ಹಿಂದೂ ಸಂಘಟನೆ ಪ್ರಮುಖರ ಮನೆಗಳಿಗೆ ತಡರಾತ್ರಿ ಪೊಲೀಸ್ ಭೇಟಿ | ರಾಜ್ಯ ಪೊಲೀಸ್ ಪ್ರಾಧಿಕಾರಕ್ಕೆ ಹೈಕೋರ್ಟ್ ನ್ಯಾಯವಾದಿ ಗಿರೀಶ್ ಭಾರದ್ವಾಜ್ ದೂರು

Picture of Savistara

Savistara

Bureau Report

ದಕದಲ್ಲಿ ಪೊಲೀಸರಿಂದ ಕಿರುಕುಳ- ಪೊಲೀಸ್ ದೂರು ಪ್ರಾಧಿಕಾರಕ್ಕೆ ಪತ್ರ ಬರೆದ ನ್ಯಾಯವಾದಿ ಗಿರೀಶ್ ಭಾರದ್ವಾಜ್!ನ್ಯಾಯವಾದಿ ಗಿರೀಶ್ ಭಾರದ್ವಾಜ್ ಅವರು ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರಾದ ನ್ಯಾಯಮೂರ್ತಿ ಎನ್ ಕೆ ಸುಧೀಂದ್ರ ರಾವ್ ಅವರಿಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರಿಂದ ಆಗುತ್ತಿರುವ ಕಿರುಕುಳದ ಬಗ್ಗೆ ವಿವರವಾಗಿ ಬರೆದಿದ್ದಾರೆ. ಅವರ ಪತ್ರದ ಸಾರಾಂಶ ಹೀಗಿದೆ- “ದಕ ಪೊಲೀಸ್ ವರಿಷ್ಠಾಧಿಕಾರಿಯವರ ನಿರ್ದೇಶನದ ಮೇರೆಗೆ ಪೊಲೀಸರು ಕಳೆದ ಏಳು ದಿನಗಳಿಂದ ಯಾವುದೇ ಅಪರಾಧಿಕ ಹಿನ್ನಲೆ ಹೊಂದಿರದ, ಯಾವ ಅಪರಾಧಿಕ ಪ್ರಕರಣಗಳಲ್ಲಿ ಭಾಗಿಯಾಗಿರದ ಜಿಲ್ಲೆಯ ಸಾಮಾಜಿಕ ಹೋರಾಟಗಾರರು ಮತ್ತು ಸಾರ್ವಜನಿಕವಾಗಿ ಸೇವಾಕಾರ್ಯಗಳಲ್ಲಿ ನಿರತರಾಗಿರುವ ವ್ಯಕ್ತಿಗಳ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಶಾಕಿಂಗ್ ವಿಷಯ ಏನೆಂದರೆ ಪೊಲೀಸರ ಇಂತಹ ಭೇಟಿಗಳು ತಡರಾತ್ರಿ ಬಹುತೇಕ ರಾತ್ರಿ 11 ಗಂಟೆಯ ನಂತರವೇ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪೊಲೀಸರು ಆ ಮನೆಯವರ ಫೋಟೋ ತೆಗೆದು, ಜಿಪಿಎಸ್ ಲೋಕೇಶನ್ ದಾಖಲಿಸುತ್ತಿದ್ದಾರೆ. ಇದಕ್ಕೆ ಯಾವುದೇ ರೀತಿಯಲ್ಲಿ ನ್ಯಾಯಾಲಯದಿಂದ ಕಾನೂನಾತ್ಮಕ ಲಿಖಿತ ಅನುಮತಿ ಪತ್ರ ಅವರ ಬಳಿ ಇರುವುದಿಲ್ಲ. ಪೊಲೀಸರ ಈ ನಡವಳಿಕೆ ನಾಗರಿಕರ ಬದುಕುವ ಹಕ್ಕು ಮತ್ತು ಗೌಪ್ಯತೆಯ ಉಲ್ಲಂಘನೆಯಾಗಿರುತ್ತದೆ. ಈ ಕಾರ್ಯಾಚರಣೆಯು ಸಂವಿಧಾನದ ಆರ್ಟಿಕಲ್ 14, 17, 19 ಮತ್ತು 21 ರ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ” ಎಂದು ಬರೆದು ಅದಕ್ಕೆ ಉದಾಹರಣೆಯಾಗಿ ಹಿಂದಿನ ಪ್ರಕರಣಗಳಲ್ಲಿ ಸುಪ್ರೀಂಕೋರ್ಟಿನ ತೀರ್ಪನ್ನು ಉಲ್ಲೇಖಿಸಿದ್ದಾರೆ. ಇನ್ನು