ಚೆನ್ನೈ : ಕೇಂದ್ರ ಸರ್ಕಾರದೊಂದಿಗಿನ ಭಾಷಾ ವಿವಾದ ನಡೆಸುತ್ತಿರುವ ತಮಿಳುನಾಡು ಈಗ ಮತ್ತೆ ಒಂದು ಹೆಜ್ಜೆ ಮುಂದಕ್ಕೆ ಇಟ್ಟಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) 2025-26 ರ ರಾಜ್ಯ ಬಜೆಟ್ನಲ್ಲಿ ರೂಪಾಯಿಯ ಅಧಿಕೃತ ಚಿಹ್ನೆ ‘₹’ ಕೈ ಬಿಟ್ಟಿದ್ದು ಬದಲಿಗೆ ‘ರುಬಾಯಿ’ (ತಮಿಳಿನಲ್ಲಿ ರೂಪಾಯಿ) ಯಿಂದ ‘ರು’ ಅನ್ನು ಆಯ್ಕೆ ಮಾಡಿಕೊಂಡು ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.
ನಾಳೆ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗುವ ರಾಜ್ಯ ಬಜೆಟ್ನ (State Budget) ಟೀಸರ್ ಅನ್ನು ಸ್ಟಾಲಿನ್ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ಸಮಾಜದ ಎಲ್ಲಾ ವರ್ಗಗಳಿಗೆ ಅನುಕೂಲವಾಗುವ, ತಮಿಳುನಾಡಿನ (Tamil Nadu) ವ್ಯಾಪಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಬಜೆಟ್” ಎಂದು ಬರೆದುಕೊಂಡಿದ್ದಾರೆ.
ಹಿಂದಿನ ಎರಡು ಬಜೆಟ್ಗಳಲ್ಲಿ, ರಾಜ್ಯವು ತನ್ನ ಲೋಗೋಗಳಿಗಾಗಿ ರೂಪಾಯಿ ಚಿಹ್ನೆಯನ್ನು ಬಳಸಿತ್ತು. 2023-24ರ ಬಜೆಟ್ನಲ್ಲಿಯೂ ಸಹ ಈ ಚಿಹ್ನೆಯನ್ನು ಪ್ರಮುಖವಾಗಿ ತೋರಿಸಲಾಗಿತ್ತು, ಇದನ್ನು ಐಐಟಿ-ಗುವಾಹಟಿಯ ಪ್ರಾಧ್ಯಾಪಕರೊಬ್ಬರು ವಿನ್ಯಾಸಗೊಳಿಸಿದ್ದರು. ‘₹’ ಯಲ್ಲಿ ಹಿಂದಿಯ ‘ರಾ’ ಹೋಲಿಕೆ ಇರುವ ಹಿನ್ನೆಲೆಯಲ್ಲಿ ಬಳಸದಿರಲು ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ಕರೆನ್ಸಿ ಚಿಹ್ನೆಯನ್ನು ರಾಜ್ಯವೊಂದು ತಿರಸ್ಕರಿಸಿರುವುದು ಇದೇ ಮೊದಲು.
ರೂಪಾಯಿ ಚಿಹ್ನೆಯನ್ನು ಬದಲಾಯಿಸುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೂಪಾಯಿ ಚಿಹ್ನೆಯನ್ನು ವಿನ್ಯಾಸಗೊಳಿಸಿದ್ದು ತಮಿಳುನಾಡಿನ ಉದಯ್ ಕುಮಾರ್, ಉದಯ್ ಕುಮಾರ್, ಮಾಜಿ ಡಿಎಂಕೆ ಶಾಸಕರ ಮಗ ಎನ್ನುವುದು ಇಲ್ಲಿ ಗಮನಿಸಬೇಕು. ನೀವು ಎಷ್ಟು ಮೂರ್ಖರು ಮಿಸ್ಟರ್ ಎಂಕೆ ಸ್ಟಾಲಿನ್ ಎಂದು ಕುಟುಕಿದ್ದಾರೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ಎಂ.ಕೆ ಸ್ಟಾಲಿನ್ ಅವರನ್ನು ಟೀಕಿಸಿದರು. ಉದಯ ಕುಮಾರ್ ಧರ್ಮಲಿಂಗಂ ಒಬ್ಬ ಭಾರತೀಯ ಶಿಕ್ಷಣ ತಜ್ಞ ಮತ್ತು ವಿನ್ಯಾಸಕಾರ, ಮಾಜಿ ಡಿಎಂಕೆ ಶಾಸಕರ ಮಗ, ಅವರು ಭಾರತೀಯ ರೂಪಾಯಿ ಚಿಹ್ನೆಯನ್ನು ವಿನ್ಯಾಸಗೊಳಿಸಿದರು, ಇದನ್ನು ಭಾರತ ಒಪ್ಪಿಕೊಂಡಿತು. 2025-26ರ ತಮಿಳುನಾಡು ಬಜೆಟ್ ದಾಖಲೆಯಿಂದ ಚಿಹ್ನೆಯನ್ನು ಕೈಬಿಡುವ ಮೂಲಕ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಮಿಳರನ್ನು ಅವಮಾನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.













































