ಬಾಗಲಕೋಟೆಯ ಹೆಬ್ಬಾಳ ಗ್ರಾಮದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಬಗ್ಗೆ ವಿದ್ಯಾರ್ಥಿನಿ ಐಶ್ವರ್ಯ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಶೇ 88 ಅಂಕ ಗಳಿಸಿದರೂ ಹಾಸ್ಟೆಲ್ ಸೀಟು ಸಿಗದ ಕಾರಣ ಸನ್ಮಾನ ಬೇಡವೆಂದು ತಿರಸ್ಕರಿಸಿದ್ದಾಳೆ. ಬಡತನದಲ್ಲಿ ಓದಿದ್ದರೂ ರಾಜಕೀಯ ಕಾರಣಕ್ಕೆ ಸೀಟು ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಅಧಿಕಾರಿಗಳು ರಾಜಕೀಯ ನಾಯಕರ ಕೈಗೊಂಬೆಯಾಗಿದ್ದಾರೆ ಎಂದು ದೂರಿದ್ದಾಳೆ. ಈ ವಿಡಿಯೋ ವೈರಲ್ ಆದ ಬಳಿಕ ಜಿಲ್ಲಾಡಳಿತ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.
ಬಾಗಲಕೋಟೆ: ಪರೀಕ್ಷೆಯಲ್ಲಿ ಶೇ 88 ಅಂಕ ಪಡೆದುಕೊಂಡಿದ್ದರೂ ಹಾಸ್ಟೆಲ್ನಲ್ಲಿ ಸೀಟ್ ಸಿಗಲಿಲ್ಲ. ನನಗೆ ಈ ಸನ್ಮಾನ ಬೇಡ ಎಂದು ವೇದಿಕೆಯಲ್ಲೆ ಸಚಿವ ಆರ್ಬಿ ತಿಮ್ಮಾಪುರ ವಿರುದ್ಧ ಬಾಗಲಕೋಟೆ ವಿದ್ಯಾರ್ಥಿನಿ ಕಿಡಿಕಾರಿದ್ದಾರೆ.
ಈ ಘಟನೆಯು ಸಚಿವರ ಆರ್ಬಿ ತಿಮ್ಮಾಪುರ ಅವರ ಸ್ವಕ್ಷೇತ್ರ ಮುಧೋಳದ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ಸಂಸ್ಥೆಯೊಂದು ಸಾಧಕ ವಿದ್ಯಾರ್ಥಿಗೆ ಸನ್ಮಾನ ಆಯೋಜಿಸಿತ್ತು. ಸನ್ಮಾನ ಸ್ವೀಕರಿಸುವ ಮೊದಲು ತನ್ನ ಸಾಧನೆಯ ಬಗ್ಗೆ ವೇದಿಕೆಯಲ್ಲಿ ಮಾತನಾಡಿದ ವಿದ್ಯಾರ್ಥಿನಿ ಐಶ್ವರ್ಯಾ ಅವರು ಹಾಸ್ಟೆಲ್ ಸೀಟ್ ಬಗ್ಗೆ ನಡೆಯುವ ರಾಜಕೀಯವನ್ನು ಸಭಿಕರ ಮುಂದೆ ವಿವರಿಸಿ ಸಚಿವ ಆರ್ಬಿ ತಿಮ್ಮಾಪುರ ಅವರ ಮೇಲೆ ಆರೋಪ ಮಾಡಿದ್ದಾಲೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೆಟ್ಲೂರ ಗ್ರಾಮದ ಬಡ ಕುಟುಂಬದ ವಿದ್ಯಾರ್ಥಿನಿ ಐಶ್ವರ್ಯ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡಾ 88 ರಷ್ಟು ಅಂಕ ಪಡೆದಿದ್ದಳು. ನಂತರ ಪ್ರಥಮ ಪಿಯು ವಿಜ್ಞಾನ ವಿಭಾಗಕ್ಕೆ ಮುಧೋಳ ತಾಲೂಕಿನ ಯಡಹಳ್ಳಿ ಸರ್ಕಾರಿ ಕಾಲೇಜಿಗೆ ಸೇರಿದ್ದಳು. ಕಾಲೇಜು ಮನೆ ದೂರವಿದ್ದ ಕಾರಣ ಬಿಸಿಎಂ ಹಾಸ್ಟೆಲ್ಗೆ ಅರ್ಜಿ ಹಾಕಿದ್ದಳು. ಆದರೆ, ಅಧಿಕಾರಿಗಳು ಆಕೆಗೆ ಪ್ರವೇಶ ನೀಡಿರಲಿಲ್ಲ. ನಿತ್ಯವು ಬಸ್ನಲ್ಲಿ ಪ್ರಯಾಣ ಮಾಡಿ ಕಾಲೇಜಿಗೆ ತೆರಳುತ್ತಿದ್ದಳು. ಇದರಿಂದ ಬೇಸತ್ತ ವಿದ್ಯಾರ್ಥಿನಿ ವೇದಿಕೆ ಮೇಲೆಯೇ ಬೇಸರ ಹೊರ ಹಾಕಿದ್ದಾಳೆ ಎನ್ನಲಾಗಿದೆ.
