ಮಂಗಳೂರು ರಾಷ್ಟ್ರೀಯಹೆದ್ದಾರಿ ಬದಿಯಲ್ಲಿ ಅಂಗಡಿಗಳಿರುವ ಕಾರಣದಿಂದಲೂ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಏಕಾಏಕಿ ವಾಹನ ನಿಲ್ಲಿಸುವ ಕಾರಣದಿಂದ ಅಪಘಾತಗಳಾಗುತ್ತದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಬದಿಯಲ್ಲಿರುವ ಅಂಗಡಿಗಳನ್ನು ಸರ್ವೇ ನಡೆಸಬೇಕು. ನಿಯವು ಮೀರಿ ವ್ಯಾಪಾರ ನಡೆಸುವುದನ್ನು ತೆರವುಗೊಳಿಸಬೇಕು. ಪೊಲೀಸ್ ಇಲಾಖೆಯ ಸಹಕಾರ ಪಡೆದುಕೊಂಡು ಪ್ರಾಧಿಕಾರ ಮುಲಾಜಿಲ್ಲದೆ ತೆರವುಗೊಳಿಸಬೇಕು. ಎಂದು ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ ಸೂಚಿಸಿದರು.
ನಗರದ ಸರ್ಕಿಟ್ ಹೌಸ್ ನಲ್ಲಿ ರಾಷ್ಟ್ರೀ ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಂಸದರು ಸಭೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಂಡಗುಂಡಿಗಳನ್ನು ತ್ವರಿತ ಗತಿಯಲ್ಲಿ ಮುಚ್ಚಬೇಕು. ಈ ವೇಳೆ ವಾಹನ ಸಂಚಾರಕ್ಕೆ ಸಮಸ್ಯೆಯಾಗದಂತೆ ಸಂಬಂಧಪಟ್ಟವರು ಕ್ರಮವಹಿಸಬೇಕು ಎಂದು ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರಿಗೆ ಸಂಸದ ಕ್ಯಾ ಬ್ರಿಜೇಶ್ ಚೌಟ ಸೂಚನೆ ನೀಡಿದರು.
ಸುರತ್ಕಲ್-ಬಿಸಿರೋಡ್ ಬೈಪಾಸ್ ರಸ್ತೆ ನಿರ್ಮಾಣಕ್ಕೆಅನುದಾನ:
ರಾಷ್ಟ್ರೀಯ ಹೆದ್ದಾರಿಯ ಸುರತ್ಕಲ್-ಬಿ.ಸಿ.ರೋಡು ನಡುವೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರದಿಂದ ಅನುಮೋದನೆ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದಂತೆ ಯೋಜನಾ ವರದಿ(ಡಿಪಿಆರ್) ಸಿದ್ಧಗೊಳಿಸಲಾಗುತ್ತಿದ್ದು,ಶೀಘ್ರವೇ ವರದಿ ಪೂರ್ಣಗೊಳ್ಳಲಿದೆ.ಜತೆಗೆ ಸುರತ್ಕಲ್ ನಿಂದ ಬಿ.ಸಿ.ರೋಡ್ರೆಗೆ ಪ್ರಸ್ತುತ ಇರುವ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಜತೆಗೆ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಚಿವರಿಗೆ ಮನವಿ ಮಾಡಲಾಗಿದೆ. ಅದಕ್ಕೂ ಕೂಡ ಸಚಿವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು, ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದು ಸಂಸದ ಕ್ಯಾ|ಬ್ರಿಜೇಶ್ ಚೌಟ ತಿಳಿಸಿದರು. ಸುರತ್ಕಲ್-ಬಿ.ಸಿ.ರೋಡು ಹೆದ್ದಾರಿ ಸಮಸ್ಯೆಯಿಂದ ಕೂಡಿದೆ. ಇವುಗಳ ನಿವಾರಣೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಘಟಿತವಾಗಿ ಶ್ರಮಿಸಬೇಕು.ಬ್ಲಾಕ್ ಸ್ಟಾಟ್ಗಳನ್ನು ಗುರುತಿಸುವುದು, ಸರ್ವಿಸ್ ರಸ್ತೆ, ಚರಂಡಿ ವ್ಯವಸ್ಥೆ, ಇತ್ಯಾದಿಗಳ ಬಗ್ಗೆ ಮೂರು ಇಲಾಖೆಗಳು ಚರ್ಚೆ ನಡೆಸಿ ಸಮರ್ಪಕವಾಗಿ ಯೋಜನಾ ವರದಿ ಸಿದ್ಧಪಡಿಸಬೇಕು. ಅಗತ್ಯ ಇರುವಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ, ಜಂಕ್ಷನ್ ಗಳ ಅಭಿವೃದ್ಧಿ, ಹೆದ್ದಾರಿ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗೆ ಕ್ರಮ ವಹಿಸಬೇಕು. ಹೆದ್ದಾರಿ ಪ್ರಾಧಿಕಾರ ತ್ವರಿತಗತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮವಹಿಸಬೇಕು ಎಂದು ಸಂಸದರು ಸೂಚಿಸಿದರು.
