ಬೆಂಗಳೂರು: 78 ವರ್ಷಗಳ ಭವ್ಯ ಪರಂಪರೆಯಿರುವ ಉಜ್ವಲ ರಾಷ್ಟ್ರೀಯ ಕನ್ನಡ ವಾರಪತ್ರಿಕೆ ವಿಕ್ರಮದ ನೂತನ ಸಂಪಾದಕರಾಗಿ ಹಿರಿಯ ಪತ್ರಕರ್ತ ಚಂದ್ರಶೇಖರ ಕುಳಮರ್ವ ಅವರು ನೇಮಕಗೊಂಡಿದ್ದಾರೆ. ಮೇ 5ರಂದು ಅವರು ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಜ್ಞಾನಭಾರತಿ ಪ್ರಕಾಶನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್. ಪ್ರಕಾಶ್ ಅವರು ವಿಕ್ರಮ ಕಚೇರಿಯಲ್ಲಿ ನೂತನ ಸಂಪಾದಕರಿಗೆ ಹೊಣೆಯನ್ನು ವಹಿಸಿಕೊಟ್ಟರು.
ಚಂದ್ರಶೇಖರ ಕುಳಮರ್ವ ಅವರು ಕಳೆದ 28 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಕನ್ನಡ ಜನಾಂತರಂಗ ಪತ್ರಿಕೆಯಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ನಂತರ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ 20 ವರ್ಷಗಳ ಕಾಲ ವಿವಿಧ ಹಂತದ ಕರ್ತವ್ಯಗಳನ್ನು ನಿರ್ವಹಿಸಿದ್ದರು. ಕಿರು ಅವಧಿಗೆ ವಿಶ್ವವಾಣಿ, ಹೊಸದಿಗಂತ ಡಿಜಿಟಲ್ ನಲ್ಲೂ ಕರ್ತವ್ಯ ನಿರ್ವಹಿಸಿದ್ದರು.ವಿಜಯ ಕರ್ನಾಟಕ ತೊರೆದ ನಂತರ ಕಳೆದ ಆರೂವರೆ ವರ್ಷಗಳಿಂದ ಉಪಯುಕ್ತ ನ್ಯೂಸ್ ಎಂಬ ಡಿಜಿಟಲ್ ಮಾಧ್ಯಮವನ್ನು ಆರಂಭಿಸಿ ಮುನ್ನಡೆಸಿಕೊಂಡು ಬಂದಿದ್ದರು.ಇದರೊಂದಿಗೆ ಕಿರು ಅವಧಿಗೆ ವಿಶ್ವವಾಣಿ, ಹೊಸದಿಗಂತ ಡಿಜಿಟಲ್ನಲ್ಲೂ ಕಾರ್ಯನಿರ್ವಹಿಸಿದ ಅನುಭವ ಅವರಿಗಿದೆ. ಪದಗ್ರಹಣ ಸಂದರ್ಭದಲ್ಲಿ ನಿಕಟಪೂರ್ವ ಸಂಪಾದಕ ರಮೇಶ ದೊಡ್ಡಪುರ, ಗೌರವ ಸಂಪಾದಕ ನ. ನಾಗರಾಜ, ಸಂವಾದ ಸಂಪಾದಕ ವೃಷಾಂಕ್ ಭಟ್, ಕಚೇರಿ ವ್ಯವಸ್ಥಾಪಕ ವಿ.ಎಸ್. ಶೆಣೈ ಹಾಗೂ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.













































