ಪುತ್ತೂರು: ಕಡಬ ತಾಲೂಕಿನ ಆಲಂಕಾರು ಗ್ರಾಮದ ನಾಡ್ತಿಲಬೇಲಿಕಲ್ಲು ಎಂಬಲ್ಲಿ ಕುಮಾರಧಾರ ನದಿಯಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ದಾಸ್ತಾನು ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಡಬ ಪೊಲೀಸರು ದಾಳಿ ನಡೆಸಿ ಮರಳು ಸಂಗ್ರಹಣೆಗೆ ಬಳಕೆ ಮಾಡುತ್ತಿದ್ದ ಸೊತ್ತು ವಶಪಡಿಸಿಕೊಂಡ ಘಟನೆ ಫೆ.18ರಂದು ಮಧ್ಯಾಹ್ನ ನಡೆದಿದೆ. ದಾಳಿಯ ವೇಳೆ ಆರೋಪಿಗಳು ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಾಡ್ತಿಲ ಬೇಲಿಕಲ್ಲು ಎಂಬಲ್ಲಿ ಕುಮಾರಧಾರ ನದಿಯಿಂದ ಹಳೆನೇರೆಂಕಿ ನಿವಾಸಿ ಮನೋಹರ್ ಭಟ್ ಎಂಬವರು ಮರಳು ಸಂಗ್ರಹಿಸಿ ದಾಸ್ತಾನು ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಡಬ ಠಾಣೆಯ ಪೊಲೀಸ್ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ಅವರು ಸಿಬ್ಬಂದಿ ಜೊತೆಗೆ ಸ್ಥಳಕ್ಕೆ ಹೋದಾಗ ಆರೋಪಿಗಳು ಸೊತ್ತುಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ನದಿಯ ದಡದಲ್ಲಿ ರಾಶಿ ಹಾಕಲಾಗಿದ್ದ ಅಂದಾಜು 5 ಸಾವಿರ ರೂ.ಮೌಲ್ಯದ ಹಸಿ ಮರಳು, ಎರಡು ಮರದ ಹಲಗೆಗಳು, ಆರೆಂಜ್ ಬಣ್ಣದ 1 ಪ್ಲಾಸ್ಟಿಕ್ ಬುಟ್ಟಿ, 1 ಸಾವಿರ ರೂ.ಮೌಲ್ಯದ ಕಬ್ಬಿಣದ ಮೆಟ್ಟಿಲು, 500 ರೂ.ಮೌಲ್ಯದ ಕಬ್ಬಿಣದ 1 ಲಂಗರು, 1 ಹಗ್ಗ ಹಾಗೂ ಅಲ್ಲಿಯೇ ಇನ್ನೊಂದು ಕಡೆ ರಾಶಿ ಹಾಕಲಾಗಿದ್ದ 5 ಸಾವಿರ ರೂ.ಮೌಲ್ಯದ ಹಸಿ ಮರಳು, ಆರೆಂಜ್ ಬಣ್ಣದ 3 ಪ್ಲಾಸ್ಟಿಕ್ ಬುಟ್ಟಿಗಳು, ಮರದ ಹಿಡಿಕೆ ಇರುವ 1 ಸಲಕೆ, 2 ಮರದ ಹಲಗೆಗಳು, 1 ಸಾವಿರ ರೂ. ಮೌಲ್ಯದ 1 ಕಬ್ಬಿಣದ ಮೆಟ್ಟಿಲು, 10 ಸಾವಿರ ರೂ. ಮೌಲ್ಯದ 1 ಕಬ್ಬಿಣದ ಬೋಟ್, ಕಬ್ಬಿಣದ ಬೋಟ್ ದಡಕ್ಕೆ ಕಟ್ಟಲು ಬಳಸಿದ 1 ಹಗ್ಗ, ಕಬ್ಬಿಣದ ಬೋಟ್ನಲ್ಲಿ ಅಂದಾಜು 5 ಸಾವಿರ ರೂ.ಮೌಲ್ಯದ ಮರಳು, ಬೋಟ್ನಲ್ಲಿದ್ದ 6 ಕಬ್ಬಿಣದ ಬಕೆಟ್, ಬೋಟ್ನಲ್ಲಿದ್ದ ಮರದ ಹಿಡಿಕೆ ಇರುವ 3 ಸಲಕೆಗಳು, ಬೋಟ್ ನಡೆಸಲು ಬಳಸುವ ಒಂದು ಕಬ್ಬಿಣದ ಮತ್ತು ಎರಡು ಬಿದಿರಿನ ಉದ್ದದ ಸಲಕರಣೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













































