ಕೊಲ್ಕತ್ತಾ: ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ(West Bengal Election) ಐತಿಹಾಸಿಕ ಗೆಲುವು ಹಾಗೂ ತಮಿಳುನಾಡಿನಲ್ಲಿ ನಟ ವಿಜಯ್ ಅಚ್ಚರಿಯ ರಾಜಕೀಯ ಪ್ರವೇಶವು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದು, ಲಂಡನ್ನಿಂದ ನ್ಯೂಯಾರ್ಕ್ವರೆಗೆ ಮತ್ತು ಇಸ್ಲಾಮಾಬಾದ್ನಿಂದ ಢಾಕಾದವರೆಗೆ ಜಗತ್ತಿನ ಪ್ರಮುಖ ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ಈ ಫಲಿತಾಂಶ ಬೀರಲಿರುವ ಪರಿಣಾಮಗಳ ಬಗ್ಗೆ ಸುದೀರ್ಘವಾಗಿ ವರದಿ ಮಾಡಿವೆ.ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಸುದೀರ್ಘ ಆಡಳಿತವನ್ನು ಅಂತ್ಯಗೊಳಿಸಿದ ಬಿಜೆಪಿಯ ಸಾಧನೆಯನ್ನು ವಿದೇಶಿ ಪತ್ರಿಕೆಗಳು ಮೋದಿ ಆಳ್ವಿಕೆಯ ಅತ್ಯಂತ ಮಹತ್ವದ ತಿರುವು ಎಂದು ಬಣ್ಣಿಸಿವೆ.
ಬ್ರಿಟನ್ನ ಬಿಬಿಸಿ ಸಂಸ್ಥೆಯು, ಭಾರತದ ಅತ್ಯಂತ ಕಠಿಣ ರಾಜಕೀಯ ಗಡಿಗಳಲ್ಲಿ ಒಂದಾದ ಪಶ್ಚಿಮ ಬಂಗಾಳದ ಮೇಲೆ ಬಿಜೆಪಿ ಹಿಡಿತ ಸಾಧಿಸಿರುವುದನ್ನು ವಿಶೇಷವಾಗಿ ಉಲ್ಲೇಖಿಸಿದೆ. ಇದು ಕೇವಲ ಒಂದು ಸರ್ಕಾರದ ಸೋಲಲ್ಲ, ಬದಲಾಗಿ ಪೂರ್ವ ಭಾರತದತ್ತ ಬಿಜೆಪಿ ನಡೆಸಿದ ದೀರ್ಘಕಾಲದ ಪ್ರಯತ್ನಕ್ಕೆ ಸಂದ ಜಯ ಎಂದು ಅದು ವಿಶ್ಲೇಷಿಸಿದೆ.
ದಿ ಗಾರ್ಡಿಯನ್ ಪತ್ರಿಕೆಯು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಿರೋಧ ಪಕ್ಷಗಳ ಭದ್ರಕೋಟೆಯಾಗಿದ್ದ ಬಂಗಾಳದ ಪತನವು ದೇಶಾದ್ಯಂತ ಬಿಜೆಪಿಯ ಅಧಿಕಾರ ಬಲಗೊಳ್ಳುತ್ತಿರುವುದಕ್ಕೆ ಸಾಕ್ಷಿ ಎಂದು ವರದಿ ಮಾಡಿದೆ. ಇದು ಈಗಾಗಲೇ ದುರ್ಬಲಗೊಂಡಿರುವ ಭಾರತದ ವಿರೋಧ ಪಕ್ಷಗಳಿಗೆ ಮತ್ತೊಂದು ದೊಡ್ಡ ಹೊಡೆತ ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ.
ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಪುನರ್ನಿಮಿ್ರಸುವ ಮೋದಿ ಅಭಿಯಾನದಲ್ಲಿ ಇದೊಂದು ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿದೆ. ಇದರೊಂದಿಗೆ ತಮಿಳುನಾಡಿನಲ್ಲಿ ರಾಜಕೀಯಕ್ಕೆ ಹೊಸಬರಾದ ನಟ ಜೋಸೆಫ್ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ಸ್ಥಾಪಿತ ಪಕ್ಷಗಳಿಗಿಂತಲೂ ಉತ್ತಮ ಪ್ರದರ್ಶನ ನೀಡಿರುವುದನ್ನು ಅದು ದೊಡ್ಡ ಅಚ್ಚರಿ ಎಂದು ಕರೆದಿದೆ.
ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, ಈ ಫಲಿತಾಂಶವು ಮೋದಿ ಮೂರನೇ ಅವಧಿಯ ಮಧ್ಯಭಾಗದಲ್ಲಿ ಅವರ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ ಮತ್ತು ಇದು 2029 ರ ಸಾರ್ವತ್ರಿಕ ಚುನಾವಣೆಯ ಹಾದಿಯನ್ನು ಸುಗಮಗೊಳಿಸಿದೆ. ಇದೇ ವೇಳೆ ಕೇರಳದಲ್ಲಿ ಎಡಪಂಥೀಯರ ಕೊನೆಯ ಭದ್ರಕೋಟೆಯನ್ನು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ವಶಪಡಿಸಿಕೊಂಡಿರುವುದನ್ನು ಸಹ ಅದು ಉಲ್ಲೇಖಿಸಿದೆ.
ನೆರೆಯ ಪಾಕಿಸ್ತಾನದ ಡಾನ್ ಮತ್ತು ಬಾಂಗ್ಲಾದೇಶದ ಢಾಕಾ ಟ್ರಿಬ್ಯೂನ್ ಪತ್ರಿಕೆಗಳು ಸಹ ಈ ಚುನಾವಣಾ ಫಲಿತಾಂಶಗಳಿಗೆ ಪ್ರಾಮುಖ್ಯತೆ ನೀಡಿದ್ದು, ಬಾಕಿ ಇರುವ ವಿದೇಶಾಂಗ ಮತ್ತು ಆರ್ಥಿಕ ಸವಾಲುಗಳ ನಡುವೆಯೂ ಈ ಗೆಲುವು ಪ್ರಧಾನಿ ಮೋದಿ ಅವರಿಗೆ ಹೆಚ್ಚಿನ ಶಕ್ತಿ ನೀಡಲಿದೆ ಎಂದು ಅವು ವಿಶ್ಲೇಷಿಸಿವೆ.
ತಮಿಳುನಾಡಿನ ನಿಕಟಪೂರ್ವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ನಟ ವಿಜಯ್ ನೇತೃತ್ವದ ಟಿವಿಕೆ ಎದುರು ಹಿನ್ನಡೆ ಅನುಭವಿಸಿರುವುದು ಮತ್ತು ದಕ್ಷಿಣ ಭಾರತದ ರಾಜಕೀಯ ಭೂಪಟದಲ್ಲಿನ ಬದಲಾವಣೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಒಟ್ಟಾರೆಯಾಗಿ, ಈ ಚುನಾವಣಾ ಫಲಿತಾಂಶಗಳು ಭಾರತದ ರಾಜಕೀಯ ಭವಿಷ್ಯದ ದಿಕ್ಕನ್ನು ಬದಲಿಸುವ ಶಕ್ತಿ ಹೊಂದಿವೆ ಎಂದು ಜಾಗತಿಕ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ













































