ಯುಜಿಸಿ ಸಮಾನತೆ ಕಾಯ್ದೆ ಸ್ವಾಗತಾರ್ಹ: ಎಸ್‌ಸಿ, ಎಸ್‌ಟಿ, ಒಬಿಸಿ ಸಮನ್ವಯ ಸಮಿತಿ

Picture of Savistara

Savistara

Bureau Report

ಹೊಸಪೇಟೆ (ವಿಜಯನಗರ): ಸುಪ್ರೀಂ ಕೋರ್ಟ್‌ನ ಸೂಚನೆಯಂತೆ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಯುಜಿಸಿ ಸುಧಾರಣೆಗಳು ಮತ್ತು ಸಮಾನತೆ ಕಾಯ್ದೆ ಸ್ವಾಗತಾರ್ಹವಾಗಿದ್ದು, ಈ ಕಾಯ್ದೆಗೆ ಸುಪ್ರೀಂ ಕೋರ್ಟ್‌ನಲ್ಲಿ ಇರುವ ತಡೆಯನ್ನು ತಕ್ಷಣ ತೆರವುಗೊಳಿಸುವ ಕೆಲಸ ಆಗಬೇಕು ಎಂದು ಎಸ್‌ಸಿ, ಎಸ್‌ಟಿ, ಒಬಿಸಿ ಸಮನ್ವಯ ಸಮಿತಿ ಒತ್ತಾಯಿಸಿದೆ.

ಸಮಿತಿಯ ಜಿಲ್ಲಾ ಸಂಚಾಲಕ ಸ್ಲಂ ರಾಮಚಂದ್ರ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾಯ್ದೆಯಿಂದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಸ್ವಲ್ಪಮಟ್ಟಿಗಾದರೂ ತಡೆಗಟ್ಟುವುದು ಸಾಧ್ಯವಿದೆ ಎಂದರು.ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಅವರ ಸಾವಿನ ಬಳಿಕ ಜಾತಿ ತಾರತಮ್ಯ ಚರ್ಚೆ ಮುನ್ನೆಲೆಗೆ ಬಂದಿದೆ. 2019ರಲ್ಲಿ ಮುಂಬೈಯಲ್ಲಿ ಡಾ.ಪಾಯಲ್‌ ತದ್ವಿ ಅವರ ಸಾವು, 2023ರಲ್ಲಿ ಬಾಂಬೆ ಐಐಟಿ ವಿದ್ಯಾರ್ಥಿ ದರ್ಶನ್ ಸೋಲಂಕಿ ಪ್ರಕರಣ ಸಹಿತ ಕಳೆದ ಐದು ವರ್ಷಗಳಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಐಐಟಿ, ಐಐಎಂ, ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಇಂತಹ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಅನೇಕ ಸಂಘ ಸಂಸ್ಥೆಗಳು ಹೋರಾಟ ಮಾಡಿದ್ದರ ಫಲವಾಗಿ ಯುಜಿಸಿ ಸಮಾನತೆ ಕಾಯ್ದೆ ರೂಪಿಸಲಾಗಿದೆ. ಇದನ್ನು ತಡೆಗಟ್ಟುವ ಯಾವ ಪ್ರಯತ್ನಕ್ಕೂ ಸರ್ಕಾರ ಕುಮ್ಮಕ್ಕು ಕೊಡಬಾರದು. ಹಾಗೇನಾದರೂ ಆದರೆ ಶೇ 85ರಷ್ಟಿರುವ ಈ ಸಮುದಾಯದ ಜನರಿಂದ ಉಗ್ರ ಹೋರಾಟ ನಡೆಯುವುದು ನಿಶ್ಚಿತ ಎಂದು ರಾಮಚಂದ್ರ ಎಚ್ಚರಿಸಿದರು.

ಸಮಿತಿಯ ಇನ್ನೊಬ್ಬ ಮುಖಂಡ ಜೆ.ಶಿವಕುಮಾ‌ರ್ ಮಾತನಾಡಿ, ಕೆಲವು ಹಿತಾಸಕ್ತಿಗಳು ಈ ಸುಧಾರಣೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಸಾರ್ವಜನಿಕರು ಮತ್ತು ವಿದ್ಯಾರ್ಥಿ ಸಮುದಾಯ ಇದನ್ನು ನಂಬಬಾರದು ಎಂದರು.

ಮುಖಂಡರಾದ ಎಚ್.ವೀರೇಶ್, ವೆಂಕಮ್ಮ, ರಾಘವೇಂದ್ರ ಕನ್ನೇರಿ, ಖಾಲಿದ್‌, ಇರ್ಫಾನ್ ಇದ್ದರು.

[t4b-ticker]
error: Content is protected !!