ಕಾಂಕ್ರೀಟ್ ರಸ್ತೆ ನಿರ್ಮಾಣವೊಂದೇ ಪರಿಹಾರ: ಕಳೆದ ಹಲವು ವರ್ಷಗಳಿಂದ ಹೆದ್ದಾರಿ ದುರಸ್ತಿಗೊಳಿಸಿದರೂ ಹೆದ್ದಾರಿಯಲ್ಲಿ ಹೊಂಡಗಳು ನಿರ್ಮಾಣವಾಗುತ್ತಿವೆ. ಕಾಂಕ್ರೀಟ್ ರಸ್ತೆ ನಿರ್ಮಾಣವೊಂದೇ ಇದಕ್ಕೆ ಪರಿಹಾರ ಮೊದಲು ಸಂಚಾರಕ್ಕೆ ಪಯಾ ಪರ್ಯಾಯ ಕೈಗೊಂಡು ಬಳಿಕ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ನಂತೂರು ಬಳಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಅ.15ಕ್ಕೆ ಗಡುವು ನೀಡಲಾಗಿದೆ. ತಪ್ಪಿದಲ್ಲಿ ಟೆಂಡರ್ ಬದಲಾಯಿಸುವ ಬಗ್ಗೆ ಯೋಚಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅಝಿ ತಿಳಿಸಿದರು.
ನಗರದೊಳಗಿನ ರಸ್ತೆಗಳನ್ನು ತತ್ಕ್ಷಣ ದುರಸ್ತಿಗೊಳಿಸಿ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರು ನಗರದೊಳಗಿನ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯವನ್ನು ಪಾಲಿಕೆ ತತ್ಕ್ಷಣ ಕೈಗೊಳ್ಳಬೇಕು. ನವರಾತ್ರಿ ಸಂದರ್ಭದಲ್ಲಿ ದಸರಾ ಮೆರವಣಿಗೆ ನಡೆಯುವ ವೇಳೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತ ಕ್ರಮವಹಿಸಬೇಕು. ಅನುದಾನದ ಸಮಸ್ಯೆ ಇದ್ದು, ಪಾಲಿಕೆ ಸಮರ್ಪಕ ಯೋಜನ ರೂಪಿಸಿಕೊಂಡು ಕೆಲಸ ಮಾಡಬೇಕು.ಪಂಪ್ವೆಲ್-ಕರಾವಳಿ ವೃತ್ತ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, 3 ವರ್ಷದ ಹಿಂದೆ ಟೆಂಡರ್ ಆಗಿದೆ. ಇದನ್ನು ಆದ್ಯತೆಯ ಮೇರೆಹ ದುರಸ್ತಿಗೊಳಿಸಬೇಕಿದೆ ಎಂದರು.ಶಾಸಕ ಡಾ.ವೈ.ಭರತ್ ಶೆಟ್ಟಿ, ಸಂಚಾರಿ ವಿಭಾಗದ ಎಸಿಪಿ ನಜ್ಞಾ ಫರೂಕಿ, ಸಂಚಾ ಉತ್ತರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಮುಗ್ಗಳ್ಳಿ, ದಕ್ಷಿಣ ಠಾಣೆ ಇನ್ಸ್ ಪೆಕ್ಟದ ಕೃಷ್ಣಾನಂದ, ಪಾಲಿಕೆ ಎಂಜಿನಿಯರ್ ನರೇಶ್ ಶೆಣೈ ಪ್ರಮುಖರಾದ ಪ್ರೇಮಾನಂದ ಶೆಟ್ಟಿ ಪ್ರವೀಣ್ ಮತ್ತಿತರರು ಇದ್ದರು.











































