ನವದೆಹಲಿ: ಜೆನ್-ಝೀ ಹಾಗೂ ಇನ್ನಿತರ ಸಮಕಾಲೀನವಿಷಯಗಳ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) 32 ಪರಿವಾರ ಸಂಘಟನೆಗಳು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮುಂದಿನ ವಾರ ನಡೆಯಲಿರುವ ವಾರ್ಷಿಕ ಸಮನ್ವಯ ಸಭೆಯಲ್ಲಿ ಚರ್ಚಿಸಲಿವೆ. ಬಿಜೆಪಿಯೂ ಭಾಗಿಯಾಗಲಿದೆ.
ವಿಶಾಖಪಟ್ಟಣದ ಗುಡಿಲೊವಾದಲ್ಲಿ ಆಗಸ್ಟ್ 19ರಿಂದ ಮೂರು ದಿನಗಳ ಸಭೆ ನಡೆಯಲಿದೆ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ನೇತೃತ್ವದಲ್ಲಿ ಸಭೆ ನಡೆಯಲಿದೆ.’ಸಭೆಯಲ್ಲಿ ಎಲ್ಲಾ 32 ಪರಿವಾರ ಸಂಘಟನೆಗಳು ತಮ್ಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಿವೆ. ಅಲ್ಲದೆ ಪ್ರಮುಖ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನೂ ತಿಳಿಸಲಿವೆ’ ಎಂದು ಆರ್ಎಸ್ಎಸ್ನ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಸುನಿಲ್ ಅಂಬೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಸ್ಪರ ಸಮನ್ವಯ ಹಾಗೂ ಸಹಕಾರ, ಸಾಮಾಜಿಕ ಕಲ್ಯಾಣ ಹಾಗೂ ನೀತಿ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಜನಸಂಖ್ಯೆ ಅಸಮತೋಲನ, ನಶೆ ಮುಕ್ತಿ, ಯುವಕರಲ್ಲಿ ಜಾಗೃತಿ, ‘ಪಂಚ ಪರಿವರ್ತನೆ’ ಜಾರಿ ಸೇರಿ ಹಲವು ವಿಷಯಗಳು ಚರ್ಚೆಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.ಜೆನ್-ಝೀಗಳಿಗೆ ಸಂಬಂಧಿತ ವಿಷಯಗಳ ಬಗ್ಗೆಯೂ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.ಅಧ್ಯಕ್ಷರು, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು ಸೇರಿ 32 ಪರಿವಾರ ಸಂಘಟನೆಯ ಉನ್ನತ ಮಟ್ಟದ ನಾಯಕರು ಆ ಸಭೆಯಲ್ಲಿ ಭಾಗಿಯಾಗಲಿದ್ದಾರೆ.








































