ಬೆಂಗಳೂರು: ಕರ್ನಾಟಕ ಸರ್ಕಾರ ನಡೆಸುತ್ತಿರುವ ಜಾತಿಗಳ ಸಾಮಾಜಿಕ ಆರ್ಥಿಕ ಸಮೀಕ್ಷೆಗೆ (ಜಾತಿ ಗಣತಿ) ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಜತೆಗೆ ಹಲವು ಷರತ್ತುಗಳನ್ನು ವಿಧಿಸಿ ಮಧ್ಯಂತರ ಆದೇಶ ನೀಡಿದೆ.ರಾಜ್ಯದಲ್ಲಿ ನಡೆಸುತ್ತಿರುವ ಜಾತಿ ಗಣತಿಗೆ (ಸಮೀಕ್ಷೆಗೆ) ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸೇರಿದಂತೆ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಕಳೆದ 3 ದಿನಗಳಿಂದ ನಡೆಸುತ್ತಿತ್ತು. ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠವು ಗುರುವಾರ ಮಧ್ಯಂತರ ಆದೇಶ ನೀಡಿದೆ.
ಹೈಕೋರ್ಟ್ ವಿಧಿಸಿದ ಷರತ್ತುಗಳೇನು?
1. ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತ.
2. ಜನರು ಮಾಹಿತಿ ನೀಡಬೇಕು ಎಂದು ಸಮೀಕ್ಷೆ ನಡೆಸುವವರು ಒತ್ತಾಯ ಮಾಡುವಂತಿಲ್ಲ.
3. ಸಂಗ್ರಹಿಸಿದ ದತ್ತಾಂಶವನ್ನು ಹಿಂದುಳಿದ ವರ್ಗಕ್ಕೆ ಆಯೋಗಕ್ಕೆ ಹೊರತುಪಡಿಸಿ ಯಾರಿಗೂ ದೊರೆಯದಂತೆ ಗೌಪ್ಯವಾಗಿ ಸಂಗ್ರಹಿಸಿಡಬೇಕು.
4. ಈ ಷರತ್ತುಗಳಿಗೆ ಬದ್ದ ಎಂದು ಹಿಂದುಳಿದ ಆಯೋಗವು ಅಫಿಡವಿಟ್ ಸಲ್ಲಿಸಬೇಕು.
5. ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ/ಸ್ವಯಂಪ್ರೇರಿತ ಎಂಬುದರ ಸಂಬಂಧ ಸರ್ಕಾರವು ಸಾರ್ವಜನಿಕವಾಗಿ ಪ್ರಕಟಣೆ ನೀಡಬೇಕು.
ಗುರುವಾರ ವಿಚಾರಣೆ ಏನಾಯ್ತು?
ಸರ್ಕಾರದ ಪರವಾಗಿ ವಾದ ಮಂಡಿಸಿದ ಪ್ರೊ ರವಿಕುಮಾರ್, ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಎಂದು ದತ್ತಾಂಶ ಸಂಗ್ರಹಿಸಿರುವವರಿಗೆ ಮಾಹಿತಿ ನೀಡಲಾಗಿದೆಯೇ ಎಂದು ನ್ಯಾಯಾಲಯ ಕೇಳಿತ್ತು. ಈ ಸಂಬಂಧ ದಾಖಲೆಯನ್ನು ಪೀಠಕ್ಕೆ ಸಲ್ಲಿಸಲಾಗುತ್ತಿದೆ. ಸಮೀಕ್ಷೆ ಮಾಡುವವರಿಗೆ ಮಾಹಿತಿ ನೀಡಲಾಗಿದೆ. ಲಿಂಗಾಯತ ಸಮುದಾಯವು ಹೊಸ ಸಮೀಕ್ಷೆ ನಡೆಸಬೇಕು ಎಂದು ಕೋರಿದ್ದರು. ಒಕ್ಕಲಿಗರ ಸಂಘವು ಹಿಂದಿನ ಸಮೀಕ್ಷೆಯನ್ನು ತಿರಸ್ಕರಿಸಬೇಕು ಎಂದು ಸರ್ಕಾರಕ್ಕೆ ಮನವಿ ನೀಡಿತ್ತು ಎಂದು ಕೋರ್ಟ್ನ ಗಮನಕ್ಕೆ ತಂದು ಅಗತ್ಯ ದಾಖಲೆಗಳನ್ನು ಸಲ್ಲಿಸಿದರು.ದತ್ತಾಂಶವನ್ನು ಹೇಗೆ ರಕ್ಷಿಸುತ್ತೀರಿ? ಎಂದು ಹೈಕೋರ್ಟ್ ಸರ್ಕಾರಕ್ಕೆ ಪ್ರಶ್ನೆ ಮಾಡಿತು. ಇದಕ್ಕೆ ಇ-ಆಡಳಿತ ಇಲಾಖೆಯು ಅದನ್ನು ರಕ್ಷಿಸಲಿದೆ. ಅದಕ್ಕೆ ಪೂರಕವಾಗಿ ನಾಳೆ ಅಫಿಡವಿಟ್ ಸಲ್ಲಿಸಲಾಗುವುದು ಎಂದು ಸರ್ಕಾರಿ ವಕೀಲರು ತಿಳಿಸಿದರು.