ವಿಡಿಯೋ ಈಗ ವೈರಲ್ ಆಗುತ್ತಿದ್ದಂತೆ ವಿದ್ಯಾರ್ಥಿನಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಬಾಗಲಕೋಟೆ ಜಿಲ್ಲಾಡಳಿತ ಮುಂದಾಗಿದೆ ಎನ್ನಲಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ನಾನು ಅತ್ಯಂತ ಬಡಕುಟುಂಬದ ಮಗಳು, ಅಂತಹ ಬಡ ಕುಟುಂಬದಲ್ಲಿ ಓದಿ ಒಳ್ಳೆಯ ಅಂಕ ಪಡೆದಿದ್ದೇನೆ. ಆದರೂ, ನನಗೆ ಹಾಸ್ಟೆಲ್ ಸೀಟ್ ಸಿಗಲಿಲ್ಲ. ಅಧಿಕಾರಿಗಳು ರಾಜಕೀಯ ನಾಯಕರ ಕೈಗೊಂಬೆಯಾಗಿದ್ದಾರೆ. ಹಾಸ್ಟೆಲ್ ಸೀಟ್ ವಿಚಾರವಾಗಿ ಅಧಿಕಾರಿಗಳನ್ನು ಕೇಳಿದರೆ ತಿಮ್ಮಾಪುರ ಸಾಹೇಬ್ರು ಹೇಳಿದರೆ ಮಾತ್ರ ಸೀಟ್ ಕೊಡುತ್ತೇವೆ ಎನ್ನುತ್ತಾರೆ. ತಿಮ್ಮಾಪುರ ಸಾಹೇಬರ ಆಫೀಸಿಗೆ ನಾವು ಹೋದರೆ ನಮ್ಮನ್ನು ಮಾತನಾಡಿಸಲೇ ಇಲ್ಲ. ಶೇಕಡಾ 50 ರಿಂದ 55 ರಷ್ಟು ಅಂಕ ಪಡೆದವರಿಗೆ ಹಾಸ್ಟೆಲ್ ಸಿಕ್ಕಿದೆ. ಆದರೆ, ನಾನು ನನ್ನ ಗೆಳತಿ ಶೇಕಡಾ 90 – 95 ರಷ್ಟು ಅಂಕ ಪಡೆದು ಹಾಸ್ಟೆಲ್ ಸಿಗದೇ ಬಸ್ಸಿನಲ್ಲಿ ಹೋಗುತ್ತಿದ್ದೇವೆ. ಇಂತಹ ಕೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಸಿಕ್ಕ ನಮ್ಮಂತಹ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ನಮ್ಮ ಎಲ್ಲಾ ಕನಸು ಕನಸಾಗಿಯೇ ಉಳಿಯುತ್ತಿದೆ. ನಮಗೆ ಸನ್ಮಾನವೆಲ್ಲಾ ಬೇಡ. ಹಾಸ್ಟೆಲ್ ಸೇರಿ ಅಗತ್ಯ ಸವಲತ್ತು ಕೊಡಿ ಸಾಕು ಎಂದು ಹೇಳಿದ್ದಾರೆ.











































