್ತು ಎನ್ನುವಾಗ ರೋಮಾಂಚನವಾಗುತ್ತದೆ. ನಮಗೆಲ್ಲಾ ಎಂದೆಂದಿಗೂ ನೆನಪಿರುವ ಭಾರತದ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್ರವರು ಪಾಕಿಸ್ತಾನದ ಅತ್ಯಾಧುನಿಕ ತಂತ್ರಜ್ಞಾನದ F-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ನಮ್ಮ ಹಳೆಯ ಮಿಗ್-21 ಯುದ್ಧ ವಿಮಾನದಲ್ಲಿ ಎಂಬುದು ಇತಿಹಾಸ.ಅಂತಹಾ ಖ್ಯಾತಿವೆತ್ತ ಯುದ್ಧ ವಿಮಾನ ಈಗ ನಮ್ಮ ಉಡುಪಿಯ ಕೋಟದ ಥೀಮ್ ಪಾರ್ಕ್ನಲ್ಲಿದೆ. ಭಾರತೀಯ ಸೈನ್ಯದ ನುರಿತ ಯೋಧರ ತಂಡವು ಉಡುಪಿಗೆ ಆಗಮಿಸಿ ಈ ವಿಮಾನವನ್ನು ಯಶಸ್ವಿಯಾಗಿ ಜೋಡಿಸಿದೆ.

ಈ ಯುದ್ಧ ವಿಮಾನ ಇನ್ನೂ ಲೋಕಾರ್ಪಣೆಯಾಗಿಲ್ಲ. ಅದಾಗಲೇ ಸಾಕಷ್ಟು ಮಾಜಿ ಯೋಧರು, ವಿದ್ಯಾರ್ಥಿಗಳು ಹಾಗೂ ಆಸಕ್ತರು ತಂಡ ತಂಡವಾಗಿ ಥೀಮ್ ಪಾರ್ಕ್ಗೆ ಆಗಮಿಸಿ ಈ ಯುದ್ಧ ವಿಮಾನವನ್ನು ವೀಕ್ಷಿಸಿ ಸಂಭ್ರಮಿಸಿದ್ದಾರೆ. ಈ ಯುದ್ಧ ವಿಮಾನ ಭಾರತ ಮಾತೆಯ ಸಿಂಧೂರದಂತೆ ಉಡುಪಿಯ ಕೋಟದಲ್ಲಿ ಕಂಗೊಳಿಸಲಿದೆ. ಆದಷ್ಟು ಬೇಗ ಇದನ್ನು ಲೋಕಾರ್ಪಣೆಗೊಳಿಸಲಿದ್ದೇವೆ. ಎಂದು ಕೋಟ ಶ್ರೀನಿವಾಸ ಪೂಜಾರಿ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.













































