ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರ ಅಭಿಮಾನೋತ್ಸವದ ಅಂಗವಾಗಿ ಕೋಟೆನಗರಿ ಸಂಪೂರ್ಣವಾಗಿ ಕೇಸರಿಮಯವಾಗಿದೆ. ನಗರ ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲಿ ಬಂಟಿಂಗ್ಸ್, ಕಟೌಟ್ಗಳು ರಾರಾಜಿಸುತ್ತಿವೆ. ಶನಿವಾರ ನಡೆಯಲಿರುವ ಉತ್ಸವಕ್ಕೆ ಸ್ವಾಗತ ಕೋರುವ ಕಮಾನುಗಳು, ಕಟೌಟ್ಗಳು ರಾರಾಜಿಸುತ್ತಿವೆ.
ಐತಿಹಾಸಿಕ ನಗರದ ಪ್ರಮುಖ ಸ್ಮಾರಕಗಳು, ಬೀದಿ, ವೃತ್ತಗಳಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ-48ರಲ್ಲಿ 6 ಕಿ.ಮೀವರೆಗೆ ಕೇಸರಿ ಬಂಟಿಂಗ್ಸ್, ಅಭಿಮಾನೋತ್ಸವದ ಧ್ವಜಗಳನ್ನು ಅಳವಡಿಸಲಾಗಿದೆ. ನಗರದಲ್ಲಿ ಹಾದುಹೋಗಿರುವ ಹಳೇ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಕೇಸರಿಮಯವಾಗಿದೆ. ರಾಜ್ಯದ ಮೂಲೆಮೂಲೆಯಿಂದ ಬರುವ ಲಕ್ಷಾಂತರ ಜನರಿಗೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ಮಾದಾರ ಚನ್ನಯ್ಯ ಗುರುಪೀಠದ ಪಕ್ಕದ ವಿಶಾಲ ಮೈದಾನದಲ್ಲಿ ಅಭಿಮಾನೋತ್ಸವ ನಡೆಯಲಿದ್ದು ಅಂತಿಮ ಹಂತದ ಸಿದ್ಧತೆ ಮಾಡಲಾಗುತ್ತಿದೆ. ಬೃಹತ್ ವೇದಿಕೆಯ ಪ್ರವೇಶದ್ವಾರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ತಮಿಳುನಾಡಿನಿಂದ ಬಂದಿರುವ ಕಲಾವಿದರು ಪ್ರವೇಶದ್ವಾರ ಹಾಗೂ ಮುಖ್ಯ ವೇದಿಕೆಯ ಅಲಂಕಾರ ಮಾಡುತ್ತಿದ್ದಾರೆ. ಕಳೆದ 3 ದಿನಗಳಿಂದಲೂ ನಗರದಲ್ಲೇ ವಾಸ್ತವ್ಯ ಹೂಡಿರುವ ಬಿಜೆಪಿ ರಾಜ್ಯ ಘಕಟದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಿದ್ಧತೆ ಕಾರ್ಯಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.













































