ನವದೆಹಲಿ: ಉತ್ತರಾಖಂಡದ ಹಲ್ಲವಾನಿಯ ರಾಮಲೀಲಾ ಮೈದಾನದಲ್ಲಿ ತಾವು ಭಾಷಣ ಮಾಡಿದ ನಂತರ, ವೇದಿಕೆಯನ್ನು ಶುದ್ದೀಕರಿಸಲಾಗಿದೆ ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಗುರುವಾರ ಆರೋಪಿಸಿದರು.
ಮುಂಗಾರು ಅಧಿವೇಶನದ ಕೊನೇ ದಿನದಂದು ವಿಷಯ ಪ್ರಸ್ತಾಪಿಸಿದ ಖರ್ಗೆ, ಯಾವುದೇ ಧರ್ಮ ಅಥವಾ ಸಮಾಜದ ಹೆಸರು ಉಲ್ಲೇಖಿಸದೆ, ಬಿಜೆಪಿಗೆ ಸಂಬಂಧಿಸಿದ ಜನರು ವೇದಿಕೆ ಶುದ್ದೀಕರಿಸಿದ್ದಾರೆ ಎಂದು ದೂರಿದರು.’ಹಲ್ವಾನಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದೆ. ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತ್ರವೇ ಅಲ್ಲಿ ಮಾತನಾಡಿದ್ದೆ. ನನ್ನ ಭಾಷಣೆ ಮುಗಿದ ನಂತರ, ಬಿಜೆಪಿಗೆ ಸಂಬಂಧಿಸಿದ ಕೆಲವರು ಹೋಮ-ಹವನ ಮಾಡಿ ವೇದಿಕೆಯನ್ನು ಶುದ್ದೀಕರಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.’ಪ್ರಜಾಪ್ರಭುತ್ವ ವ್ಯವಸ್ಥೆ ಕಾರ್ಯನಿರ್ವಹಿಸುವುದು ಹೀಗೆಯೇ? ಹೀಗಿದ್ದಾಗ, ಸಂವಿಧಾನವನ್ನು ಹೇಗೆ ರಕ್ಷಿಸುತ್ತೀರಿ’ ಎಂದು ಪ್ರಶ್ನಿಸಿದರು.
ಈ ವಿಚಾರವನ್ನು ರಾಜಕೀಯಗೊಳಿಸುವ ಉದ್ದೇಶ ತಮಗಿಲ್ಲ ಎಂದು ಸ್ಪಷ್ಟಪಡಿಸಿದ ಖರ್ಗೆ, ಆದಾಗ್ಯೂ, ಇಂತಹ ಕೆಲಸದ ಮೂಲಕ ತಮ್ಮನ್ನು ಅವಮಾನಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಎಐಸಿಸಿ ಅಧ್ಯಕ್ಷರೂ ಆಗಿರುವ ಖರ್ಗೆ, ವೇದಿಕೆ ಶುದ್ದೀಕರಿಸಿದವರ ವಿರುದ್ಧ ಅಸ್ಪೃಶ್ಯತಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ, ಜೈಲಿಗೆ ಅಟ್ಟಬೇಕು ಎಂದು ಒತ್ತಾಯಿಸಿದರು.ಖರ್ಗೆ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸುವಂತೆ ಸಭಾಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರು ಸದನದ ನಾಯಕ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ಕೋರಿದರು.’ಶುದ್ದೀಕರಣ ಕೃತ್ಯವು ಕಾಂಗ್ರೆಸ್ ನಾಯಕರಿಗೆ ಮಾತ್ರವಲ್ಲ, ನಮ್ಮೆಲ್ಲರಿಗೂ ಬಹಳ ನೋವು ತಂದಿದೆ. ಇಂತಹ ಚಟುವಟಿಕೆಗಳನ್ನು ಬಿಜೆಪಿ ಬೆಂಬಲಿಸುವುದಿಲ್ಲ. ಈ ಕೃತ್ಯವನ್ನು ಖಂಡಿಸುತ್ತೇನೆ ಮತ್ತು ಇದರ ಬಗ್ಗೆ ತನಿಖೆ ನಡೆಸುತ್ತೇವೆ’ ಎಂದರು.ಸದನದಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಅದಕ್ಕೆ ಬೆಂಬಲ ವ್ಯಕ್ತಪಡಿಸಿದರು.ರಾಧಾಕೃಷ್ಣನ್ ಅವರೂ, ಘಟನೆಯನ್ನು ಖಂಡಿಸಿದರು. ಹಾಗೆಯೇ, ತನಿಖೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಿದರು.







































