Kedarnath: ಭಾರಿ ಹಿಮಪಾತದ ನಡುವೆಯೂ ‘ಶಿವನಾಮ’ ಸ್ಮರಣೆಯೊಂದಿಗೆ ಭಕ್ತರ ದಂಡು!

Picture of Savistara

Savistara

Bureau Report

ರುದ್ರಪ್ರಯಾಗ (ಉತ್ತರಾಖಂಡ): ಹಿಮಾಲಯದ ತಪ್ಪಲಿನಲ್ಲಿರುವ ವಿಶ್ವಪ್ರಸಿದ್ಧ ಕೇದಾರನಾಥ ಧಾಮದಲ್ಲಿ ಇಂದು ಹವಾಮಾನ ವೈಪರೀತ್ಯ ಉಂಟಾಗಿದ್ದು, ಭಾರಿ ಹಿಮಪಾತವಾಗುತ್ತಿದೆ. ಸುತ್ತಮುತ್ತಲಿನ ಪರ್ವತ ಶ್ರೇಣಿಗಳು ಬಿಳಿ ಮಂಜಿನ ಹೊದಿಕೆಯಿಂದ ಕಂಗೊಳಿಸುತ್ತಿದ್ದು, ಈ ಮೈ ಹೆಪ್ಪುಗಟ್ಟಿಸುವ ಚಳಿಯ ನಡುವೆಯೂ ಭಕ್ತರ ಉತ್ಸಾಹ ಕುಂದಿಲ್ಲ. ಸಾವಿರಾರು ಯಾತ್ರಿಕರು ಹಿಮದ ಮಳೆಯಲ್ಲೇ ಶಿವನ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದಾರೆ.

ಪ್ರಕೃತಿಯ ಸೌಂದರ್ಯಕ್ಕೆ ಮಾರುಹೋದ ಯಾತ್ರಿಕರು!

ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿತ್ತು, ಆದರೆ ಇಂದು ಹಿಮಪಾತ ಆರಂಭವಾಗಿದೆ. ಕೇದಾರನಾಥ ದೇವಾಲಯದ ಆವರಣ ಮತ್ತು ಸುತ್ತಮುತ್ತಲಿನ ಬೆಟ್ಟಗಳು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿವೆ. ದರ್ಶನಕ್ಕಾಗಿ ಆಗಮಿಸಿರುವ ಯಾತ್ರಿಕರು ಈ ಅದ್ಭುತ ದೃಶ್ಯಗಳನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿಯುತ್ತಾ, ಚಳಿಯನ್ನು ಲೆಕ್ಕಿಸದೆ ‘ಹರ ಹರ ಮಹಾದೇವ’ ಎನ್ನುತ್ತಾ ಭಕ್ತಿಯಲ್ಲಿ ಮಿಂದೆದ್ದಿದ್ದಾರೆ.

ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ

ಉತ್ತರಾಖಂಡದ ಎತ್ತರದ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಹಿಮಪಾತ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಹವಾಮಾನ ವೈಪರೀತ್ಯದಿಂದಾಗಿ ಕೇದಾರನಾಥಕ್ಕೆ ಸಾಗುವ ಹೆಲಿಕಾಪ್ಟ‌ರ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಭಕ್ತರು ಸಾಕಷ್ಟು ಉಣ್ಣೆ ಬಟ್ಟೆಗಳು, ರೈನ್ ಕೋಟ್ ಮತ್ತು ಅಗತ್ಯ ಔಷಧಿಗಳನ್ನು ಜೊತೆಯಲ್ಲಿಟ್ಟುಕೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ.

ಸುಗಮ ಯಾತ್ರೆಗೆ ಸಿದ್ಧತೆ

ಹಿಮಪಾತದ ನಡುವೆಯೂ ಯಾತ್ರೆ ಸುಗಮವಾಗಿ ಸಾಗಲು ರುದ್ರಪ್ರಯಾಗ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ದರ್ಶನದ ಸಾಲಿನಲ್ಲಿರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಎಸ್‌ಡಿಆರ್‌ಎಫ್‌ ಮತ್ತು ಸ್ಥಳೀಯ ಪೊಲೀಸರು ನಿಯೋಜನೆಗೊಂಡಿದ್ದಾರೆ.

[t4b-ticker]
error: Content is protected !!