ಕಾಪು (ಪಡುಬಿದ್ರಿ): ಶಾಶ್ವತ ಕುಡಿಯುವ ನೀರಿನ ಯೋಜನೆಸಂಪೂರ್ಣ ಕಾರ್ಯರೂಪಕ್ಕೆ ಬಾರದೇ ಇರುವ ಸಂದರ್ಭದಲ್ಲೇ ಹಳೆಯ ಜಲಮೂಲಗಳ ಸಂಪರ್ಕ ಕಡಿತಗೊಳಿಸಿರುವುದರಿಂದ ಕಾಪು ಪುರಸಭೆ ವ್ಯಾಪ್ತಿಯಲ್ಲಿ ಬೇಸಿಗೆ ಆರಂಭದಲ್ಲಿಯೇ ನೀರಿನ ತೀವ್ರ ಸಮಸ್ಯೆ ಕಾಡಿದೆ.
ಪುರಸಭೆ ವ್ಯಾಪ್ತಿಯಲ್ಲಿ ಬೇಸಿಗೆ ತಾಪಮಾನ ಏರಿಕೆಯಾಗುವ ಮುನ್ನವೇ ನೀರಿನ ಬಳಕೆ ಹೆಚ್ಚಾಗಿದೆ. ಆದರೆ ಶಾಶ್ವತ ಯೋಜನೆಯಿಂದ ನಿರೀಕ್ಷಿಸಿದ್ದಷ್ಟು ಪ್ರಮಾಣದಲ್ಲಿ ನೀರು ಸರಬರಾಜಾಗದೇ ಇರುವುದರಿಂದ ಜನತೆ ಸಂಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಹಳೆ ಬಾವಿಗಳು ಮತ್ತು ಬೋರ್ವೆಲ್ ಸಂಪರ್ಕಗಳನ್ನು ಕಡಿತಗೊಳಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.ಶಾಶ್ವತ ಯೋಜನೆಯನ್ನು ಜಾರಿಗೆ ತರಬೇಕಾದರೆ ಪರ್ಯಾಯ ವ್ಯವಸ್ಥೆಯನ್ನು ಸಂಪೂರ್ಣ ಸಿದ್ದಪಡಿಸಿ, ಪರೀಕ್ಷಾ ಹಂತ ಯಶಸ್ವಿಯಾಗಿ ಮುಗಿದ ಬಳಿಕವೇ ಹಳೆಯ ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕು ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.ಪುರಸಭೆ ವ್ಯಾಪ್ತಿಗೆ ಕುರ್ಕಾಲು ಅಣೆಕಟ್ಟೆಯಿಂದ ಶಾಶ್ವತ ಕುಡಿಯುವ ನೀರು ಪೂರೈಸುವ ಮಹತ್ವಕಾಂಕ್ಷಿ ಯೋಜನೆಯನ್ನು 2018ರಲ್ಲಿ ರಾಜ್ಯ ಸರ್ಕಾರದ ಅನುದಾನದ ಅಡಿಯಲ್ಲಿ ₹57.02 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ 2021ರಲ್ಲಿ ಟೆಂಡರ್ ಅಂತಿಮಗೊಳಿಸಿ ಕೈಗೆತ್ತಿಕೊಳ್ಳಲಾಗಿತ್ತು.