ಜಾತಿ ಗಣತಿಗೆ ತಡೆ ಕೋರಿದ್ದ ಅರ್ಜಿದಾರರ ಪರ ವಕೀಲರ ವಾದ ಏನಾಗಿತ್ತು?
1. ಸಮೀಕ್ಷೆಯಲ್ಲಿ ಭಾಗವಹಿಸುವ ನೀವು ಆಧಾರ್ ಮಾಹಿತಿ ನೀಡಬೇಕು.
2. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಪರ್ಯಾಯವಾಗಿ ಗಣತಿ ಮಾಡಲಾಗದು. ಸಮೀಕ್ಷೆಯ ಹೆಸರಿನಲ್ಲಿ ಪ್ರಾಯೋಗಿಕವಾಗಿ ಗಣತಿ ಮಾಡಲಾಗುತ್ತಿದೆ.
3. ಆಧಾರ್ ಮಾಹಿತಿಯನ್ನು ರಕ್ಷಿಸಲು ಕಾನೂನು ಜಾರಿಗೊಳಿಸಲಾಗಿದೆ. ಜನರು ನೀಡಲಾಗುವ ಮಾಹಿತಿಯನ್ನು ಸಂಗ್ರಹಿಸಿಡಲು ವ್ಯವಸ್ಥೆ ಎಲ್ಲಿದೆ? ಮಾಹಿತಿ ಯಾರ ಕಸ್ಟಡಿಯಲ್ಲಿರಲಿದೆ?
4. ಸಂಗ್ರಹಿಸುವ ದತ್ತಾಂಶವನ್ನು ಯಾವುದಕ್ಕಾದರೂ ಬಳಕೆ ಮಾಡಬಹುದಾದ ಕಾಲದಲ್ಲಿ ನಾವಿದ್ದೇವೆ. ಇದು ಅತ್ಯಂತ ಅಪಾಯಕಾರಿ.
5. ಆಧಾರ್ ದಾಖಲೆಯನ್ನು ಎಲ್ಲಿ ಸಂಗ್ರಹಿಸಲಾಗುತ್ತದೆ? ದಾಖಲೆ ಸಂಗ್ರಹಿಸಿರುವುದನ್ನು ಬಿಡುಗಡೆ ಮಾಡದಂತೆ ಆದೇಶಿಸಬೇಕು.
6. ಸಮೀಕ್ಷೆಯಲ್ಲಿ ಭಾಗವಹಿಸುವ ಜನರು ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಕಡ್ಡಾಯಗೊಳಿಸಲಾಗಿದೆ.
7. ಆಯೋಗ ನಡೆಸುತ್ತಿರುವ ಸಮೀಕ್ಷೆಯು ಬೋಗಸ್ ಆಗಿದ್ದು, ಅನುಮತಿಸಬಾರದು.
8. ಅರ್ಜಿದಾರರ ಪರ ಹಿರಿಯ ವಕೀಲರಾದ ಪ್ರಭುಲಿಂಗ ನಾವದಗಿ, ಅಶೋಕ್ ಹಾರನಹಳ್ಳಿ ಸೇರಿ ಹಲವರು ವಾದ ಮಂಡಿಸಿದರು.











































