ಸುಳ್ಯ ತಾಲೂಕು ಭೂ ಅಭಿವೃದ್ಧಿ ಬ್ಯಾಂಕಿನ ವಾರ್ಷಿಕ ಮಹಾಸಭೆಯು ಬ್ಯಾಂಕ್ ಅಧ್ಯಕ್ಷ ಜಯರಾಮ ರೈ ಅವರ ಅಧ್ಯಕ್ಷತೆಯಲ್ಲಿ ಸುಳ್ಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಪ್ರಸಕ್ತ 2025-26ನೇ ಸಾಲಿನಲ್ಲಿ ಬ್ಯಾಂಕ್ ಒಟ್ಟು ₹50.89 ಲಕ್ಷ ಲಾಭ ಗಳಿಸಿದ್ದು, ಹಿಂದಿನ ನಷ್ಟಗಳನ್ನು ಸರಿದೂಗಿಸಿದ ನಂತರ ಬ್ಯಾಂಕ್ ₹13,89,154 ನಿವ್ವಳ ಲಾಭ ದಾಖಲಿಸಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು. ವರದಿ ವರ್ಷದಲ್ಲಿ ಬ್ಯಾಂಕ್ ಶೇಕಡಾ 82.24ರಷ್ಟು ಸಾಲ ವಸೂಲಾತಿ ಸಾಧನೆ ಮಾಡಿದ್ದು, ಸರ್ಕಾರದಿಂದ ಬರಬೇಕಾದ ಬಡ್ಡಿ ಸಹಾಯಧನಗಳ ವಿತರಣೆ ಹಾಗೂ ಹಂಚಿಕೆಯಾದ ಸಾಲಗಳ ಪೂರ್ಣ ವಿವರವನ್ನು ಸದಸ್ಯರ ಮುಂದಿಡಲಾಯಿತು.

ಮಹಾಸಭೆಯಲ್ಲಿ ಬ್ಯಾಂಕಿನ ನಿವ್ವಳ ಲಾಭಾಂಶವನ್ನು ಕ್ಷೇಮ ನಿಧಿ, ಸಹಕಾರ ಶಿಕ್ಷಣ ನಿಧಿ, ಕಟ್ಟಡ ನಿಧಿ, ಸಿಬ್ಬಂದಿ ಬೋನಸ್ ಹಾಗೂ ಸದಸ್ಯರಿಗೆ ಶೇ.2ರಷ್ಟು ಡಿವಿಡೆಂಡ್ ಸೇರಿದಂತೆ ನಿಯಮಾನುಸಾರ ವಿವಿಧ ವಲಯಗಳಿಗೆ ಹಂಚಿಕೆ ಮಾಡಲು ಅನುಮೋದನೆ ನೀಡಲಾಯಿತು. ಇದೇ ವೇಳೆ ಕಸ್ತೂರಿ ರಂಗನ್ ವರದಿ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ಸಭೆಯಲ್ಲಿ ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಅವಿನಾಶ್ ಕುರುಂಜಿ, ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್, ವ್ಯವಸ್ಥಾಪಕಿ ಉಷಾ ಸುವರ್ಣ, ನಿರ್ದೇಶಕರು ಹಾಗೂ ಬ್ಯಾಂಕಿನ ಸದಸ್ಯರು ಉಪಸ್ಥಿತರಿದ್ದರು.
















































