ವಿವಿಧ ಸಂಘಟನೆಗಳ ನೇತೃತ್ವ ವಹಿಸಿದ ಕಾರ್ಯಕರ್ತರ ಮನೆಗಳಿಗೆ ರಾತ್ರಿ ವೇಳೆಯಲ್ಲಿ ಪೋಲೀಸ್ ಭೇಟಿ ನೀಡುವುದಕ್ಕೆ ಆಕ್ಷೇಪಣಿಯ :ವಿಶ್ವ ಹಿಂದೂ ಪರಿಷದ್ ಸುಳ್ಯ ಮನವಿ

Picture of Savistara

Savistara

Bureau Report

ಸುಳ್ಯ ತಾಲೂಕಿನಲ್ಲಿ ಕಳೆದ ಅನೇಕ ವರ್ಷಗಳಿಂದ ವಿವಿಧ ಹಿಂದೂ ಸಂಘಟನೆಗಳು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದು ಸಮಾಜದಲ್ಲಿ ಸಂಸ್ಕಾರ ಮತ್ತು ಸಾಮರಸ್ಯವನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಾ ಬಂದಿವೆ. ಹಿಂದೂ ಸಂಘಟನೆಗಳ ಕಾರಣದಿಂದಾಗಿಯೇ ಸುಳ್ಯವು ಸಾಮಾಜಿಕವಾಗಿ ಇತರೆ ಕಡೆಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿರುತ್ತದೆ. ಹಿಂದೂ ಸಂಘಟನೆಗಳ ಸಂಸ್ಕಾರದ ಕಾರ್ಯದಿಂದಾಗಿ ಸಮಾಜದಲ್ಲಿ ಅಪರಾಧ ಪ್ರಕರಣಗಳು ಬಹಳಷ್ಟು ಕಡಿಮೆಯಾಗಿದ್ದು ಸುಳ್ಯದ ಪೋಲೀಸ್ ಇಲಾಖೆ ಹಾಗೂ ನ್ಯಾಯಾಲಯದಲ್ಲಿರುವ ಅತೀ ಕಡಿಮೆ ಪ್ರಕರಣಗಳೇ ಇದಕ್ಕೆ ಸಾಕ್ಷಿಯಾಗಿದೆ.ಇದೀಗ ಪೋಲೀಸ್ ಇಲಾಖೆಯ ಕಡೆಯಿಂದ ಏಕಾಏಕಿ ಈ ರೀತಿ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿರುವ ಕಾರ್ಯಕರ್ತರನ್ನು ಪಟ್ಟಿ ಮಾಡಿ ಅವರುಗಳ ಮನೆಗೆ ಅಪರಾತ್ರಿ ಭೇಟಿ ನೀಡಿ ಅವರ ಫೋಟೋ ತೆಗೆಯುವ ಪ್ರಕ್ರಿಯೆಯನ್ನು ಆರಂಭಿಸಿದ್ದು ಇದು ತೀರಾ ಆಘಾತಕಾರಿಯಾಗಿದೆ. ಮನೆಗಳಿಗೆ ರಾತ್ರಿ ವೇಳೆ ಭೇಟಿ ನೀಡುವುದರಿಂದ ಮನೆಯಲ್ಲಿ ಭೀತಿಯ ವಾತಾವರಣ ಮೂಡುತ್ತಿದ್ದು, ಮನೆಯಲ್ಲಿರುವ ವೃದ್ಧರಿಗೆ ಮತ್ತು ಮಕ್ಕಳಿಗೆ ಮಾನಸಿಕವಾಗಿ ಕಿರುಕುಳವಾಗುತ್ತಿದೆ. ಅಲ್ಲದೆ ಪದೇ ಪದೇ ಪೋಲೀಸ್ ಇಲಾಖೆಯಿಂದ ಮನೆಗಳಿಗೆ ಭೇಟಿ ನೀಡುವುದರಿಂದ ಊರಿನಲ್ಲಿ ಸಾಮಾಜಿಕ ಕಾರ್ಯ ಮಾಡುವ ವ್ಯಕ್ತಿಗಳಿಗೆ ಅವಮಾನದ ಸ್ಥಿತಿ ಉಂಟಾಗಿರುತ್ತದೆ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಈ ಪ್ರಕ್ರಿಯೆ ನಡೆಸುತ್ತಿರುವುದಾಗಿ ಪೋಲೀಸ್ ಸಿಬ್ಬಂದಿಗಳು ಹೇಳಿದ್ದು, ಭಾರತೀಯ ನ್ಯಾಯ ಸಂಹಿತೆಯ ಯಾವ ನಿಯಮದಡಿ ಈ ಪ್ರಕ್ರಿಯೆ ನಡೆಸುತ್ತಿರುವುದಾಗಿ ತಿಳಿಯಬೇಕಿದೆ.ಸಾಮಾಜಿಕ ಕಾರ್ಯ ನಡೆಸುತ್ತಿರುವ ಕಾರ್ಯಕರ್ತರ ಮೇಲೆ ಈ ರೀತಿ ಮಾನಸಿಕ ದೌರ್ಜನ್ಯವನ್ನು ನಡೆಸುವ ಮೂಲಕ ಅವರ ಮಾನಸಿಕ ಧೈರ್ಯವನ್ನು ಕುಗ್ಗಿಸುವ ಕಾರ್ಯವು ಪೋಲೀಸ್ ಇಲಾಖೆಯಿಂದ ನಡೆಯುತ್ತಿರುವುದು ತೀರಾ ಅಕ್ಷಮ್ಯವಾಗಿದೆ. ಈ ಪ್ರಕ್ರಿಯೆಯು ಮುಂದುವರಿದಲ್ಲಿ ಈ ಕುರಿತು ಸೂಕ್ತ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಕ್ರಿಯಿಸುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ. ಆದುದರಿಂದ ಈ ಪ್ರಕ್ರಿಯೆಯನ್ನೂ ತಕ್ಷಣದಿಂದ ನಿಲ್ಲಿಸುವಂತೆ ವಿಶ್ವ ಹಿಂದೂ ಪರಿಷದ್, ಸುಳ್ಯ ಪೋಲೀಸ್ ವೃತ್ತ, ಮಾನ್ಯ ವೃತ್ತ ನಿರೀಕ್ಷಕರಲ್ಲಿ ಮನವಿ ಮಾಡಲಾಯಿತು.

[t4b-ticker]
error: Content is protected !!