ಬೆಂಗಳೂರು: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರಮುಗಿದು ಮೂರು ದಿನಗಳೇ ಕಳೆದಿವೆ. ಆದರೆ ಖಾತೆಗಳ ಹಂಚಿಕೆಯಾಗಿಲ್ಲ. ಪೇಮೆಂಟ್ ಆಗಿಲ್ಲವೆಂದು ತಡೆ ಹಿಡಿದಿದ್ದೀರೋ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಶೋಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ‘ಡಮ್ಮಿ ಸಿಎಂ’,’ ರಬ್ಬರ್ ಸ್ಟ್ಯಾಂಪ್’ ಸಿಎಂ ಎಂದು ಲೇವಡಿ ಮಾಡಿದ್ದಾರೆ.’ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಮುಗಿದು ಮೂರು ದಿನಗಳೇ ಕಳೆದಿವೆ. ಆದರೆ ‘ಖಾತೆ’ಗಳ ಸುಳಿವೇ ಇಲ್ಲ! ಪೇಮೆಂಟ್ ಕೋಟಾ ಸಚಿವರಿಗೆ ಖಾತೆ ಹಂಚಲು ಹೈಕಮಾಂಡ್ ಅನುಮತಿಗಾಗಿ ಕಾಯುತ್ತಿದ್ದೀರೋ ಅಥವಾ ನಿಗದಿಯಾದ ಪೇಮೆಂಟ್ ಇನ್ನೂ ‘ಖಾತೆ’ಗೆ ಜಮಾ ಆಗಿಲ್ಲವೆಂದು ತಡೆ ಹಿಡಿದಿದ್ದೀರೋ?’ ಎಂದು ಕೇಳಿದ್ದಾರೆ.’ಇತ್ತ ದೆಹಲಿಯ ‘ಕಲೆಕ್ಷನ್ ಏಜೆಂಟ್’ ರಣದೀಪ್ ಸುರ್ಜೇವಾಲಾ ಸಾಹೇಬರು, ಅಸಮಾಧಾನಗೊಂಡ ಶಾಸಕರ ಮನೆ ಮನೆಗೆ ತೆರಳಿ ತೇಪೆ ಹಚ್ಚುವುದರಲ್ಲಿ ಹಾಗೂ ಕುಸಿಯುತ್ತಿರುವ ಸರ್ಕಾರಕ್ಕೆ ‘ಪ್ಯಾಚ್ ವರ್ಕ್’ ಹಾಕುವುದರಲ್ಲೇ ಬ್ಯುಸಿ!’ ಎಂದಿದ್ದಾರೆ.
“ಅಂದಹಾಗೆ, ಇನ್ನುಮುಂದೆ ಪ್ರತಿಯೊಂದು ಕಡತಕ್ಕೂ ಸಹಿ ಹಾಕಲು ಸುರ್ಜೇವಾಲಾ ಅವರೇ ಬೆಂಗಳೂರಿಗೆ ಬರಬೇಕಾ? ವಿಧಾನಸೌಧದಲ್ಲಿ ಅವರಿಗೆ ಒಂದು ಕೊಠಡಿ ಮೀಸಲಿಟ್ಟಿದ್ದೀರಾ? ಅಥವಾ ಎಲ್ಲಾ ಫೈಲ್ಗಳನ್ನು ದೆಹಲಿಗೆ ಸ್ಪೀಡ್ ಪೋಸ್ಟ್ನಲ್ಲಿ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದೀರಾ ‘ರಬ್ಬರ್ ಸ್ಟ್ಯಾಂಪ್’ ಮುಖ್ಯಮಂತ್ರಿಗಳೇ?’ ಎಂದು ವಾಗ್ದಾಳಿ ನಡೆಸಿದ್ದಾರೆ.’ರಾಜ್ಯದಲ್ಲಿ ನಿಜವಾದ ಸರ್ಕಾರ ನಡೀತಾ ಇದೆಯೋ ಅಥವಾ ದೆಹಲಿಯ ಹೈಕಮಾಂಡ್ನ ‘ರಿಮೋಟ್ ಕಂಟ್ರೋಲ್’ ಹೈಜಾಕ್ ನಾಟಕ ನಡೀತಾ ಇದೆಯೋ ಜನತೆಗಂತೂ ಸ್ಪಷ್ಟವಾಗಿ ಅರ್ಥವಾಗುತ್ತಿದೆ!’ ಎಂದು ಟೀಕಿಸಿದ್ದಾರೆ.
ಆಡಿಯೊ ವೈರಲ್: ನಿಷ್ಕ್ರಿಯ ತನಿಖೆಗೆ ಆಗ್ರಹ
ಮಗದೊಂದು ಪೋಸ್ಟ್ನಲ್ಲಿ ‘ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆ ‘ಪೇಮೆಂಟ್ ಕೋಟಾ ವಿಸ್ತರಣೆ’ ಎಂದು ನಾನು ಮಾಡಿದ್ದ ಆರೋಪ ಈಗ ಅಕ್ಷರಶಃ ಸತ್ಯ ಎಂದು ಸಾಬೀತಾಗಿದೆ! ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಅವರ ವೈರಲ್ ಆಡಿಯೋ ಸಂಭಾಷಣೆಯೇ ಈ ಭ್ರಷ್ಟಾಚಾರಕ್ಕೆ ಜೀವಂತ ಸಾಕ್ಷಿ’ ಎಂದಿದ್ದಾರೆ.“ಆ ಧ್ವನಿ ನನ್ನದಲ್ಲ, ಆಡಿಯೋದಲ್ಲಿ ಮಾತಾಡಿರೋದು ನಾನಲ್ಲ’ ಎಂಬ ಎಂದಿನ ಸವಕಲು ಸಮಜಾಯಿಷಿಗಳನ್ನು ಕೇಳಿ ಕೇಳಿ ಕನ್ನಡಿಗರು ರೋಸಿ ಹೋಗಿದ್ದಾರೆ. ಈ ಕೂಡಲೇ ಈ ಆಡಿಯೋವನ್ನು ವೈಜ್ಞಾನಿಕ ಫೋರೆನ್ಸಿಕ್ ತನಿಖೆಗೆ ಒಳಪಡಿಸಿ, ಸತ್ಯಾಸತ್ಯತೆಯನ್ನು ನಾಡಿನ ಜನರ ಮುಂದಿಡಬೇಕು’ ಎಂದು ಆಗ್ರಹಿಸಿದ್ದಾರೆ.“ಆಡಿಯೋದಲ್ಲಿರುವುದು ತಿಮ್ಮಾಪುರ ಅವರ ಧ್ವನಿಯೇ ಅಲ್ಲ ಎನ್ನುವುದಾದರೆ, ಪ್ರಕರಣವನ್ನು ಫೋರೆನ್ಸಿಕ್ ತನಿಖೆಗೆ ಒಪ್ಪಿಸಲು ಭಯವೇಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ?’ ಎಂದು ಕೇಳಿದ್ದಾರೆ.









