ಪತ್ರದಲ್ಲಿ ನ್ಯಾಯವಾದಿ ಗಿರೀಶ್ ಭಾರದ್ವಾಜ್ ಅವರು ಈ ಸಂಬಂಧ ವಿಡಿಯೋ ಮಾಡಿ ಪ್ರಚಾರ ಮಾಡಿರುವ ದಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಾರ್ಯವನ್ನು ಉಲ್ಲೇಖಿಸಿ ಕೋಮುವಾದಿ ಸಂಘಟನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇಂತಹ ಕಾರ್ಯಾಚರಣೆಯನ್ನು ಸಮರ್ಥಿಸಿ ಇದರ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆನೂ ಪೊಲೀಸ್ ವರಿಷ್ಠಾಧಿಕಾರಿಯವರು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಯಾವುದೇ ಸಂಘಟನೆಯನ್ನು ಕೋಮುವಾದಿ ಎಂದು ಹಣೆಪಟ್ಟಿ ಕಟ್ಟಲು ಹಕ್ಕುಬಾಧ್ಯತೆಯನ್ನು ಹೊಂದಿಲ್ಲ. ಇಂತಹ ನಡವಳಿಕೆಗಳು ಅಸಂವಿಧಾನಿಕವಾಗಿದ್ದು, ಇದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಗಂಭೀರ ಪ್ರಕರಣವಾಗಿದೆ ಎಂದು ಬರೆದಿದ್ದಾರೆ.ಇನ್ನು ಮುಂದುವರೆದು ಮನವಿ ಮಾಡಿರುವ ನ್ಯಾಯವಾದಿ ಗಿರೀಶ್ ಭಾರದ್ವಾಜ್ ಅವರು ಹೀಗೆ ತಡರಾತ್ರಿ ಪೊಲೀಸರು ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡುವುದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಪೊಲೀಸ್ ವರಿಷ್ಠಾಧಿಕಾರಿಯವರಿಂದ ಇಂತಹ ನಡೆಯ ಬಗ್ಗೆ ತಾವು ಸ್ಪಷ್ಟೀಕರಣವನ್ನು ಲಿಖಿತವಾಗಿ ತೆಗೆದುಕೊಂಡು, ಈ ಬಗ್ಗೆ ವಿಚಾರಣೆ ನಡೆಸಬೇಕು. ಇಲ್ಲಿ ಪೊಲೀಸ್ ಇಲಾಖೆ ತೆಗೆದುಕೊಂಡ ಇಂತಹ ಕ್ರಮಗಳ ಬಗ್ಗೆ ಪೊಲೀಸರನ್ನೇ ಬಾಧ್ಯಸ್ಥರನ್ನಾಗಿಸಬೇಕು. ಪೊಲೀಸರ ಇಂತಹ ಕ್ರಮಗಳು ನಾಗರಿಕರ ಹಕ್ಕು ಮತ್ತು ಗೌರವಕ್ಕೆ ದಕ್ಕೆ ತರುತ್ತಿದ್ದು, ತಕ್ಷಣ ಈ ಬಗ್ಗೆ ತಾವು ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ. ಗಿರೀಶ್ ಭಾರದ್ವಾಜ್ ಅವರು ಈ ಪತ್ರದ ಪ್ರತಿಯನ್ನು ರಾಷ್ಟ್ರೀಯ ಮಾನವ ಹಕ್ಕು ಆಯೋಗ, ರಾಜ್ಯ ಮಾನವಹಕ್ಕು ಆಯೋಗ ಮತ್ತು ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೂ ಕಳುಹಿಸಿಕೊಟ್ಟಿದ್ದಾರೆ.

[t4b-ticker]
error: Content is protected !!