ಚಿತ್ರದುರ್ಗ: ಅಭಿಮಾನೋತ್ಸವದ ಅಂಗವಾಗಿ ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸಂಜೆಯೇ ಪುರ ಪ್ರವೇಶ ಮಾಡಲಿದ್ದಾರೆ. ಮೈಸೂರು ದಸರಾ ಮಾದರಿಯ ಮೆರವಣಿಗೆ ಮೂಲಕ ಸ್ವಾಗತ ಕೋರಲು ಸಾವಿರಾರು ಬಿಜೆಪಿ ಕಾರ್ಯಕರ್ತರು, ವಿವಿಧ ಕಲಾ ತಂಡಗಳ ಕಲಾವಿದರು ಸಜ್ಜಾಗಿದ್ದಾರೆ.
ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಬಿ.ಡಿ ರಸ್ತೆಯ ಮದಕರಿ ವೃತ್ತದವರೆಗೂ ಮೆರವಣಿಗೆ ನಡೆಯಲಿದೆ. ಮಾರ್ಗದಲ್ಲಿ ಬರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಗಾಂಧಿ ಪ್ರತಿಮೆ, ಅಂಬೇಡ್ಕರ್ ಪ್ರತಿಮೆ ಹಾಗೂ ಮದಕರಿ ನಾಯಕರ ಪ್ರತಿಮೆಗೆ ಯಡಿಯೂರಪ್ಪ ಅವರು ಮಾಲಾರ್ಪಣೆ ಮಾಡಲಿದ್ದಾರೆ.1008 ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದಾರೆ. 500 ರೈತರು ನೇಗಿಲು ಹೊತ್ತು ನಡೆಯಲಿದ್ದಾರೆ. 250 ಮಹಿಳೆಯರು ಒನಕೆ ಓಬವ್ವ ವೇಷಭೂಷಣದೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.













































