ನವದೆಹಲಿ: ಕಾಶ್ಮೀರದ ಪಹಲ್ಲಾಮ್ ನಲ್ಲಿ ಉ*ಗ್ರರು 26ಮಂದಿಯನ್ನು ಹ*ತ್ಯೆಗೈದ ಬೆನ್ನಲ್ಲೇ ಭಾರತ ಸಿಂಧು ಒಪ್ಪಂದ ಅಮಾನತು, ಸಾರ್ಕ್ ವೀಸಾ ರದ್ದು, ಅಟ್ಟಾರಿ ಗಡಿ ಬಂದ್ ನಂತಹ ಕಠಿನ ರಾಜತಾಂತ್ರಿಕ ಕ್ರಮಗಳನ್ನು ಘೋಷಿಸಿದೆ. ಏತನ್ಮಧ್ಯೆ ದಾಳಿಗೆ ಸಂಬಂಧಿಸಿದಂತೆ ಗುರುವಾರ (ಏ.24) ರಾತ್ರಿ ನಡೆದ ಸರ್ವಪಕ್ಷ ಸಭೆಯಲ್ಲಿ ವಿಪಕ್ಷಗಳು ದಾಳಿ ಸಂದರ್ಭದಲ್ಲಿ ಯಾಕೆ ಸೈನಿಕರು ಇರಲಿಲ್ಲ ಎಂಬುದಾಗಿ ಪ್ರಶ್ನಿಸಿದ್ದು, ಅದಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡಿದೆ.ಪಹಲ್ಗಾಮ್ ನ ಬೈಸರನ್ ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ ಸಂದರ್ಭದಲ್ಲಿ ಭದ್ರತಾ ಪಡೆಗಳ ಗೈರು ಹಾಜರಿ ಬಗ್ಗೆ ವಿಪಕ್ಷದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಮತ್ತು ಆಮ್ ಆದ್ಮ ಪಕ್ಷದ ಸಂಜಯ್ ಸಿಂಗ್ ಸೇರಿದಂತೆ ಮುಂತಾದವರು ಪ್ರಶ್ನಿಸಿದ್ದರು ಎಂದು ವರದಿ ತಿಳಿಸಿದೆ.ಮಿನಿ ಸ್ವಿಟ್ಟರ್ ಲ್ಯಾಂಡ್ ಎಂದೇ ಜನಪ್ರಿಯತೆ ಗಳಿಸಿರುವ ಪಹಲ್ಗಾಮ್ ನ ಬೈಸರನ್ ಪ್ರದೇಶದಲ್ಲಿ ಭದ್ರತಾ ಸಿಬಂದಿಗಳನ್ನು ಯಾಕೆ ನಿಯೋಜಿಸಿರಲಿಲ್ಲ ಎಂದು ವಿಪಕ್ಷಗಳು ಸರ್ವಪಕ್ಷ ಸಭೆಯಲ್ಲಿ ಪ್ರಶ್ನಿಸಿದ್ದವು.
ಕೇಂದ್ರ ಸರ್ಕಾರ ನೀಡಿದ್ದ ಉತ್ತರವೇನು?
ಜೂನ್ ನಲ್ಲಿ ಪ್ರಾರಂಭವಾಗುವ ವಾರ್ಷಿಕ ಅಮರನಾಥ್ ಯಾತ್ರೆಗೆ ಮುಂಚಿತವಾಗಿ ಬೈಸರನ್ ಪ್ರದೇಶದಲ್ಲಿ ವಾಡಿಕೆಯಂತೆ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಯಾತ್ರೆಯ ಈ ಮಾರ್ಗವನ್ನು ಅಧಿಕೃತವಾಗಿ ತೆರೆದ ನಂತರ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಭದ್ರತಾ ಪಡೆಗಳನ್ನು ಬೈಸರನ್ ಪ್ರದೇಶದಲ್ಲಿ ನಿಯೋಜಿಸಲಾಗುತ್ತದೆ. ಅಮರನಾಥ್ ಗುಹಾಂತರ ದೇವಾಲಯಕ್ಕೆ ತೆರಳುವ ಮಾರ್ಗದಲ್ಲೇ ಬೈಸರನ್ ಪ್ರದೇಶವಿದೆ.ಕೇಂದ್ರದ ಮಾಹಿತಿ ಪ್ರಕಾರ, ಅಮರನಾಥ್ ಯಾತ್ರೆಗೂ ಮುನ್ನವೇ ಸ್ಥಳೀಯ ಪ್ರವಾಸಿ ಏಜೆಂಟರು ಏಪ್ರಿಲ್ 20ರಿಂದಲೇ ಪ್ರವಾಸಿಗರನ್ನು ಬೈಸರನ್ ಪ್ರದೇಶಕ್ಕೆ ಕರೆದೊಯ್ದಿರುವುದಾಗಿ ಆರೋಪಿಸಿದೆ. ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಮುಂಚಿತವಾಗಿ ಭೇಟಿ ನೀಡುತ್ತಿರುವ ಬಗ್ಗೆ ಸ್ಥಳೀಯಾಡಳಿತ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲವಾಗಿತ್ತು. ಇದರಿಂದಾಗಿ ಭದ್ರತಾ ಸಿಬಂದಿಯನ್ನು ನಿಯೋಜಿಸಲು ಸಾಧ್ಯವಾಗಿಲ್ಲ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದ್ದರು.