ಪುರಸಭೆ ಮತ್ತು ಅಕ್ಕಪಕ್ಕದ 7 ಗ್ರಾಮಗಳಾದ ಕುರ್ಕಾಲು, ಮೂಡಬೆಟ್ಟು, ಕೋಟೆ, ಮಟ್ಟು, ಏಣಗುಡ್ಡೆ ಇನ್ನಂಜೆ, ಪಾಂಗಾಳ ಗ್ರಾಮಗಳಿಗೆ ಕುರ್ಕಾಲು ಗ್ರಾಮದ ಮಣಿಪುರ ಸೇತುವೆಯ ಪಾಪನಾಶಿನಿ ನದಿ ಬಳಿ ಇಂಟೇಕ್ ವೆಲ್ ನಿರ್ಮಾಣ, ಜಾಕ್ವೆಲ್ ಕಮ್ ಪಂಪ್ ಹೌಸ್, ಸಂಪರ್ಕ ಪೈಪ್ಲೈನ್ ನಿರ್ಮಾಣ ಮಾಡಲಾಗಿತ್ತು. ಪಂಪಿಂಗ್ ಯಂತ್ರಗಳ ಮೊದಲಾದವುಗಳನ್ನೂ ಅಳವಡಿಸಲಾಗಿತ್ತು.ಕುಂಜಾರುಗಿರಿ ಬಳಿ 7.10 ಎಂಎಲ್ಡಿ ಸಾಮರ್ಥ್ಯದ ನೀರು ಶುದ್ದೀಕರಣ ಘಟಕ ಮತ್ತು ಶುದ್ಧ ನೀರಿನ ಜಲಸಂಗ್ರಹಗಾರ ನಿರ್ಮಿಸಿ ಕುಂಜಾರುಗಿರಿಯಿಂದ ಶುದ್ಧ ನೀರನ್ನು ಸುಭಾಸ್ನಗರ, ಶಂಕರಪುರ, ಇನ್ನಂಜೆ, ಕಲ್ಯಾ ಮೂಲಕ ಪೈಪ್ಲೈನ್ನಲ್ಲಿ ಪುರಸಭೆ ವ್ಯಾಪ್ತಿಗೆ ಸರಬರಾಜು ಮಾಡುವ ಯೋಜನೆ 2025ರಲ್ಲಿಯೇ ಪೂರ್ಣಗೊಂಡಿತ್ತು.
2024ರಿಂದ ಕಾಪು ಪಟ್ಟಣದ ಎಲ್ಲಾ ವಲಯ ಜಲಾಶಯಗಳಿಗೆ ಸೂಕ್ತ ಸಾಮರ್ಥ್ಯದ ಪಂಪ್ ಸೆಟ್ ಅಳವಡಿಕೆ, ಸಂಪು ಕಮ್ ಪಂಪ್ ಹೌಸ್ ನಿರ್ಮಾಣ ಮಾಡಲಾಗಿತ್ತು. ಉಳಿಯಾರುಗೋಳಿ, ಪಡು ವಲಯಗಳಲ್ಲಿ 5 ಲಕ್ಷ ಲೀಟರ್ ಮತ್ತು ಪಕೀರ್ಣಕಟ್ಟೆ ವಲಯಗಳಿಗೆ 10 ಲಕ್ಷ ಲೀ. ಮೇಲ್ಮಟ್ಟದ ಜಲಸಂಗ್ರಹಗಾರ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ವ್ಯಾಸದ 31 ಕಿಮೀ ವಿತರಣಾ ಜಾಲ ನಿರ್ಮಿಸಿ ಗೃಹ ಸಂಪರ್ಕ ಕಲ್ಪಿಸಿ ಕೊಡಲಾಗಿದೆ.”ಕುರ್ಕಾಲು ಅಣೆಕಟ್ಟೆ ಪ್ರದೇಶದ ರೈತರ ಬೇಡಿಕೆಯಂತೆ ಡಿಸೆಂಬರ್ನಲ್ಲಿ ನೀರು ಸಂಗ್ರಹಕ್ಕೆ ವಿನಾಯಿತಿ ನೀಡಲಾಗಿತ್ತು. ಇದೀಗ ನೀರಿನ ಮಟ್ಟ 1.25 ಮೀಟರ್ಗೆ ಸೀಮಿತಗೊಂಡಿದೆ. ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ಹರಿದು ಹೋಗುತ್ತಿರುವ ನೀರನ್ನು ತಡೆ ಹಿಡಿಯಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಇಂಜಿನಿಯರ್ ರಕ್ಷಿತ್ ರಾವ್ ಹೇಳಿದ್ದಾರೆ.













































