ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ 12 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದ ಅವರು, ಅರಣ್ಯ, ಕಂದಾಯ, ಸರ್ವೆ, ತೋಟಗಾರಿಕೆ ಹಾಗೂ ಹೆದ್ದಾರಿ ಇಲಾಖೆಗಳ ನಡುವೆ ನಿರೀಕ್ಷಿತ ಮಟ್ಟದಲ್ಲಿ ಸಮನ್ವಯತೆ ಇಲ್ಲದೆ ಕಾಮಗಾರಿಗಳು ವಿಳಂಬವಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಭೂಸ್ವಾಧೀನ, ಪರಿಹಾರ ಪಾವತಿ, ಜಂಟಿ ಸರ್ವೆ ವರದಿ, ಅರಣ್ಯ ಭೂಮಿ ವರ್ಗಾವಣೆ ಹಾಗೂ ಮರಗಳ ತೆರವು ಪ್ರಕ್ರಿಯೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ಕಾಮಗಾರಿಗೆ ವೇಗ ನೀಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಎನ್ಹೆಚ್-206ರ ತುಮಕೂರು–ಶಿವಮೊಗ್ಗ ನಾಲ್ಕು ಪಥದ ರಸ್ತೆ, ಎನ್ಹೆಚ್-169ರ ಶಿವಮೊಗ್ಗ–ಮಂಗಳೂರು ರಸ್ತೆ, ಎನ್ಹೆಚ್-766ಸಿ ಶಿಕಾರಿಪುರ ಬೈಪಾಸ್ ಹಾಗೂ ಬೈಂದೂರು-ನಿಟ್ಟೂರು ಭಾಗದ ದ್ವಿಪಥ ರಸ್ತೆ ಕಾಮಗಾರಿಗಳಿಗೆ ಬಾಕಿ ಇರುವ ಭೂಸ್ವಾಧೀನ ಹಾಗೂ ಸರ್ವೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ಸೂಚಿಸಲಾಯಿತು. ಜೊತೆಗೆ ಮೇಗರವಳ್ಳಿ–ಆಗುಂಬೆ ಭಾಗ, ನೆಲ್ಯಾಡಿ–ತೀರ್ಥಹಳ್ಳಿ ಹಾಗೂ ಶಿವಮೊಗ್ಗ–ಆನಂದಪುರ ರಸ್ತೆ ಕಾಮಗಾರಿಗಳಿಗೆ ಅರಣ್ಯ ಇಲಾಖೆಯಿಂದ ದೊರೆತಿರುವ Stage-1 ಅನುಮೋದನೆಯ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಲು ನಿರ್ದೇಶಿಸಲಾಯಿತು. ಇದಲ್ಲದೆ ಹೊಸೂರು ಹಾಗೂ ತಾಳಗುಪ್ಪ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳಿಗೆ ಅಗತ್ಯವಿರುವ ಸ್ಥಳ ಹಸ್ತಾಂತರ ಪ್ರಕ್ರಿಯೆಗಳನ್ನು ವಿಳಂಬವಿಲ್ಲದೆ ಮುಗಿಸಬೇಕು ಎಂದು ಸಂಸದರು ಎಚ್ಚರಿಸಿದ್ದಾರೆ.
















