ಸಿಂಧು ಒಪ್ಪಂದ ಅಮಾನತು ಯಾಕೆ?
ಒಂದು ವೇಳೆ ಭಾರತ ನೀರಿನ ಸಂಗ್ರಹ ಸಾಮರ್ಥ್ಯದ ಕೊರತೆ ಎದುರಿಸುತ್ತಿದ್ದರೆ ಕೇಂದ್ರ ಸರ್ಕಾರ ಸಿಂಧು ಒಪ್ಪಂದ ಅಮಾನತು ನಿರ್ಧಾರ ಕೈಗೊಂಡಿದ್ದೇಕೆ ಎಂದು ವಿಪಕ್ಷಗಳು ಪ್ರಶ್ನಿಸಿದ್ದವು.ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, “ ಇದೊಂದು ತಕ್ಷಣದ ನಿರ್ಧಾರವಲ್ಲ. ಸಾಂಕೇತಿಕ ಹಾಗೂ ಕಾರ್ಯತಂತ್ರದ ಭಾಗವಾಗಿದೆ. ಸಿಂಧು ಒಪ್ಪಂದದ ಅಮಾನತು ಕೇಂದ್ರ ಸರ್ಕಾರ ತೆಗೆದುಕೊಂಡ ಕಠಿನ ನಿರ್ಧಾರದ ಉದ್ದೇಶವನ್ನು ತೋರಿಸುತ್ತದೆ. ಅಲ್ಲದೇ ಇದರಿಂದ ಕಠಿನ ಸಂದೇಶ ರವಾನಿಸಿದಂತಾಗಿದೆ. ಇದರೊಂದಿಗೆ ಭವಿಷ್ಯದಲ್ಲಿನ ಸರ್ಕಾರದ ದೃಢ ನಿರ್ಧಾರ ತಳೆದಿರುವುದನ್ನು ತೋರ್ಪಡಿಸಿದಂತಾಗಿದೆ ಎಂದು ತಿಳಿಸಿದ್ದಾರೆ.ದಾಳಿ ನಡೆದ ಪಹಲ್ಲಾಮ್ ಪ್ರದೇಶದಲ್ಲಿನ ಪ್ರಸ್ತುತ ಭದ್ರತೆಯ ಕುರಿತು ಸಭೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿವರ ನೀಡಿದ್ದರು. ಪಹಲ್ಲಾಮ್ ದಾಳಿ ಹಾಗೂ ಗುಪ್ತಚರ ದಳದ ಮಾಹಿತಿ ಕುರಿತು ಗುಪ್ತಚರ ದಳದ ನಿರ್ದೇಶಕ ತಪನ್ ಡೇಕಾ ಮಾಹಿತಿ ನೀಡಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಎನ್ ಸಿಪಿಯ ಸುಪ್ರಿಯಾ ಸುಳೆ, ಬಿಜೆಡಿಯ ಸಸ್ಮಿತ್ ಪಾತ್ರಾ, ಎನ್ ಸಿಪಿಯ ಪ್ರಫುಲ್ ಪಟೇಲ್, ಶ್ರೀಕಾಂತ್ ಶಿಂಧೆ (ಶಿವಸೇನಾ), ಆರ್ ಜೆಡಿಯ ಪ್ರೇಮ್ ಚಂದ್ ಗುಪ್ತಾ, ಡಿಎಂಕೆಯ ತಿರುಚ್ಚಿ ಶಿವ ಸೇರಿಂತೆ ಹಲವು ಮುಖಂಡರು ಭಾಗವಹಿಸಿದ್ದರು.













































