ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ: ಬಿ.ದಯಾನಂದ್‌ ಸೇರಿ ಮೂವರು ದೋಷಮುಕ್ತ

Picture of Savistara

Savistara

Bureau Report

ಬೆಂಗಳೂರು: ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದಿದ್ದ ಸಂಭ್ರಮಾಚರಣೆ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 2025ರ ಜೂನ್‌ನಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರಂತದ ಬಳಿಕ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿಗಳಾದ ಬಿ.ದಯಾನಂದ್‌, ವಿಕಾಸ್ ಕುಮಾರ್ ವಿಕಾಸ್, ಶೇಖರ್ ಎಚ್‌. ತೆಕ್ಕಣ್ಣನವ‌ರ್ ವಿರುದ್ಧ ನಡೆದಿದ್ದ ವಿಭಾಗೀಯ ವಿಚಾರಣೆ ಪ್ರಕ್ರಿಯೆಯನ್ನು ಅಧಿಕೃತವಾಗಿ ರಾಜ್ಯ ಸರ್ಕಾರವು ಮುಕ್ತಾಯಗೊಳಿಸಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಮಂಗಳವಾರ ಹೊರಡಿಸಿದ ಮೂರು ಪ್ರತ್ಯೇಕ ಆದೇಶಗಳಲ್ಲಿ, ಸಕ್ಷಮ ಪ್ರಾಧಿಕಾರವು ಮೂವರು ಅಧಿಕಾರಿಗಳ ರಕ್ಷಣಾ ಹೇಳಿಕೆಗಳು ಮತ್ತು ಇಲಾಖಾ ಅಭಿಪ್ರಾಯಗಳನ್ನು ಪರಿಶೀಲಿಸಿದ ನಂತರ ಮೂವರನ್ನು ದೋಷ ಮುಕ್ತಗೊಳಿಸಲಾಗಿದೆ.ಬಿ.ದಯಾನಂದ್‌ ಅವರು ತರಬೇತಿ ವಿಭಾಗದ ಎಡಿಜಿಪಿಯಾಗಿ, ವಿಕಾಸ್ ಕುಮಾರ್ ವಿಕಾಸ್ ಆಂತರಿಕ ಭದ್ರತಾ ವಿಭಾಗದ (ತನಿಖೆ ಮತ್ತು ಪ್ರತಿ ಗುಪ್ತಚರ) ಮುಖ್ಯಸ್ಥರಾಗಿ, ಶೇಖ‌ರ್ ಎಚ್. ತೆಕ್ಕಣ್ಣವರ್ ಅವರು ದಾವಣಗೆರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೂವರನ್ನೂ ಆರೋಪಗಳಿಂದ ಮುಕ್ತಗೊಳಿಸಲಾಗಿದೆ. ದುರಂತ ಸಂಭವಿಸಿದ ವೇಳೆ ದಯಾನಂದ್ ಅವರು ನಗರ ಪೊಲೀಸ್ ಕಮಿಷನ‌ರ್ ಆಗಿದ್ದರು.ಆರ್‌ಸಿಬಿ ತಂಡವು ಐಪಿಎಲ್ ಟ್ರೋಫಿ ಗೆದ್ದಿದ್ದ ಹಿನ್ನೆಲೆಯಲ್ಲಿ ವಿಧಾನಸೌಧ ಎದುರು ಹಾಗೂ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಬಳಿಕ, ಘಟನೆಯ ಸಂಬಂಧ ಮೂವರು ಐಪಿಎಸ್‌ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಅಲ್ಲದೇ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗಿತ್ತು.

[t4b-ticker]
error: Content is protected !!