ನವದೆಹಲಿ: ‘ಬಿಜೆಪಿ ಸಂಸದೆ ಸುಶ್ಮಿತಾ ದೇವ್ ಅವರು, ಸಿಪಿಎಂ ಸಂಸದ ಜಾನ್ ಬ್ರಿಟಾಸ್ ಅವರನ್ನು ‘ಲುಂಗಿವಾಲಾ’ ಎಂದು ಕರೆದಿದ್ದಾರೆ ಎಂದು ಆರೋಪಿಸಿ, ಸಿಪಿಎಂ ಸದಸ್ಯರು ಬುಧವಾರ ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದರು.
‘ಸೋಮವಾರ ಸದನದಲ್ಲಿ ಮಾತನಾಡುತ್ತಿದ್ದಾಗ, ನನ್ನ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಬಿಜೆಪಿ ಸಂಸದೆ ನನ್ನನ್ನು ‘ಲುಂಗಿವಾಲಾ’ ಎಂದು ಕೂಗಿದ್ದಾರೆ’ ಎಂದು ಬ್ರಿಟಾಸ್, ಸುಶ್ಮಿತಾ ವಿರುದ್ಧದ ಹಕ್ಕುಚ್ಯುತಿ ಉಲ್ಲಂಘನೆ ನೋಟಿಸ್ನಲ್ಲಿ ಆರೋಪಿಸಿದ್ದಾರೆ.ತಾವು ಯಾವುದೇ ರಾಜ್ಯದ ಉಡುಪು, ಸಂಸ್ಕೃತಿಯನ್ನು ಟೀಕಿಸಿಲ್ಲ ಎಂದು ಸುಶ್ಮಿತಾ ದೇವ್ ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ.ಸಭಾಪತಿ ಸಿ.ಪಿ.ರಾಧಾಕೃಷ್ಣನ್ ಅವರು ಕಲಾಪವನ್ನು 2 ಗಂಟೆಯವರೆಗೆ ಮುಂದೂಡಿದರು. ಸದನ ಪುನರಾರಂಭವಾದ ಬಳಿಕ ಸುಶ್ಮಿತಾ ದೇವ್ ತಮ್ಮ ನಿಲುವನ್ನು ದಾಖಲಿಸಿದರು.
ಇಬ್ಬರೂ ಸಂಸದರು ತಮ್ಮ ಕೊಠಡಿಯಲ್ಲಿ ಪರಸ್ಪರ ಭೇಟಿಯಾಗಿ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳುವಂತೆ ರಾಜ್ಯಸಭೆಯ ಆಡಳಿತ ಪಕ್ಷದ ನಾಯಕ ಜೆ.ಪಿ.ನಡ್ಡಾ ಅವರು ಸಲಹೆ ನೀಡಿದರು.ಕಲಾಪ ಮುಂದೂಡಿದ ನಂತರ ವಿರೋಧ ಪಕ್ಷದ ಸಂಸದರು ಸಂಸತ್ ಭವನದ ಮಕರ ದ್ವಾರದಲ್ಲಿ ಪ್ರತಿಭಟನೆ ನಡೆಸಿದರು. ಹಲವು ಪುರುಷ ಸಂಸದರು ಪ್ರತಿಭಟನೆಯ ಸಂಕೇತವಾಗಿ ಕೇರಳ ಶೈಲಿಯ ‘ಮುಂಡು’ ಧರಿಸಿ ‘ವಿವಿಧತೆಯಲ್ಲಿ ಏಕತೆ’, ‘ನಮ್ಮ ಉಡುಪು ನಮ್ಮ ಹೆಮ್ಮೆ’ ಎಂದು ಘೋಷಣೆಗಳನ್ನು ಕೂಗಿದರು.








































